
ಬೆಂಗಳೂರು (ಏ. 05): ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಇಂದು ಡಬಲ್ ಹೆಡ್ಡರ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹಾಗೂ ಲಕ್ನೋ ಮುಖಾಮುಖಿ ಆಗುತ್ತಿದ್ದರೆ, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣವು ಈ ಪಂದ್ಯವನ್ನು ಆಯೋಜಿಸಲಿದೆ. ಆರ್ಸಿಬಿ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಆರಂಭಿಸಿದರೆ, ಸಿಎಸ್ಕೆ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿದೆ. ಚೆನ್ನೈಗೆ ಗೆಲುವು ಅನಿವಾರ್ಯವಾದರೆ ಇತ್ತ ಬೆಂಗಳೂರು ತವರಿನಲ್ಲಿ ಜಯದ ನಿರೀಕ್ಷೆ ಹೊಂದಿದೆ.
ಎರಡೂ ತಂಡಗಳ ನಡುವೆ ಒಟ್ಟು 35 ಪಂದ್ಯಗಳು ನಡೆದಿದ್ದು, ಅದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 21 ಪಂದ್ಯಗಳನ್ನು ಗೆದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಪಂದ್ಯಗಳನ್ನು ಗೆದ್ದರೆ, ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಪೈಪೋಟಿಯಲ್ಲಿ ಸಿಎಸ್ಕೆ ಮೇಲುಗೈ ಸಾಧಿಸಿದೆ. ಆದಾಗ್ಯೂ, ಕಳೆದ ಕೆಲವು ಋತುಗಳಲ್ಲಿ ಚಿತ್ರಣ ಬದಲಾಗಿದೆ. ಇತ್ತೀಚಿನ 5 ಪಂದ್ಯಗಳಲ್ಲಿ, ಆರ್ಸಿಬಿ 3 ಗೆಲುವುಗಳನ್ನು ದಾಖಲಿಸುವ ಮೂಲಕ ಸಿಎಸ್ಕೆಗೆ ಕಠಿಣ ಹೋರಾಟ ನೀಡಿದೆ.
ಅಂಕಿಅಂಶಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹೆಡ್-ಟು-ಹೆಡ್ ದಾಖಲೆಯಲ್ಲಿ ಸ್ಪಷ್ಟವಾಗಿ ಪ್ರಾಬಲ್ಯ ಹೊಂದಿದೆ, ಆದರೆ ಅವರ ಇತ್ತೀಚಿನ ಪ್ರದರ್ಶನಗಳನ್ನು ಪರಿಗಣಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಅಂತರವನ್ನು ಸದ್ಯದಲ್ಲೇ ಕಡಿಮೆ ಮಾಡಬಹುದು. ದುರ್ಬಲ ಬೌಲಿಂಗ್ ವಿಭಾಗವು ಸಿಎಸ್ಕೆಗೆ ಕಳವಳಕಾರಿಯಾಗಿದೆ. ಆದರೆ, ಗೆಲುವು ಅನಿವಾರ್ಯ ಆಗಿರುವುದರಿಂದ ಬೆಂಗಳೂರಿನಲ್ಲಿ ಇಂದು ರಣರೋಚಕ ಕದನ ನಿರೀಕ್ಷಿಸಲಾಗಿದೆ.
IPL 2026: ನಾಯಕತ್ವದಿಂದ ಅಜಿಂಕ್ಯಾ ರಹಾನೆ ಹೊರಕ್ಕೆ?, ಕೆಕೆಆರ್ನಿಂದ ಶಾಕಿಂಗ್ ನಿರ್ಧಾರ?
ಆರ್ಸಿಬಿ-ಸಿಎಸ್ಕೆ ಹೈವೋಲ್ಟೇಕ್ ಕದನಕ್ಕೆ ಮಳೆ ಅಡ್ಡಿ:
ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣವನ್ನು ಬ್ಯಾಟಿಂಗ್ ಸ್ನೇಹಿ ಸ್ಥಳವೆಂದು ಪರಿಗಣಿಸಲಾಗಿದೆ. ಸಣ್ಣ ಬೌಂಡರಿಗಳಿರುವ ಕಾರಣ ರನ್ ಮಳೆ ನಿರೀಕ್ಷಿಸಲಾಗಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ನ ಸರಾಸರಿ ಸ್ಕೋರ್ 141 ಆಗಿದ್ದರೆ, ಎರಡನೇ ಇನ್ನಿಂಗ್ಸ್ನ ಸರಾಸರಿ 136 ಆಗಿದೆ. ಬೆಂಗಳೂರಿನಲ್ಲಿ ಭಾನುವಾರ ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ ಎಂದು ಅಕ್ಯೂವೆದರ್ ವರದಿ ಮಾಡಿದೆ. ಮೈದಾನದ ಸುತ್ತಲೂ ಮೋಡಗಳು ಆವರಿಸುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಡಿಮೆ ಎನ್ನಬಹುದು.
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಹೇಗಿದೆ?
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಸಮತಟ್ಟಾಗಿರುತ್ತದೆ, ಇದು ಬ್ಯಾಟಿಂಗ್ ಸ್ನೇಹಿ. ಚೆಂಡು ಉತ್ತಮ ಬೌನ್ಸ್ ಮತ್ತು ವೇಗದೊಂದಿಗೆ ಬ್ಯಾಟ್ಗೆ ಚೆನ್ನಾಗಿ ಬರುತ್ತದೆ. ಮೈದಾನವು ತುಂಬಾ ಚಿಕ್ಕದಾಗಿರುವುದರ ಜೊತೆಗೆ ಔಟ್ಫೀಲ್ಡ್ ವೇಗವಾಗಿರುತ್ತದೆ. ಹೀಗಾಗಿ ಈ ಮೈದಾನದಲ್ಲಿ ರನ್ ಮಳೆ ಹರಿಯುವುದು ಖಚಿತ. ಆದಾಗ್ಯೂ, ಈ ಮೈದಾನದಲ್ಲಿ ಇಬ್ಬನಿ ಫಲಿತಾಂಶದ ಮೇಲೆ ಪ್ರಮುಖ ಪಾತ್ರವಹಿಸುತ್ತದೆ. ಸಂಜೆಯ ಇಬ್ಬನಿಯು ಚೇಸಿಂಗ್ ತಂಡಕ್ಕೆ ಅನುಕೂಲಕರವಾಗಿರುತ್ತದೆ, ಆದ್ದರಿಂದ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ