
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ… ಮತ್ತೆ ಯುಗಾದಿ ಬಂದಿದೆ.. ಹೊಸ ಆರಂಭ, ಹೊಸ ವರ್ಷ, ಶುದ್ಧತೆ, ಹೊಸ ನಿರೀಕ್ಷೆ ಮತ್ತು ಸಮೃದ್ಧಿಯ ಸಂಕೇತವಾಗಿ ಯುಗಾದಿ (Ugadi) ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂಗಳ ಈ ಪವಿತ್ರ ಹಬ್ಬದ ದಿನ ದೇವರ ಪೂಜಾ ಕಾರ್ಯದ ಜೊತೆಗೆ ಮನೆಮಂದಿಯೆಲ್ಲಾ ಬೇವು ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸ್ನೇಹಿತರು, ಸಂಬಂಧಿಕರಿಗೂ ಬೇವು-ಬೆಲ್ಲವನ್ನು ಹಂಚುತ್ತಾರೆ. ಹೌದು ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ ಸವಿಯುವ ಹಾಗೆ ಯುಗಾದಿ ಹಬ್ಬದಂದು ಬೇವು ಬೆಲ್ಲ ಸೇವಿಸುವ ಆಚರಣೆ ರೂಢಿಯಲ್ಲಿದೆ. ಇದು ಕೇವಲ ಆಚರಣೆಯಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು-ಬೆಲ್ಲವನ್ನು ಸವಿಯುವುದರ ಹಿಂದಿರುವ ವೈಜ್ಞಾನಿಕ ಕಾರಣವೇನು ಎಂಬುದನ್ನು ತಿಳಿಯೋಣ ಬನ್ನಿ.
ಬೇವು-ಬೆಲ್ಲದ ಆಧ್ಯಾತ್ಮಿಕ ಮಹತ್ವವೇನು?
ನೋವು-ನಲಿವನ್ನು ಸಂಕೇತಿಸುತ್ತದೆ: ಕಹಿ ಬೇವು ಮತ್ತು ಸಿಹಿ ಬೆಲ್ಲವು ಜೀವನದ ದ್ವಂದ್ವ ಸ್ವಭಾವವನ್ನು ಸಂಕೇತಿಸುತ್ತದೆ. ಸಂತೋಷ ಮತ್ತು ದುಃಖ, ಸವಾಲುಗಳು ಮತ್ತು ಯಶಸ್ಸು ಎಲ್ಲವನ್ನು ಬೇವು ಬೆಲ್ಲದಂತೆ ಸಮಾನವಾಗಿ ಸ್ವೀಕರಿಸಬೇಕು ಜೀವನವು ಕಹಿ ಮತ್ತು ಸಿಹಿ ಅನುಭವಗಳ ಮಿಶ್ರಣವಾಗಿದ್ದು, ಈ ಎರಡನ್ನೂ ಸಮಾನವಾಗಿ ಸ್ವೀಕರಿಸುವುದರಿಂದ ಜೀವನವು ಸಂತೋಷದಿಂದ ಸಾಗುತ್ತದೆ ಎಂಬುದನ್ನು ಸಂಕೇತಿಸುತ್ತದೆ.
ಶುಭ ಆರಂಭದ ಸಂಕೇತ: ಹಿಂದೂ ಸಂಪ್ರದಾಯದಲ್ಲಿ, ಬೇವನ್ನು ದೈವಿಕ ಗುಣಗಳನ್ನು ಹೊಂದಿರುವ ಪವಿತ್ರ ಮರವೆಂದು ಪರಿಗಣಿಸಲಾಗುತ್ತದೆ. ಇದನ್ನು ಬೆಲ್ಲದೊಂದಿಗೆ ಪ್ರಸಾದವಾಗಿ ಅರ್ಪಿಸುವುದು ಶುದ್ಧೀಕರಣ ಮತ್ತು ಹೊಸ ವರ್ಷದ ಆಶೀರ್ವಾದದ ಆರಂಭವನ್ನು ಸೂಚಿಸುತ್ತದೆ. ಇದು ನಕಾರಾತ್ಮಕತೆಯನ್ನು ಶುದ್ಧೀಕರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ, ಮುಂಬರುವ ವರ್ಷವನ್ನು ಸಮೃದ್ಧಗೊಳಿಸುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಹೊಸ ವರ್ಷವಾದ ಯುಗಾದಿ ಹಬ್ಬದ ದಿನ ಬೇವು ಬೆಲ್ಲವನ್ನು ಸ್ವೀಕರಿಸಲಾಗುತ್ತದೆ.
ಬೇವು ಬೆಲ್ಲದ ಸೇವನೆಯ ವೈಜ್ಞಾನಿಕ ಮಹತ್ವವೇನು?
ಯುಗಾದಿ ಹಬ್ಬದ ದಿನದಿಂದ ವಸಂತ ಕಾಲ ಆರಂಭವಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಪ್ರಖರತೆ ಹೆಚ್ಚಾದಂತೆ ವಾತಾವರಣವು ಒಣಗಿ, ಬಿಸಿಲಿನಿಂದ ಕೂಡಿ, ಬೆಚ್ಚಗಾಗುತ್ತದೆ ಮತ್ತು ಸೂರ್ಯನ ಶಾಖದ ಪ್ರಭಾವದಿಂದಾಗಿ ದೇಹದಲ್ಲಿ ಪಿತ್ತರದ ಅಂಶವೂ ಹೆಚ್ಚಾಗುತ್ತದೆ. ಇದರಿಂದಾಗಿ ಹೊಟ್ಟೆ ಸಂಬಂಧಿ ಕಾಯಿಲೆಗಳು, ಬಾಯಿ ಹುಣ್ಣು, ವಾಂತಿ, ಎದೆಯುರಿ, ಅತಿಯಾದ ಬೆವರುವಿಕೆ, ತುರಿಕೆ ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗಳನ್ನು ತಡೆಗಟ್ಟಲು, ಅತಿಯಾದ ಪಿತ್ತರಸದ ಅಂಶವನ್ನು ಕಡಿಮೆ ಮಾಡಲು ಮತ್ತು ರೋಧನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನು ಸೇವನೆ ಮಾಡಲಾಗುತ್ತದೆ.
ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?
ಬೇವು-ಬೆಲ್ಲದ ಆರೋಗ್ಯ ಪ್ರಯೋಜನಗಳೇನು?
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬೇವು-ಬೆಲ್ಲದ ಮಿಶ್ರಣವು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ದೇಹವನ್ನು ತಂಪಾಗಿಸುತ್ತದೆ: ಕಹಿಯಾದ ಬೇವನ್ನು ಸಿಹಿಯಾದ ಬೆಲ್ಲದೊಂದಿಗೆ ಸೇವಿಸಿದಾಗ, ದೇಹದಲ್ಲಿನ ಪಿತ್ತರಸ ಅಂಶವು ಕಡಿಮೆಯಾಗುತ್ತದೆ ಮತ್ತು ಇದು ದೇಹವನ್ನು ತಂಪಾಗಿಸುತ್ತದೆ.
ಬೇವು ದೇಹವನ್ನು ನಿರ್ವಿಷಗೊಳಿಸುತ್ತದೆ: ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ವಿಷವನ್ನು ತೆಗೆದುಹಾಕುತ್ತದೆ, ಚರ್ಮ ಮತ್ತು ಜೀರ್ಣಕ್ರಿಯೆಯ ಆರೋಗ್ಯವನ್ನು ಉತ್ತೇಜಿಸುತ್ತದೆ.
ಬೇವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ: ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ.
ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಬೆಲ್ಲ ನೈಸರ್ಗಿಕ ಜೀರ್ಣಕಾರಿ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ, ಆಮ್ಲೀಯತೆ ಮತ್ತು ಉಬ್ಬುವಿಕೆಯನ್ನು ತಡೆಯುತ್ತದೆ.
ಬೆಲ್ಲ ಕಬ್ಬಿಣದಿಂದ ಸಮೃದ್ಧವಾಗಿದೆ: ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಬೆಲ್ಲ ತ್ವರಿತ ಶಕ್ತಿಯನ್ನು ಒದಗಿಸುತ್ತದೆ: ಬೆಲ್ಲವು ನೈಸರ್ಗಿಕ ಶಕ್ತಿಯ ಮೂಲವಾಗಿದ್ದು, ಇದು ಬೇಸಿಗೆಯಲ್ಲಿ ದೇಹ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಗಾಯಗಳನ್ನು ಗುಣಪಡಿಸುತ್ತದೆ: ಬೇವು ಬೆಲ್ಲದ ಮಿಶ್ರಣವು ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವುದರಿಂದ, ಇದು ಗಾಯಗಳನ್ನು ಗುಣಪಡಿಸುತ್ತದೆ ಮತ್ತು ಅವುಗಳನ್ನು ಬೇಗನೆ ಗುಣಪಡಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ