
ಬೆಂಗಳೂರು, ಏಪ್ರಿಲ್ 10: ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಅಜಾಗರೂಕ ಚಾಲನೆ ಕೇಸ್ ಸಂಬಂಧ ಪ್ರಕರಣ ರದ್ದು ಕೋರಿ ಕಾರು ಚಲಾಯಿಸಿದ್ದ ವ್ಯಕ್ತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಮುದಾಯ ಸೇವೆ ಮಾಡುವ ಷರತ್ತಿನಡಿ ಕೇಸ್ ರದ್ದುಪಡಿಸುವುದಾಗಿ ಮೌಖಿಕವಾಗಿ ಸೂಚಿಸಿದೆ. ಬಿ.ಆರ್.ಚಿರಂತ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಪಶ್ಚಾತ್ತಾಪ ರೂಪದಲ್ಲಿ ಸಮುದಾಯ ಸೇವೆ ಮಾಡುವುದಾಗಿ ವಕೀಲರ ಪ್ರಸ್ತಾವಿಸಿದ್ದರು. ಹೊಸ ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂದು ವಾದಿಸಿದ್ದರು.
ಅರ್ಜಿದಾರರ ಪರ ವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಲ್ಯಾಂಬೋರ್ಗಿನಿಯಲ್ಲೇ ತೆರಳಿ ರಸ್ತೆ ಕ್ಲೀನ್ ಮಾಡಿ ಬರ್ತೀರಾ? ಎಂದು ಪ್ರಶ್ನಿಸಿದೆ. ಈ ವೇಳೆ ಟ್ರಾಫಿಕ್ ಸಿಗ್ನಲ್ ಬಗ್ಗೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದಾಗಿ ಅರ್ಜಿದಾರರ ಪರ ವಕೀಲ ರಜತ್ರಿಂದ ಹೈಕೋರ್ಟ್ಗೆ ತಿಳಿಸಿದ್ದಾರೆ. ಈ ವೇಳೆ ಮರು ಪ್ರಶ್ನೆ ಮಾಡಿರುವ ಪೀಠ, ನಿರ್ಲಕ್ಷ್ಯದಿಂದ ಅಜಾಗರೂಕ ಚಾಲನೆ ಮಾಡಿ ಮಕ್ಕಳಿಗೆ ಪಾಠ ಮಾಡುತ್ತೀರಾ? ನಿಯಮ ಉಲ್ಲಂಘನೆ ಹೇಗೆಂದು ಮಕ್ಕಳು ಕಲಿಯಬೇಕೇ? ಎಂದು ಅರ್ಜಿದಾರರ ಪರ ವಕೀಲರಿಗೆ ಕೇಳಿದೆ.
ಇದನ್ನೂ ಓದಿ: ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ; ವೈರಲ್ ವಿಡಿಯೋ ಆಧರಿಸಿ ಚಾಲಕನ ವಿರುದ್ಧ ಎಫ್ಐಆರ್
ಅಲ್ಲದೆ, ಕೋರ್ಟ್ ಸೂಚಿಸಿದ ಸಮುದಾಯ ಸೇವೆ ಮಾಡಬೇಕೆಂದು ಸೂಚನೆ ನೀಡಿರುವ ಪೀಠ, ಆದೇಶದಲ್ಲಿ ಸೇವೆ ಯಾವುದಿರಬೇಕೆಂದು ತಿಳಿಸುವುದಾಗಿ ಹೇಳಿದೆ. ಅರ್ಜಿದಾರನ ಬಗ್ಗೆ ಅನುಕಂಪ ತೋರಿಸುವಂತೆ ಅವರ ಪರ ವಕೀಲರು ಹೈಕೋರ್ಟ್ನ ಮನವಿ ಮಾಡಿದ್ದು, ಲ್ಯಾಂಬೋರ್ಗಿನಿ ಕಾರು ಅಜಾಗರೂಕ ಚಾಲನೆ ಸಂಬಂಧ ಜನವರಿಯಲ್ಲಿ ಕೆಂಗೇರಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಕಾರನ್ನು ಅತಿವೇಗವಾಗಿ ಲೇನ್ ಬದಲಿಸುತ್ತಾ, ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಮಾನವ ಜೀವಕ್ಕೆ ಅಪಾಯ ಉಂಟು ಮಾಡುವ ರೀತಿಯಲ್ಲಿ ಚಲಾಯಿಸಿರುವುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರಿನ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅಜಾಗರೂಕ ಹಾಗೂ ಅಪಾಯಕಾರಿ ಚಾಲನೆ ಆರೋಪದಲ್ಲಿ ಸ್ವಯಂ ಪ್ರೇರಿತ ಎಫ್ಐಆರ್ ದಾಖಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.