ಕಡಪ, ಏಪ್ರಿಲ್ 20: ಇಂದಿನ ಕಾಲದಲ್ಲಿ ಮನುಷ್ಯನ ಸಹನೆ ಎಷ್ಟು ಕ್ಷೀಣಿಸುತ್ತಿದೆ ಎಂದರೆ, ಮೊಬೈಲ್ ಸಿಗದಿದ್ದಕ್ಕೆ ಅಥವಾ ಟಿವಿ ರಿಮೋಟ್ ಕೈ ತಪ್ಪಿದ್ದಕ್ಕೋ ಪ್ರಾಣ ಬಿಡುವ ಹಂತಕ್ಕೆ ತಲುಪುತ್ತಿದ್ದಾರೆ. ಇಂತಹದ್ದೇ ಒಂದು ವಿಚಿತ್ರ ಹಾಗೂ ಮನಕಲಕುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬಾಲಾಜಿನಗರದಲ್ಲಿ ನಡೆದಿದೆ. ಇದು ಕೇವಲ ಒಂದು ಅಪಘಾತವಲ್ಲ, ಮನುಷ್ಯನ ಹಠಾತ್ ಸಿಟ್ಟು ಮತ್ತು ಮಾನಸಿಕ ಒತ್ತಡ ಒಂದು ಸುಂದರ ಸಂಸಾರವನ್ನು ಹೇಗೆ ಬೀದಿಪಾಲು ಮಾಡುತ್ತದೆ ಎಂಬುದಕ್ಕೆ ಕನ್ನಡಿ.
ವೆಂಕಟ ಸುಬ್ಬಯ್ಯ (53) ಅವರು ಗಲ್ಫ್ ರಾಷ್ಟ್ರಗಳಲ್ಲಿ ವರ್ಷಗಳ ಕಾಲ ಕಷ್ಟಪಟ್ಟು ದುಡಿದು, ಇತ್ತೀಚೆಗಷ್ಟೇ ತಾಯ್ನಾಡಿಗೆ ಮರಳಿದ್ದರು. ತನ್ನ ಪತ್ನಿ ಅನುರಾಧ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಖವಾಗಿ ಬಾಳಬೇಕೆಂಬ ಆಸೆಯಿಂದ ಊರಿನಲ್ಲೇ ಒಂದು ಸಣ್ಣ ಅಂಗಡಿ ಇಟ್ಟುಕೊಂಡಿದ್ದರು. ಆದರೆ, ವಿಧಿಯಾಟ ಬೇರೆಯೇ ಇತ್ತು. ಸಣ್ಣಪುಟ್ಟ ವಿಷಯಗಳಿಗೆ ದಂಪತಿಗಳ ನಡುವೆ ನಡೆಯುತ್ತಿದ್ದ ಜಗಳ ಅಂದು ವಿಕೋಪಕ್ಕೆ ತಿರುಗಿತ್ತು.
ಭಾನುವಾರ ಮನೆಯಲ್ಲಿ ಎಲ್ಲವೂ ಮಾಮೂಲಿಯಾಗಿತ್ತು. ಅನುರಾಧ ಒಲೆಯ ಮೇಲೆ ಹಾಲು ಇಟ್ಟಿದ್ದರು. ಯಾವುದೋ ಕೆಲಸದ ನಡುವೆ ಅವರು ಹಾಲಿನ ಕಡೆಗೆ ಗಮನ ಹರಿಸಲಿಲ್ಲ. ಹಾಲು ಕುದಿದು ಒಲೆಯ ಮೇಲೆ ಚೆಲ್ಲಿತು. ಇದನ್ನು ನೋಡಿದ ವೆಂಕಟ ಸುಬ್ಬಯ್ಯ ಅವರಿಗೆ ಕೋಪ ಬಂದಿತು. ಎಷ್ಟು ಬಾರಿ ಹೇಳಿದರೂ ನಿನಗೆ ಬುದ್ಧಿ ಬರುವುದಿಲ್ಲವೇ ಎಂದು ಕಿರುಚುತ್ತಾ, ಆ ಕ್ಷಣದ ಆವೇಶದಲ್ಲಿ ತನ್ನ ತಲೆಯನ್ನು ತಾನೇ ಗೋಡೆಗೆ ಚಚ್ಚಿಕೊಂಡರು.
ಮತ್ತಷ್ಟು ಓದಿ: ಮಮತೆಯ ಮುಂದೆ ಮಣಿದ ವೈಕಲ್ಯ, ಬಾಯಿಯಿಂದ ಬಟ್ಟೆ ಹೊಲಿಯುತ್ತಾ ಮಕ್ಕಳ ಬಾಳು ಬೆಳಗಿದ ಮಹಿಳೆಯ ಅಪೂರ್ವ ಸಾಹಸ
ಪತಿಯ ಈ ಉಗ್ರ ರೂಪ ಮತ್ತು ರಕ್ತ ನೋಡಿ ಹೆದರಿದ ಅನುರಾಧ, ಪರಿಸ್ಥಿತಿ ತಣ್ಣಗಾಗಲಿ ಎಂದು ಮನೆಯಿಂದ ಹೊರಬಂದು ಕುಳಿತರು. ಪತ್ನಿ ಹೊರಗೆ ಹೋಗಿದ್ದನ್ನು ಕಂಡ ಸುಬ್ಬಯ್ಯ ಅವರ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು.
ಅನುರಾಧ ಹೊರಗೆ ಹೋದ ಕೆಲವೇ ನಿಮಿಷಗಳಲ್ಲಿ, ಮನೆಯೊಳಗೆ ವೆಂಕಟ ಸುಬ್ಬಯ್ಯ ಫ್ಯಾನ್ಗೆ ನೇಣು ಬಿಗಿದುಕೊಂಡರು. ಸ್ವಲ್ಪ ಸಮಯದ ನಂತರ ಅನುರಾಧ ಒಳಗೆ ಹೋದಾಗ ಕಂಡ ದೃಶ್ಯ ಅವರ ಬದುಕನ್ನೇ ಕಸಿದುಕೊಂಡಿತ್ತು. ಕಿರುಚಾಟ ಕೇಳಿ ಓಡಿ ಬಂದ ನೆರೆಹೊರೆಯವರು ಸುಬ್ಬಯ್ಯ ಅವರನ್ನು ಕೆಳಗೆ ಇಳಿಸಿದರೂ ಅಷ್ಟರಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು.
ಒಂದು ಲೀಟರ್ ಹಾಲು ಚೆಲ್ಲಿತು ಎಂಬ ಸಣ್ಣ ಕಾರಣ, ಒಬ್ಬ ವ್ಯಕ್ತಿಯ ಜೀವವನ್ನೇ ಬಲಿಪಡೆದು, ಇಬ್ಬರು ಹೆಣ್ಣು ಮಕ್ಕಳನ್ನು ಅನಾಥರನ್ನಾಗಿ ಮಾಡಿತು.
ಎಸ್ಐ ಮೊಹಮ್ಮದ್ ರಫಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ಘಟನೆ ಸಮಾಜಕ್ಕೆ ದೊಡ್ಡ ಸಂದೇಶ ನೀಡುತ್ತಿದೆ. ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಸೋಲುಗಳು ಅಥವಾ ಅಸಮಾಧಾನಗಳನ್ನು ತಡೆದುಕೊಳ್ಳುವ ಶಕ್ತಿ ನಾವು ಕಳೆದುಕೊಳ್ಳುತ್ತಿದ್ದೇವೆಯೇ? ಕುದಿಯುವ ಹಾಲನ್ನು ಆರಿಸುವ ತಾಳ್ಮೆ ನಮಗಿದ್ದರೆ, ಇಂದು ಒಂದು ಜೀವ ಉಳಿಯುತ್ತಿತ್ತು. ನಿಮ್ಮ ಸಿಟ್ಟು ನಿಮ್ಮ ಕುಟುಂಬದ ಭವಿಷ್ಯಕ್ಕಿಂತ ದೊಡ್ಡದಲ್ಲ ಎಂಬುದು ಪ್ರತಿಯೊಬ್ಬರೂ ನೆನಪಿಡಬೇಕಾದ ಸತ್ಯ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 12:27 pm, Mon, 20 April 26