ಸ್ಟಾರ್ ನಟರುಗಳಿಗೆ ಅಭಿಮಾನಿಗಳು ಇರುವುದು ಸಾಮಾನ್ಯ, ಈ ಅಭಿಮಾನಿಗಳು ಮೆಚ್ಚಿನ ನಟನ ಸಿನಿಮಾ ಬಿಡುಗಡೆ ಆದಾಗ ಕಟೌಟ್ ಕಟ್ಟಿ, ಚಿತ್ರಮಂದಿರಗಳನ್ನು ಸಿಂಗರಿಸಿ ಸಿನಿಮಾ ವೀಕ್ಷಿಸುತ್ತಾರೆ. ಮೆಚ್ಚಿನ ನಟನ ಸಿನಿಮಾ ಸೋಲಲು ಬಿಡುವುದಿಲ್ಲ. ನಟನ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವು ಸೇವಾಕಾರ್ಯಗಳನ್ನು ಮಾಡುತ್ತಾರೆ. ಆದರೆ ಸ್ಟಾರ್ ನಟ ತಮ್ಮ ಅಭಿಮಾನಿಗಳಿಗಾಗಿ ಏನನ್ನೂ ಮಾಡುವುದಿಲ್ಲ. ಆದರೆ ಇದೀಗ ಮೆಗಾಸ್ಟಾರ್ ಚಿರಂಜೀವಿ, ಅಭಿಮಾನಿಗಳಿಗಾಗಿ ಮಹತ್ ಕಾರ್ಯವೊಂದನ್ನು ಮಾಡುತ್ತಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ, ದೇಶದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರಲ್ಲಿ ಒಬ್ಬರು. ಒಂದು ಸಮಯದಲ್ಲಿ ಇಡೀ ದೇಶದಲ್ಲಿ ಅತಿ ಹೆಚ್ಚು ರಿಜಿಸ್ಟರ್ಡ್ ಅಭಿಮಾನಿ ಸಂಘಗಳನ್ನು ಹೊಂದಿದ್ದ ನಟ ಸಹ ಹೌದು. ದಶಕಗಳಿಂದಲೂ ಸಹ ಅಭಿಮಾನಿ ಸಂಘಗಳನ್ನು ಬಳಸಿಕೊಂಡು ಹಲವು ಸೇವಾ ಕಾರ್ಯವನ್ನು ಚಿರಂಜೀವಿ ಮಾಡುತ್ತಾ ಬರುತ್ತಿದ್ದಾರೆ. ಆದರೆ ಈಗ ಚಿರಂಜೀವಿ ಅವರು ತಮ್ಮ ಅಭಿಮಾನಿಗಳ ಋಣ ಸಂದಾಯಕ್ಕೆ ಮುಂದಾಗಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬ ಆಗಸ್ಟ್ 22 ರಂದು ಇದೆ. ಪ್ರತಿ ವರ್ಷದಂತೆ ಆ ದಿನದಂದು ಚಿರಂಜೀವಿ ಅವರ ಅಭಿಮಾನಿಗಳು ಹಲವು ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಆದರೆ ಆ ಹಬ್ಬದ ಸಂತೋಷವನ್ನು ಮತ್ತಷ್ಟು ದ್ವಿಗುಣಗೊಳಿಸುವಂತೆ ತಮ್ಮ ಮೆಗಾ ಅಭಿಮಾನಿಗಳಿಗಾಗಿ ಮೆಗಾಸ್ಟಾರ್ ಒಂದು ಒಳ್ಳೆಯ ಉಡುಗೊರೆಯನ್ನು ನೀಡಲಿದ್ದಾರೆ.
ಇದನ್ನೂ ಓದಿ:ರಾಮ್ ಚರಣ್ ಕಾರಣಕ್ಕೆ ಟ್ರೋಲ್ಗೆ ಒಳಗಾದ ಮೆಗಾಸ್ಟಾರ್ ಚಿರಂಜೀವಿ
ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಮ್ಮ ಮೆಗಾ ಅಭಿಮಾನಿಗಳಿಗಾಗಿ ಚಿರಂಜೀವಿ ಒಂದು ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಗೆ ರೂ. 5 ಲಕ್ಷ ಮೌಲ್ಯದ ವಿಮೆಯನ್ನು ಮಾಡಿಸಿಕೊಡಲಿದ್ದಾರೆ ಮೆಗಾಸ್ಟಾರ್. ಈ ವಿಷಯವನ್ನು ಅಖಿಲ ಭಾರತ ಚಿರಂಜೀವಿ ಯುವತ ಅಧ್ಯಕ್ಷ ರವಣಂ ಸ್ವಾಮಿ ನಾಯ್ಡು ಬಹಿರಂಗಪಡಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳ ಮೂಲಕ ಅವರು ವೀಡಿಯೊ ಒಂದನ್ನು ಬಿಡುಗಡೆ ಮಾಡಿದ್ದಾರೆ.
‘ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಎಲ್ಲಾ ಪ್ರದೇಶಗಳಲ್ಲಿ ಹಿರಿಯ ಅಭಿಮಾನಿಗಳನ್ನು ಗುರುತಿಸಿ ಸನ್ಮಾನಿಸಲು ನಾವು ಬಯಸಿದ್ದೇವೆ. ಹಾಗೆಯೇ ಮೂರು ದಶಕಗಳಿಂದ ಕಷ್ಟಪಟ್ಟು ಕೆಲಸ ಮಾಡಿದ ಹಿರಿಯ ಅಭಿಮಾನಿಗಳು, ಅಂದಿನಿಂದ ಇಂದಿನವರೆಗೂ ಥಿಯೇಟರ್ಗಳ ಬಳಿ ಕಷ್ಟಪಟ್ಟವರು, ಕಟೌಟ್ಗಳನ್ನು ಕಟ್ಟಿ, ಹೂವಿನ ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ, ಸೇವಾ ಕಾರ್ಯಗಳನ್ನು ಮಾಡಿದ ಅನೇಕ ಹಿರಿಯ ಅಭಿಮಾನಿಗಳಿದ್ದಾರೆ. ಈಗ ಅವರೆಲ್ಲರನ್ನೂ ಗುರುತಿಸುವ ಕೆಲಸದಲ್ಲಿದ್ದೇವೆ. ಮೆಗಾಸ್ಟಾರ್ ಅವರ ಹುಟ್ಟುಹಬ್ಬದಂದು ಚಿರಂಜೀವಿ ಅವರ ಹಿರಿಯ ಅಭಿಮಾನಿಗಳನ್ನು ಗುರುತಿಸಿ, ಅಖಿಲ ಭಾರತ ಚಿರಂಜೀವಿ ಸಂಘದ ಪರವಾಗಿ ಅವರೆಲ್ಲರಿಗೂ 5 ಲಕ್ಷ ರೂ.ಗಳ ವಿಮಾ ಪಾಲಿಸಿಯನ್ನು ನೀಡಲು ನಿರ್ಧರಿಸಿದ್ದೇವೆ. ಮೊದಲ ಹಂತವಾಗಿ ಗುಂಟೂರು ಜಿಲ್ಲೆಯಿಂದಲೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ’ ಎಂದು ರವಣಂ ಸ್ವಾಮಿ ನಾಯ್ಡು ತಿಳಿಸಿದ್ದಾರೆ.
ಪ್ರಸ್ತುತ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ. ಇದನ್ನು ನೋಡಿದ ಚಿರಂಜೀವಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಚಲನಚಿತ್ರರಂಗದ ಇತಿಹಾಸದಲ್ಲಿ ಯಾವ ನಟನೂ ಹೀಗೆ ಅಭಿಮಾನಿಗಳಿಗೆ ವಿಮೆ ಮಾಡಿಸಿಲ್ಲ, ಮೆಗಾಸ್ಟಾರ್ ಮಾತ್ರ ಇಂತಹ ಒಳ್ಳೆಯ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ನಟ ಶಿವರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಆರೋಗ್ಯ ಕಾರ್ಡ್ ಮಾಡಿಸಿಕೊಟ್ಟಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ