ಭಾರತ ತಂಡದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತದ ಅನುಭವಿ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ವೈಯಕ್ತಿಕವಾಗಿ ಮೆಸೇಜ್ ಮಾಡಿ ಮಾತನಾಡಿಸುವುದಾಗಿಯೂ ತಿಳಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಇತ್ತೀಚೆಗೆ ಹೆಸರಿಸಿದ ಟಾಪ್-5 ಬೌಲರ್ಗಳು.
ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಭಾರತದ ಅತ್ಯಂತ ಪ್ರತಿಭಾವಂತ ಅಥವಾ ನೆಚ್ಚಿನ 5 ಬೌಲರ್ಗಳನ್ನು ಶ್ರೇಯಾಂಕದ ಆಧಾರದಲ್ಲಿ ಹೆಸರಿಸಲು ಕೇಳಲಾಯಿತು. ವೇಗದ ಬೌಲರ್ಗಳ ಬಗ್ಗೆ ಕೊಂಚ ಹೆಚ್ಚು ಒಲವು ಹೊಂದಿದ್ದ ಅರ್ಷದೀಪ್ , ಆರಂಭದಲ್ಲೇ ಅಗ್ರ ಸ್ಥಾನಗಳನ್ನು ಭರ್ತಿ ಮಾಡಿದರು. ಕೊನೆಗೆ ಉಳಿದ ಏಕೈಕ ಸ್ಥಾನಕ್ಕೆ ಅಶ್ವಿನ್ ಅವರ ಹೆಸರನ್ನು ಇರಿಸಬೇಕಾಯಿತು.
ಅರ್ಷದೀಪ್ ಸಿಂಗ್ರ ಟಾಪ್ 5 ಬೌಲರ್ಗಳು:
- ಭುವನೇಶ್ವರ್ ಕುಮಾರ್: ತಮ್ಮ ವೈಯಕ್ತಿಕ ನೆಚ್ಚಿನ ಬೌಲರ್ ಎಂದು ಮೊದಲ ಸ್ಥಾನ ನೀಡಿದರು.
- ಮೊಹಮ್ಮದ್ ಶಮಿ: ಚೆಂಡನ್ನು ಸೀಮ್ ಮಾಡುವ ಅದ್ಭುತ ಕಲೆಗಾಗಿ ಎರಡನೇ ಸ್ಥಾನ ನೀಡಿದರು.
- ಕುಲ್ದೀಪ್ ಯಾದವ್: ವಿಶಿಷ್ಟ ಎಡಗೈ ಚೈನಾಮನ್ ಶೈಲಿಗಾಗಿ ಮೂರನೇ ಸ್ಥಾನದಲ್ಲಿರಿಸಿದರು.
- ಯುಜ್ವೇಂದ್ರ ಚಹಲ್: ಪಂಜಾಬ್ ದೇಶಿ ತಂಡದ ಆಟಗಾರ ಹಾಗೂ ವಿಕೆಟ್ ಟೇಕರ್ ಆಗಿರುವುದರಿಂದ ನಾಲ್ಕನೇ ಸ್ಥಾನ ನೀಡಿದರು.
- ರವಿಚಂದ್ರನ್ ಅಶ್ವಿನ್: ಕೊನೆಯಲ್ಲಿ ಬೇರೆ ಸ್ಥಾನಗಳಿಲ್ಲದ ಕಾರಣ ಅಶ್ವಿನ್ ಅವರಿಗೆ 5ನೇ ಸ್ಥಾನ ನೀಡಿದ್ದರು.
ಕ್ಷಮೆಯಾಚಿಸಲು ಮುಖ್ಯ ಕಾರಣವೇನು?
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 700ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ದಿಗ್ಗಜ ಆಟಗಾರನನ್ನು ಕೊನೆಯ ಸ್ಥಾನದಲ್ಲಿ ಇರಿಸಿದ್ದನ್ನು ಅರಿತ ಅರ್ಷದೀಪ್ ಸಿಂಗ್ ತಕ್ಷಣವೇ ನಗುತ್ತಾ ಗೌರವಪೂರ್ವಕವಾಗಿ ಕ್ಷಮೆ ಕೇಳಿದರು.
ಇದನ್ನೂ ಓದಿ: ಮಹಿಳಾ ಏಷ್ಯಾಕಪ್ ಟೂರ್ನಿಗೆ ಡೇಟ್ ಫಿಕ್ಸ್..!
ಅಶ್ವಿನ್ ಅವರೊಂದಿಗೆ ತಮಗಿರುವ ವಿಶೇಷ ಬಾಂಧವ್ಯವನ್ನು ನೆನೆದ ಅರ್ಷದೀಪ್ ಸಿಂಗ್, “2019 ರಲ್ಲಿ ನಾನು ಪಂಜಾಬ್ ಕಿಂಗ್ಸ್ ಪರ ಐಪಿಎಲ್ ಪಾದಾರ್ಪಣೆ ಮಾಡಿದಾಗ ಆರ್. ಅಶ್ವಿನ್ ಅವರೇ ನನ್ನ ಮೊದಲ ನಾಯಕರಾಗಿದ್ದರು. ಅಶ್ವಿನ್ ಭಾಯ್ ಅವರನ್ನು ಕೊನೆಯ ಸ್ಥಾನದಲ್ಲಿ ಇರಿಸಲು ನನಗೆ ಇಷ್ಟವಿರಲಿಲ್ಲ. ಆದರೆ ಬೇರೆ ಯಾವುದೇ ಸ್ಥಾನಗಳು ಬಾಕಿ ಇರಲಿಲ್ಲ. ಕ್ಷಮಿಸಿ ಅಶ್ವಿನ್ ಭಾಯ್, ನಾನು ನಿಮಗೆ ವೈಯಕ್ತಿಕವಾಗಿ ಮೆಸೇಜ್ ಮಾಡುತ್ತೇನೆ,” ಎಂದು ಹಾಸ್ಯಭರಿತವಾಗಿ ಹೇಳಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Published On – 11:16 am, Tue, 4 August 26