Headlines

ಆಡಳಿತ ವೈಫಲ್ಯ: ಪ್ರಧಾನಿ ಮೋದಿಯ ಟೀಕಿಸಿದ ಸಿಎಂ ಸಿದ್ದರಾಮಯ್ಯಗೆ ಅಂಕಿಅಂಶ ಸಮೇತ ತಿರುಗೇಟು ಕೊಟ್ಟ ಪ್ರಲ್ಹಾದ್ ಜೋಶಿ – Kannada News | Pralhad Joshi Slams CM Siddaramaiah Over PM Modi’s Bengaluru Speech Criticism; Highlights Karnataka’s Debt Crisis

ಪ್ರಧಾನಿ ಮೋದಿ, ಪ್ರಲ್ಹಾದ್ ಜೋಶಿ ಹಾಗೂ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)Image Credit source: TV9 Network

ಬೆಂಗಳೂರು, ಮೇ 12: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಬೆಂಗಳೂರಿಗೆ ಭೇಟಿ ನೀಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ನಡುವೆ ವಾಕ್ಸಮರ ತಾರಕಕ್ಕೇರಿದೆ. ಪ್ರಧಾನಿ ಮೋದಿ ಭಾಷಣವು ‘ಸುಳ್ಳು ಮತ್ತು ದ್ವೇಷದಿಂದ ಕೂಡಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದರೆ, ಇದಕ್ಕೆ ಪ್ರತಿಯಾಗಿ ಪ್ರಲ್ಹಾದ್ ಜೋಶಿ ಅವರು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪಟ್ಟಿ ಮಾಡುವ ಮೂಲಕ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಜಾಹೀರಾತುಗಳ ಹಿಂದೆ ಅಡಗಿರುವ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಈಗ ಬಯಲಾಗಿದೆ ಎಂದು ಜೋಶಿ ಲೇವಡಿ ಮಾಡಿದ್ದಾರೆ.

ಮುಖ್ಯಾಂಶಗಳು

  • ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ‘ಗ್ಯಾರಂಟಿ ಆಧಾರಿತ ಸಾಲದ ಬಲೆ’ಗೆ ತಳ್ಳಿದೆ: ಪ್ರಲ್ಹಾದ್ ಜೋಶಿ ಆರೋಪ.
  • ರಾಜ್ಯದ ಸಾಲದ ಹೊರೆ ಹೆಚ್ಚುತ್ತಿದೆ, ರಸ್ತೆಗಳು ಗುಂಡಿಮಯವಾಗಿವೆ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗಿಲ್ಲ: ಕೇಂದ್ರ ಸಚಿವ ಟೀಕೆ.
  • ಸಿದ್ದರಾಮಯ್ಯ ಸರ್ಕಾರವು ಜನರ ಮೇಲೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಹೊರೆ ಹೊರಿಸುತ್ತಿದೆ: ಜೋಶಿ ಕಿಡಿ

ಕಾಂಗ್ರೆಸ್ ಆಡಳಿತಕ್ಕೆ ಜೋಶಿ ಚಾಟಿ

ಸಿದ್ದರಾಮಯ್ಯ ಟೀಕೆಗಳಿಗೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ, ‘ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಕಾಂಗ್ರೆಸ್ ಹದಗೆಡಿಸಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಕಾಂಗ್ರೆಸ್ ಸಚಿವರು ಶಾಸಕರನ್ನು ಎಣಿಸುವುದರಲ್ಲೇ (ಪಕ್ಷದೊಳಗಿನ ಅಧಿಕಾರ ಹಂಚಿಕೆ ಕಿತ್ತಾಟ ಉಲ್ಲೇಖಿಸಿ) ನಿರತರಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಹದಗೆಟ್ಟಿವೆ ಮತ್ತು ಗುತ್ತಿಗೆದಾರರು ಬಿಲ್ ಪಾವತಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ಆಡಳಿತ ಹಳಿ ತಪ್ಪಿರುವುದಕ್ಕೆ ಸಾಕ್ಷಿ ಎಂದು ಜೋಶಿ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ 48 ಅಗತ್ಯ ವಸ್ತುಗಳ ಬೆಲೆ ಏರಿಕೆ: ಜೋಶಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಲು, ಇಂಧನ, ವಿದ್ಯುತ್ ಸೇರಿದಂತೆ ಸುಮಾರು 48 ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆಯಾಗಿದೆ ಎಂದು ಜೋಶಿ ಆರೋಪಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತದೆ, ಆದರೆ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಭಾರಿ ಹೊರೆ ಹೊರಿಸುತ್ತಿದೆ. ಇದು ಜನರಿಗೆ ಮಾಡಿದ ದ್ರೋಹ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಯವರು ದೇಶದ ಹಿತದೃಷ್ಟಿಯಿಂದ ನೀಡಿದ ಕರೆಗಳನ್ನು ಸಿದ್ದರಾಮಯ್ಯ ಅವರು ಲೇವಡಿ ಮಾಡುತ್ತಿರುವುದು ಅವರ ಜವಾಬ್ದಾರಿಯಿಲ್ಲದ ನಾಯಕತ್ವವನ್ನು ತೋರಿಸುತ್ತದೆ ಎಂದು ಜೋಶಿ ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: ಸರ್ಕಾರದ ಖಜಾನೆ ಲೂಟಿ ಮಾಡುತ್ತಿದೆ ಕಾಂಗ್ರೆಸ್, ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ: ಮೋದಿ ವ್ಯಂಗ್ಯ!

ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ಆರ್ಥಿಕತೆ ಕುಸಿತ ಕಂಡಿದ್ದನ್ನು ನೆನಪಿಸಿದ ಜೋಶಿ, ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ. ಬೇರೆಯವರನ್ನು ಪ್ರಶ್ನೆ ಮಾಡುವ ಮುನ್ನ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಒಳಗಿನ ಅಧಿಕಾರ ದಾಹ, ಕಿತ್ತಾಟ ಮತ್ತು ಆಡಳಿತದ ಪಾರ್ಶ್ವವಾಯುವಿಗೆ ಉತ್ತರ ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *