T20 World Cup 2026: ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡ ಮತ್ತೊಮ್ಮೆ ಮುಗ್ಗರಿಸಿದೆ. ಅದು ಸಹ ತನ್ನ ಬದ್ಧವೈರಿ ಭಾರತದ ವಿರುದ್ಧ. ಇತ್ತ ಪಾಕ್ ಪಡೆಯನ್ನು ಬಗ್ಗು ಬಡಿದು ಟೀಮ್ ಇಂಡಿಯಾ 8ನೇ ಬಾರಿ ಗೆಲುವಿನ ನಗೆ ಬೀರಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 175 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ 18 ಓವರ್ಗಳಲ್ಲೇ ಆಲೌಟ್ ಆಯಿತು. ಅದು ಸಹ ಕೇವಲ 114 ರನ್ಗಳಿಸಿ. ಈ ಮೂಲಕ 61 ರನ್ಗಳಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ನಡೆದ ಚಾನೆಲ್ ಚರ್ಚೆಯೊಂದರಲ್ಲಿ ಕಾಣಿಸಿಕೊಂಡ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಿರಿಯ ಆಟಗಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಈ ಆಟಗಾರರನ್ನು ತಂಡದಿಂದ ಕೈ ಬಿಡುವ ಸಮಯ ದಾಟಿದೆ ಎಂದಿದ್ದಾರೆ.
ಪಾಕಿಸ್ತಾನ್ ತಂಡದಲ್ಲಿ ಮಹತ್ವದ ಬದಲಾವಣೆಯಾಗೇಬೇಕಿದೆ. ಟೀಮ್ನಲ್ಲಿರುವ ಹಿರಿಯ ಆಟಗಾರರಾದ ಬಾಬರ್ ಆಝಂ, ಶಾಹೀನ್ ಅಫ್ರಿದಿ ಹಾಗೂ ಶಾದಾಬ್ ಖಾನ್ರನ್ನು ತಂಡದಿಂದ ಕೈ ಬಿಡಬೇಕು. ಅವರ ಬದಲಿಗೆ ಹೊಸ ಆಟಗಾರರಿಗೆ ಅವಕಾಶ ಕಲ್ಪಿಸಬೇಕು.
ಏಕೆಂದರೆ ಅನುಭವಿ ಆಟಗಾರರಾಗಿ ತಂಡಕ್ಕೆ ಆಯ್ಕೆಯಾಗಿ ಇವರು ಯಾವುದೇ ಅನುಭವದ ಪ್ರದರ್ಶನ ನೀಡುತ್ತಿಲ್ಲ. ಇದಾಗ್ಯೂಇವುರಗಳು ಬಹಳ ಸಮಯದಿಂದ ತಂಡದಲ್ಲಿದ್ದಾರೆ. ಆದರೆ ಸಿಗಬೇಕಾದ ಫಲಿತಾಂಶ ಮಾತ್ರ. ಹೀಗಾಗಿ ಈ ಮೂವರಿಗೆ ತಂಡದಿಂದ ಗೇಟ್ ಪಾಸ್ ನೀಡಬೇಕು ಎಂದು ಶಾಹಿದ್ ಅಫ್ರಿದಿ ಆಗ್ರಹಿಸಿದ್ದಾರೆ.
ಬಾಬರ್, ಶಾಹೀನ್ ಹಾಗೂ ಶಾದಾಬ್ ಅವರನ್ನು ತಂಡದಿಂದ ಹೊರಗಿಟ್ಟು ಅವರ ಬದಲಿಗೆ ಹೊಸ ಆಟಗಾರರಿಗೆ ಸ್ಥಾನ ಕಲ್ಪಿಸಬೇಕು. ಈ ಮೂಲಕ ಪಾಕಿಸ್ತಾನ್ ತಂಡ ಪ್ರಯೋಗಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಭಾರತದಂತಹ ತಂಡದ ವಿರುದ್ಧ ಪಾಕಿಸ್ತಾನ್ ತಂಡದ ಗೆಲುವು ಮರೀಚಿಕೆಯಾಗಿರಲಿದೆ ಎಂದು ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: VIDEO: ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರ ನಡುವೆ ‘ಒಳ’ಜಗಳ
ಕುತೂಹಲಕಾರಿ ವಿಷಯ ಎಂದರೆ ಪಾಕಿಸ್ತಾನ್ ತಂಡದಲ್ಲಿರುವ ಶಾಹೀನ್ ಅಫ್ರಿದಿ, ಶಾಹಿದ್ ಅಫ್ರಿದಿ ಅವರ ಅಳಿಯ. ಅಂದರೆ ಅಫ್ರಿದಿ ಅವರ ಮಗಳನ್ನು ಶಾಹೀನ್ ಶಾ ಅಫ್ರಿದಿ ವಿವಾಹವಾಗಿದ್ದಾರೆ. ಇದೀಗ ಶಾಹೀನ್ ಅಫ್ರಿದಿಯನ್ನೇ ಪಾಕಿಸ್ತಾನ್ ತಂಡದಿಂದ ಕೈ ಬಿಡಬೇಕೆಂದು ಆಗ್ರಹಿಸಿ ಶಾಹಿದ್ ಅಫ್ರಿದಿ ಎಲ್ಲರ ಗಮನ ಸೆಳೆದಿದ್ದಾರೆ.