Headlines

ಆರ್‌ಎಸ್‌ಎಸ್​​ ಸಭೆ ಮುಕ್ತಾಯ: ರಾಮಮಂದಿರ ದೇಣಿಗೆ ದುರ್ಬಳಕೆಗೆ ವಿಷಾದ, ಜನಸಂಖ್ಯೆ ಅಸಮತೋಲನದ ಬಗ್ಗೆ ಕಳವಳ – Kannada News | RSS Belagavi Meet Raises Concerns Over Ayodhya Ram Mandir Donation Misuse and Population Imbalance

ಬೆಳಗಾವಿ, ಜುಲೈ 12: ಬೆಳಗಾವಿಯ ಆನಗೋಳದ ಸಂತ ಮೀರಾ ಶಾಲೆಯಲ್ಲಿ ಮೂರು ದಿನಗಳಿಂದ ನಡೆದಿದ್ದ ಆರ್‌ಎಸ್‌ಎಸ್ (RSS) ರಾಷ್ಟ್ರೀಯ ವಾರ್ಷಿಕ ಸಭೆ ಇಂದು ಮುಕ್ತಾಯವಾಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್​ ಭಾಗವತ್‌, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ 226 ಪ್ರಚಾರಕರು ಸಭೆಯಲ್ಲಿ ಭಾಗಿಯಾಗಿದ್ದು, 2026ರ ಶಾಖಾ ವಿಸ್ತರಣೆ, ಪ್ರಶಿಕ್ಷಣ ವರ್ಗಗಳ ವಿಶ್ಲೇಷಣೆ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ ಬಗ್ಗೆ ವಿಷಾದ ವ್ಯಕ್ತಪಡಿಸಲಾಗಿದ್ದು, ಇಂಥ ಘಟನೆ ಮರುಕಳಿಸದಂತೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಆಗ್ರಹಿಸಲಾಗಿದೆ.

ರಾಮಮಂದಿರ ದೇಣಿಗೆ ದುರ್ಬಳಕೆ ಬಗ್ಗೆ ವಿಷಾದ

ಸಭೆಯಲ್ಲಿ ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ ಬಗ್ಗೆ ವಿಷಾದ ವ್ಯಕ್ತಪಡಿಸಲಾಗಿದೆ. ಕೋಟ್ಯಂತರ ರಾಮಭಕ್ತರ ಅಪಾರ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ಬಾರದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಕ್ಷಣವೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಗಿದೆ. ಈ ಹಗರಣದ ಸತ್ಯ ಎಸ್‌ಐಟಿ ಹಾಗೂ ಪೊಲೀಸ್ ತನಿಖೆಯಿಂದ ಹೊರಬರಬೇಕು. ಇಂತಹ ಘಟನೆಗಳು ಭವಿಷ್ಯದಲ್ಲಿ ಎಂದಿಗೂ ಮರುಕಳಿಸಬಾರದು ಎಂದು ಸಂಘವು ಬಲವಾಗಿ ಒತ್ತಾಯಿಸಿದೆ.

ಶಾಖಾ ವಿಸ್ತರಣೆ, ಪ್ರಶಿಕ್ಷಣ ವರ್ಗಗಳ ವಿಶ್ಲೇಷಣೆ ಬಗ್ಗೆ ಚರ್ಚೆ

ಸಭೆ ಬಳಿಕ ಮಾಧ್ಯಮದವರೊಂದಿಗೆ ಆರ್‌ಎಸ್ಎಸ್ ಪ್ರಚಾರ ವಿಭಾಗದ ಪ್ರಮುಖ ಸುನೀಲ್ ಅಂಬೇಕರ್ ಮಾತನಾಡಿದ್ದು, ‘‘ಆರ್‌ಎಸ್‌ಎಸ್ ಸ್ಥಾಪನೆಯಾಗಿ ಶತಾಬ್ದಿ ವರ್ಷ ಹಿನ್ನೆಲೆ ದೇಶಾದ್ಯಂತ ಸಂಘದ ಶಾಖೆಗಳನ್ನು ಗರಿಷ್ಠ ಮಟ್ಟದಲ್ಲಿ ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮೋಹನ್ ಭಾಗವತ್ ಅವರ ಮುಂಬರುವ ದೇಶವ್ಯಾಪಿ ಪ್ರವಾಸದ ಕಾರ್ಯಕ್ರಮಗಳ ಬಗ್ಗೆ ವಿಶೇಷ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. 2026ರ ಸಾಲಿನಲ್ಲಿ ಶಾಖೆಗಳ ವಿಸ್ತರಣೆ ಹಾಗೂ ಪ್ರಶಿಕ್ಷಣ ವರ್ಗಗಳ ಪ್ರಗತಿ ಪರಿಶೀಲನೆಯನ್ನು ಕೈಗೊಳ್ಳಲಾಗಿದ್ದು, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ’’ ಎಂದು ತಿಳಿಸಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ ವಾರ್ಷಿಕ ಸಭೆ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಮಾತು

‘‘ಇನ್ನು ದೇಶಾದ್ಯಂತ ಒಟ್ಟು 83 ಸಂಘ ಶಿಕ್ಷಣ ವರ್ಗಗಳನ್ನು ಹಾಗೂ 12 ಕಾರ್ಯಕರ್ತ ವಿಕಾಸ ವರ್ಗಗಳನ್ನು ಆಯೋಜಿಸಲಾಗಿತ್ತು. ಈ ವರ್ಗಗಳಲ್ಲಿ ಒಟ್ಟು 18,842 ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದ್ದು, ಈ ತರಬೇತಿಯಲ್ಲಿ ಸಂಘದ ಮೂಲ ತತ್ವಗಳೊಂದಿಗೆ ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ ಹಾಗೂ ವಿಪತ್ತು ನಿರ್ವಹಣೆಯಂತಹ ಸಾಮಾಜಿಕ ಜವಾಬ್ದಾರಿಗಳ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಗಿದೆ’’ ಎಂದರು.

ಜನಸಂಖ್ಯೆ ಅಸಮತೋಲನದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್‌ಎಸ್‌ಎಸ್

‘‘ದೇಶದ ಜನಸಂಖ್ಯೆ ಅಸಮತೋಲನ ಕುರಿತು ಸಭೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದ್ದು, ಜನಸಂಖ್ಯೆ ಹೆಚ್ಚಳದಿಂದಾಗುವ ಸವಾಲುಗಳು ಮತ್ತು ಜನಗಣತಿ ಬಗ್ಗೆ ಚರ್ಚಿಸಲಾಗಿದೆ. ಅದೇ ರೀತಿಯಾಗಿ ಮಾದಕ ವ್ಯಸನದ ಹೆಚ್ಚಳದ ಬಗ್ಗೆಯೂ ಆತಂಕ ವ್ಯಕ್ತಪಡಿಸಲಾಗಿದ್ದು, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಲು ಕರೆ ನೀಡಲಾಗಿದೆ. ಇನ್ನು ಮಹಾನ್ ಸಂತ ಶ್ರೀ ಸಂತೋಷಿನೋಮಣಿ ರವಿದಾಸ್ ಮಹಾರಾಜರ 650ನೇ ವರ್ಷದ ಅಂಗವಾಗಿ ಅವರ 60ನೇ ಜನ್ಮಶತಮಾನ ಆಚರಣೆಗೆ ಸಿದ್ಧತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗಿದೆ’’ ಎಂದು ಸುನೀಲ್ ಅಂಬೇಕರ್ ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:28 pm, Sun, 12 July 26

Source link

Leave a Reply

Your email address will not be published. Required fields are marked *