ಆಸ್ಪತ್ರೆ ಎದುರು ಗಲಾಟೆ; ಮರುದಿನವೇ ಸಲ್ಮಾನ್ ಖಾನ್ ಬಳಿ ಕ್ಷಮೆ ಕೇಳಿ ರಾಜಿ ಮಾಡಿಕೊಂಡ ಪಾಪರಾಜಿಗಳು – Kannada News | Salman Khan accepts paparazzi apology for hospital incident at Raja Shivaji event in Mumbai

ಮುಂಬೈನ ಆಸ್ಪತ್ರೆಯೊಂದರ ಹೊರಗಡೆ ತಮ್ಮ ಖಾಸಗಿತನಕ್ಕೆ ಧಕ್ಕೆ ತಂದ ಪಾಪರಾಜಿಗಳ ಮೇಲೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ತೀವ್ರ ಆಕ್ರೋಶ ಹೊರಹಾಕಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ, ಈ ಘಟನೆ ನಡೆದ ಕೇವಲ ಒಂದೇ ದಿನದಲ್ಲಿ ಸಲ್ಲು ಭಾಯ್ ಹಳೆಯ ಮುನಿಸನ್ನು ಮರೆತು ಫೋಟೋಗ್ರಾಫರ್‌ಗಳ ಕ್ಷಮೆಯನ್ನು ಸ್ವೀಕರಿಸುವ ಮೂಲಕ ದೊಡ್ಡ ಗುಣ ಪ್ರದರ್ಶಿಸಿದ್ದಾರೆ. ಬುಧವಾರ (ಮೇ 20) ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಮತ್ತು ಪಾಪರಾಜಿಗಳ (Paparazzi) ನಡುವೆ ಸೌಹಾರ್ದಯುತ ಮಾತುಕತೆ ನಡೆದಿದೆ.

ಬುಧವಾರ ರಾತ್ರಿ ಸಲ್ಮಾನ್ ಖಾನ್ ಅವರು ಮುಂಬೈನಲ್ಲಿ ನಡೆದ ‘ರಾಜಾ ಶಿವಾಜಿ’ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕ ಮತ್ತು ನಿರ್ದೇಶಕ ರಿತೇಶ್ ದೇಶ್‌ಮುಖ್ ಅವರೊಂದಿಗೆ ಸಲ್ಮಾನ್ ಅವರು ಕ್ಯಾಮೆರಾಗಳಿಗೆ ಪೋಸ್ ನೀಡಲು ಹೊರಬಂದಾಗ, ಅಲ್ಲಿ ನೆರೆದಿದ್ದ ಫೋಟೋಗ್ರಾಫರ್‌ಗಳೆಲ್ಲರೂ ಒಟ್ಟಾಗಿ ಸೂಪರ್‌ಸ್ಟಾರ್ ಬಳಿ ಕ್ಷಮೆ ಕೇಳಲು ಮುಂದಾಗಿದ್ದಾರೆ.

ಸಲ್ಮಾನ್ ಬರುತ್ತಿದ್ದಂತೆ ಸುತ್ತುವರಿದ ಪಾಪರಾಜಿಗಳು, ‘ನಮ್ಮನ್ನು ಕ್ಷಮಿಸಿ ಭಾಯ್’ ಎನ್ನುತ್ತಾ ಗದ್ದಲ ಸೃಷ್ಟಿಸಿದರು. ಇದನ್ನು ಗಮನಿಸಿದ ಸಲ್ಮಾನ್, ಫೋಟೋಗ್ರಾಫರ್ ಒಬ್ಬರನ್ನು ಹತ್ತಿರ ಬರಲು ಬಿಡುವಂತೆ ತಮ್ಮ ಸೆಕ್ಯೂರಿಟಿ ತಂಡಕ್ಕೆ ಸೂಚಿಸಿದರು. ಬಳಿಕ ಏನಾಗುತ್ತಿದೆ ಎಂದು ವಿಚಾರಿಸಿದಾಗ, ಅವರೆಲ್ಲರೂ ಕ್ಷಮೆ ಕೇಳುತ್ತಿರುವುದು ಸಲ್ಮಾನ್‌ಗೆ ಮನವರಿಕೆಯಾಗಿದೆ. ತಕ್ಷಣವೇ ಸಲ್ಮಾನ್ ಸನ್ನೆ ಮಾಡುತ್ತಾ, ‘ಎಲ್ಲವೂ ಸರಿ ಹೋಗಿದೆ’ ಎಂದು ಸಿಗ್ನಲ್ ನೀಡಿದ್ದಾರೆ.

ಈ ಸಂದರ್ಭದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಫೋಟೋಗ್ರಾಫರ್ ಒಬ್ಬರು ‘ಇವತ್ತು ಯಾರೂ ಕಿರುಚಬೇಡಿ, ಲವ್ ಯೂ ಭಾಯ್’ ಎನ್ನುವುದು ಕೇಳಿಸುತ್ತದೆ. ಅದಕ್ಕೆ ಸಲ್ಮಾನ್ ನಗುತ್ತಾ, ‘ಹಾ, ಈ ಜಾಗ ಕಿರುಚಾಡಲು ಸರಿಯಾಗಿದೆ’ ಎಂದು ಉತ್ತರಿಸಿದ್ದಾರೆ. ನಂತರ ಪಾಪರಾಜಿಗಳು ಮಂಗಳವಾರ ರಾತ್ರಿಯ ತಮ್ಮ ನಡವಳಿಕೆಗೆ ಮತ್ತೊಮ್ಮೆ ಕ್ಷಮೆಯಾಚಿಸಿದಾಗ, ಸಲ್ಮಾನ್ ತಮಾಷೆಯಾಗಿ, ‘ಸ್ವಲ್ಪ ಜೋರಾಗಿ ಹೇಳಿ, ನಿಮ್ಮ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ’ ಎಂದು ಕಾಲೆಳೆದಿದ್ದಾರೆ. ಸಲ್ಮಾನ್ ಅವರ ಈ ಹಾಸ್ಯ ಪ್ರಜ್ಞೆ ಕಂಡು ಪಕ್ಕದಲ್ಲೇ ಇದ್ದ ರಿತೇಶ್ ದೇಶ್‌ಮುಖ್ ಕೂಡ ಜೋರಾಗಿ ನಕ್ಕಿದ್ದಾರೆ.

ಇದನ್ನೂ ಓದಿ: ತಮ್ಮ ನೋವನ್ನು ಆನಂದಿಸಿದವರಿಗೆ ಎಚ್ಚರಿಸಿದ ಸಲ್ಮಾನ್ ಖಾನ್

ಸಲ್ಮಾನ್ ಕೋಪಕ್ಕೆ ಕಾರಣವೇನು?
ಮಂಗಳವಾರ ರಾತ್ರಿ ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಆಪ್ತರನ್ನು ನೋಡಲು ಸಲ್ಮಾನ್ ಖಾನ್ ಹೋಗಿದ್ದರು. ಈ ವೇಳೆ ಪಾಪರಾಜಿಗಳು ಅವರನ್ನು ಬೆನ್ನಟ್ಟಿ, ಆಸ್ಪತ್ರೆಯ ಆವರಣದಲ್ಲೇ ಸಲ್ಮಾನ್ ಅವರ ಮುಂಬರುವ ‘ಮಾತೃಭೂಮಿ’ ಚಿತ್ರದ ಹೆಸರನ್ನು ಜೋರಾಗಿ ಕೂಗುತ್ತಾ ಗಲಾಟೆ ಮಾಡಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡ ಸಲ್ಮಾನ್, ‘ನಿಮಗೆ ಹುಚ್ಚು ಹಿಡಿದಿದೆಯೇ?’ ಎಂದು ತಲೆಗೆ ಕೈ ಮುಟ್ಟಿ ಕೋಪದಿಂದ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೆ, ‘ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಗೆ ದಾಖಲಾಗಿದ್ದಾಗ ಬೇರೆಯವರು ಹೀಗೆ ಮಾಡಿದರೆ ನಿಮಗೆ ಹೇಗನಿಸುತ್ತದೆ?’ ಎಂದು ಖಾರವಾಗಿ ಕ್ಲಾಸ್ ತಗೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *