ಹುಬ್ಬಳ್ಳಿ, ಜುಲೈ 05: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ” ಎಂಬ ನಾಣ್ಣುಡಿಯಂತೆ, ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಜಾಲ ದಿನೇದಿನೆ ವಿಸ್ತರಿಸುತ್ತಲೇ ಇದೆ. ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಣ ಡಬಲ್, ಪಾರ್ಟ್-ಟೈಮ್ ಉದ್ಯೋಗದ ಆಮಿಷ ಒಡ್ಡುತ್ತಿದ್ದ ವಂಚಕರು, ಇದೀಗ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಗುರಿಯಾಗಿಸಿಕೊಂಡು ವಂಚನೆಗೆ ಇಳಿದಿದ್ದಾರೆ. ಪ್ರತಿಷ್ಠಿತ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸೀಟು (Admission Scams) ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ ದೋಚುತ್ತಿರುವ ಗ್ಯಾಂಗ್ ಸಕ್ರಿಯವಾಗಿದ್ದು, ಇದಕ್ಕೆ ತಾಜಾ ಉದಾಹರಣೆಯಾಗಿ ಹುಬ್ಬಳ್ಳಿಯ (Hubballi) ವಿದ್ಯಾರ್ಥಿನಿಯೊಬ್ಬಳು (Students) ಬರೋಬ್ಬರಿ 16 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾಳೆ.
ಜಾಹೀರಾತು ನಂಬಿ ಲಕ್ಷಾಂತರ ರೂ ಕಳೆದುಕೊಂಡ ವಿದ್ಯಾರ್ಥಿನಿ
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಸ್ಫೂರ್ತಿ ಎಂಬ ವಿದ್ಯಾರ್ಥಿನಿಯೇ ವಂಚನೆಗೆ ಒಳಗಾದ ದುರ್ದೈವಿ. ಈಕೆ ಇನ್ಸ್ಟಾಗ್ರಾಮ್ನಲ್ಲಿ ‘ಟ್ರಸ್ಟ್ಲೈನ್ ಎಜುಕೇಶನ್’ ಎಂಬ ಐಡಿಯೊಂದರಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾಳೆ. ಅದರಲ್ಲಿ ಹೈದರಾಬಾದ್ನ ಪ್ರತಿಷ್ಠಿತ ‘ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್’ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ವಂಚಕರು ಜಾಹೀರಾತು ನೀಡಿದ್ದರು. ಇದನ್ನು ನಿಜವೆಂದು ನಂಬಿದ ವಿದ್ಯಾರ್ಥಿನಿ, ಅದರಲ್ಲಿ ನೀಡಲಾಗಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿದ್ದಾಳೆ. ಆ ಕಡೆಯಿಂದ ಮಾತನಾಡಿದ ಕಿರಾತಕರು ಅಡ್ಮಿಷನ್ಗಾಗಿ ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲಾತಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಸೀಟ್ ಕೊಡಿಸುವ ಬದಲಾಗಿ ಲಕ್ಷ ಲಕ್ಷ ಹಣ ಪೀಕಿದ್ದಾರೆ.
ಹಂತ ಹಂತವಾಗಿ ಹಣ ಪೀಕಿದ ಖದೀಮರು
ಹೈದ್ರಾಬಾದ್ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಕಾಲೇಜ್ಗೆ ನಿಮ್ಮ ಅರ್ಜಿ ಹಾಕಿದ್ದೇವೆ. ಅದು ಅನುಮೋದನೆ ಕೂಡಾ ಆಗಿದೆ. ನೀವು ಶುಲ್ಕ ಕಟ್ಟಿದ ತಕ್ಷಣ ನಿಮ್ಮ ಸೀಟ್ ಖಚಿತವಾಗುತ್ತದೆ ಎಂದು ಹೇಳಿದ್ದರಂತೆ. ವಂಚಕರ ಮಾತನ್ನು ನಂಬಿದ ವಿದ್ಯಾರ್ಥಿನಿ, ಪಾಲಕರ ಜೊತೆ ಮಾತನಾಡಿ ಹಂತಹಂತವಾಗಿ ಬರೋಬ್ಬರಿ 16 ಲಕ್ಷ 45 ಸಾವಿರ ರೂ ಹಣವನ್ನು ಅವರು ಹೇಳಿದ ಖಾತೆಗೆ ಹಾಕಿದ್ದಳು.
ಇದನನ್ನೂ ಓದಿ: ಸರ್ಕಾರದ ಕ್ರಮಕ್ಕೆ ಕಂಗಾಲಾದ ವಯೋವೃದ್ಧ ಪಿಂಚಣಿದಾರರು: ಕಚೇರಿಗೆ ಅಲೆದಾಟ
ಹಣ ಹಾಕಿದ ಮೇಲೆ ಸೀಟ್ ಬಗ್ಗೆ ಮಾಹಿತಿ ಕೇಳಿದಾಗ ವಂಚಕರು ಫೋನ್ ಸ್ವಿಚ್ ಆಪ್ ಮಾಡಿಕೊಂಡಿದ್ದಾರೆ. ಇತ್ತ ಕಾಲೇಜ್ ನಂಬರ್ಗೆ ಕರೆ ಮಾಡಿದಾಗ ಅವರು ಕೂಡ ನಮ್ಮಲ್ಲಿ ನಿಮ್ಮ ಹೆಸರಿನಲ್ಲಿ ಯಾವುದೇ ಸೀಟ್ ನೀಡಲಾಗಿಲ್ಲ. ಯಾವುದೇ ಅರ್ಜಿ ಕೂಡ ಬಂದಿಲ್ಲ ಎಂದಿದ್ದಾರೆ. ಆಗ ವಿದ್ಯಾರ್ಥಿನಿ ಮತ್ತು ಪಾಲಕರಿಗೆ ಗೊತ್ತಾಗಿದೆ, ನಾವು ಮೋಸ ಹೋಗಿದ್ದೇವೆ ಅಂತ.
ಸಿಇಎನ್ ಪೊಲೀಸ್ ಠಾಣೆಗೆ ದೂರು
ಸದ್ಯ ವಿದ್ಯಾರ್ಥಿನಿ ಹುಬ್ಬಳ್ಳಿಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಯಾರಾದರೂ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟ್ ಕೊಡಿಸುತ್ತೇವೆ ಅಂತ ಹೇಳಿದರೆ ಅವರ ಖಾತೆಗೆ ಹಣ ಹಾಕುವ ಮೊದಲು ಕಾಲೇಜಿಗೆ ಅಥವಾ ವಿಶ್ವವಿದ್ಯಾಲಯಕ್ಕೆ ನೇರವಾಗಿ ಭೇಟಿ ಮಾಡಿ ವಿಚಾರಣೆ ಮಾಡುವುದು ಸೂಕ್ತ. ಇಲ್ಲದಿದ್ದರೆ ನಿಮ್ಮ ಖಾತೆ ಖಾಲಿಯಾಗುತ್ತೆ ವಿನಃ ಸೀಟ್ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.