ಪುಣೆ, ಜೂನ್ 18: ಮೂಢನಂಬಿಕೆ ಮತ್ತು ಮಾಟ-ಮಂತ್ರದ ಹೆಸರಿನಲ್ಲಿ ಮಹಿಳೆಯೊಬ್ಬರ ಮೇಲೆ ಹಲವು ವರ್ಷಗಳ ಕಾಲ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಎಸಗಿರುವ ಘಟನೆ ಪುಣೆಯಲ್ಲಿ (Pune) ನಡೆದಿದೆ. ಉದ್ಯಮದಲ್ಲಿ ಯಶಸ್ಸು ಮತ್ತು ಹಣದ ಆಸೆ ತೋರಿಸಿ ಈ ಪಾಪಿ ದೇವಮಾನವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಬಲವಂತವಾಗಿ ತನ್ನ ಮೂತ್ರವನ್ನು ಕುಡಿಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ಮಹಿಳೆಯ ಪತಿ ಪುಣೆಯ ಪ್ರಭಾವಿ ಉದ್ಯಮಿಯಾಗಿದ್ದಾರೆ. ಅವರ ವ್ಯವಹಾರದಲ್ಲಿ ಕೆಲವು ಆರ್ಥಿಕ ನಷ್ಟಗಳು ಉಂಟಾದಾಗ, ಪರಿಚಯಸ್ಥರ ಮೂಲಕ ಈ ‘ದೇವಮಾನವ’ನ ಸಂಪರ್ಕ ಸಿಕ್ಕಿತ್ತು. ಉದ್ಯಮದಲ್ಲಿ ಭಾರಿ ಲಾಭ ತಂದುಕೊಡುವುದಾಗಿ ಹಾಗೂ ಮನೆಯಲ್ಲಿ ಐಶ್ವರ್ಯ ವೃದ್ಧಿಸುವುದಾಗಿ ನಂಬಿಸಿದ ದೇವಮಾನವ ಮಾಟ-ಮಂತ್ರ, ಪೂಜೆಯ ನೆಪದಲ್ಲಿ ಆ ಉದ್ಯಮಿಯ ಕುಟುಂಬವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದನು.
ರಾಧೇಶ್ಯಾಮ್ ಮಿಶ್ರಾ ಅಲಿಯಾಸ್ ರಾಧಾಮೋಹನ್ ಮಿಶ್ರಾ ಎಂಬಾತ ಪುಣೆಯ ವಾಗೋಲಿಯ ಉಬಾಲೆ ನಗರ ಪ್ರದೇಶದಲ್ಲಿ ‘ಮಾಡರ್ನ್ ಗುರುಕುಲ’ ಎಂಬ ಆಶ್ರಮವನ್ನು ನಡೆಸುತ್ತಿದ್ದನು. ಮಿಶ್ರಾ ಕಳೆದ ಹಲವು ವರ್ಷಗಳಿಂದ ಜನರನ್ನು ವಂಚಿಸಿ ಶೋಷಿಸುತ್ತಿದ್ದನು. ಸಂತ್ರಸ್ತ ಮಹಿಳೆ ಜೊತೆ 2010ರಲ್ಲಿ ಈತನ ಸಂಪರ್ಕವಾಗಿತ್ತು. 2010 ಮತ್ತು 2016ರ ನಡುವೆ ಈತ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಿದ್ದಲ್ಲದೆ, ದೈಹಿಕವಾಗಿ ಹಲ್ಲೆ ನಡೆಸಿ, ಎಲೆಕ್ಟ್ರಿಕ್ ಶಾಕ್ ನೀಡಿ ಚಿತ್ರಹಿಂಸೆ ನೀಡಿದ್ದನು ಮತ್ತು ಆಕೆಯ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡಿದ್ದನು. ಆ ವೀಡಿಯೊಗಳನ್ನು ಬಳಸಿಕೊಂಡು ಆಕೆ ಹಾಗೂ ಆಕೆಯ ಕುಟುಂಬಕ್ಕೆ ತನಗೆ ದೈವಿಕ ‘ಶಕ್ತಿಗಳು’ ಇವೆ ಎಂದು ಬೆದರಿಸಿ, ಬ್ಲ್ಯಾಕ್ಮೇಲ್ ಮಾಡುತ್ತಿದ್ದನು.
ಇದನ್ನೂ ಓದಿ: ಅನುಮತಿ ಇಲ್ಲದೆ ಖಾಸಗಿ ಚಿತ್ರ ಹಂಚಿಕೊಂಡರೆ ಎಫ್ಐಆರ್ ಆಗುತ್ತೆ ಹುಷಾರ್!: ಕರ್ನಾಟಕ ಪೊಲೀಸ್ ಮುಖ್ಯಸ್ಥರ ಕಡಕ್ ಆದೇಶ
ಉದ್ಯಮದ ಏಳಿಗೆಗಾಗಿ ವಿಶೇಷ ರಹಸ್ಯ ಪೂಜೆಗಳನ್ನು ಮಾಡಬೇಕೆಂದು ನಂಬಿಸಿ, ಆ ಮಹಿಳೆಯನ್ನು ಹಲವು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಳ್ಳಲಾಗಿತ್ತು. ಇದಕ್ಕೆ ಸಂತ್ರಸ್ತೆಯ ಪತಿ ಮತ್ತು ಆಕೆಯ ಅತ್ತೆ-ಮಾವಂದಿರು ಕೂಡ ಸಾಥ್ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಾಂತ್ರಿಕ ವಿಧಿವಿಧಾನಗಳ ಭಾಗವೆಂದು ಹೇಳಿ, ಮಹಿಳೆಗೆ ಬಲವಂತವಾಗಿ ಈ ದೇವಮಾನವನ ಮೂತ್ರವನ್ನು ಕುಡಿಸಲಾಗಿತ್ತು. ಇದನ್ನು ವಿರೋಧಿಸಿದಾಗ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಕುಟುಂಬಕ್ಕೆ ತೊಂದರೆಯಾಗಲಿದೆ ಎಂದು ಬೆದರಿಕೆ ಹಾಕಲಾಗಿತ್ತು.
ಪೂಜೆಗಳ ಹೆಸರಿನಲ್ಲಿ ಮಹಿಳೆಯ ಬಳಿಯಿದ್ದ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ಕೋಟ್ಯಂತರ ರೂಪಾಯಿ ಹಣವನ್ನು ಈ ಕೂಟ ಲೂಟಿ ಮಾಡಿದೆ. ದೀರ್ಘಕಾಲದ ಕಿರುಕುಳದಿಂದ ಬೇಸತ್ತ ಮಹಿಳೆ ಕೊನೆಗೆ ಧೈರ್ಯ ಮಾಡಿ ಪುಣೆಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆ ದೇವಮಾನವ, ಸಂತ್ರಸ್ತೆಯ ಪತಿ ಮತ್ತು ಆಕೆಯ ಅತ್ತೆ-ಮಾವ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಫೇಸ್ಬುಕ್ ಲೈವ್ನಲ್ಲಿ ಶರಣಾಗುವುದಾಗಿ ಹೇಳಿದ್ದ ರೌಡಿ ಎನ್ಕೌಂಟರ್ಗೆ ಬಲಿ!
ಈ ಘಟನೆಯು ಪುಣೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ವಿದ್ಯಾವಂತ ಕುಟುಂಬಗಳೂ ಇಂತಹ ಮೂಢನಂಬಿಕೆಗೆ ಬಲಿಯಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರು ಮಿಶ್ರಾನ ಆಶ್ರಮದ ಮೇಲೆ ದಾಳಿ ನಡೆಸಿದಾಗ, ಅಲ್ಲಿನ ನೆಲದಡಿಯ ರಹಸ್ಯ ಕೋಣೆಯಿಂದ ಭಾರಿ ಪ್ರಮಾಣದ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ 12 ಲ್ಯಾಪ್ಟಾಪ್ಗಳು, 11 ಮೊಬೈಲ್ ಫೋನ್ಗಳು, 19 ಹಾರ್ಡ್ ಡ್ರೈವ್ಗಳು, ಹಲವಾರು ಪೆನ್ ಡ್ರೈವ್ಗಳು ಮತ್ತು ಕ್ಯಾಸೆಟ್ಗಳು, 6.5 ಲಕ್ಷ ರೂ. ನಗದು ಮತ್ತು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಿಕ್ಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ