ಝಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಕ್ಲೀನ್ ಸ್ವೀಪ್ ಗೆಲುವಿನ ಮುಖ್ಯ ರೂವಾರಿ ಯುವ ದಾಂಡಿಗ ವೈಭವ್ ಸೂರ್ಯವಂಶಿ. ಈ ಸರಣಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ಗೆ ಇದೀಗ ಟೀಮ್ ಇಂಡಿಯಾದ ಹಂಗಾಮಿ ಹೆಡ್ ಕೋಚ್ ವಿವಿಎಸ್ ಲಕ್ಷ್ಮಣ್ ಅವರು ಫಿಟ್ನೆಸ್ ಅನ್ನು ಸುಧಾರಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆಟದ ಜೊತೆಗೆ ಫಿಟ್ನೆಸ್ ಮುಖ್ಯ:
ಝಿಂಬಾಬ್ವೆ ವಿರುದ್ಧದ ಅಂತಿಮ ಪಂದ್ಯ ಮುಗಿದ ಬಳಿಕ ಮಾತನಾಡಿದ ಕೋಚ್ ಲಕ್ಷ್ಮಣ್, 15 ವರ್ಷದ ಈ ಯುವ ಪ್ರತಿಭೆಯ ಪಕ್ವತೆ ಮತ್ತು ಪಂದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಜಾಣ್ಮೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಆದಾಗ್ಯೂ, ಭವಿಷ್ಯದಲ್ಲಿ ಸುದೀರ್ಘ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಉಳಿಯಬೇಕಾದರೆ ದೈಹಿಕ ದೃಢತೆ ಎಷ್ಟು ಮುಖ್ಯ ಎಂಬುದನ್ನು ನೆನಪಿಸಿದರು.
“ವೈಭವ್ ಸೂರ್ಯವಂಶಿ ತುಂಬಾ ಕಿರಿಯ ಆಟಗಾರ. ಅವರು ತಮ್ಮ ಆಟವನ್ನು ಇನ್ ಆಂಡ್ ಔಟ್ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಆದರೆ, ಅವರು ಪ್ರಮುಖವಾಗಿ ಗಮನ ಹರಿಸಬೇಕಾದ ಮತ್ತು ಸುಧಾರಿಸಿಕೊಳ್ಳಬೇಕಾದ ಏಕೈಕ ಕ್ಷೇತ್ರವೆಂದರೆ ಅವರ ಒಟ್ಟಾರೆ ಫಿಟ್ನೆಸ್.” ಎಂದು ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.
ಗಾಯದ ನಡುವೆಯೂ ಆಡುವ ಛಲ!
ಮೂರನೇ ಪಂದ್ಯದ ವೇಳೆ ವೈಭವ್ ಸೂರ್ಯವಂಶಿ ಸಣ್ಣದಾಗಿ ಗಾಯಗೊಂಡಿದ್ದರು. ಆದರೂ ಮೈದಾನದಿಂದ ಹೊರಹೋಗಲು ನಿರಾಕರಿಸಿ, ತಂಡಕ್ಕಾಗಿ ಬ್ಯಾಟಿಂಗ್ ಮುಂದುವರಿಸಲು ಬಯಸಿದ್ದರು. ಕೊನೆಗೆ ತಂಡದ ಫಿಸಿಯೋ ಮೈದಾನಕ್ಕೆ ಬಂದು ಹಸ್ತಕ್ಷೇಪ ಮಾಡುವವರೆಗೂ ಅವರು ಮೈದಾನದಲ್ಲೇ ಇದ್ದರು. ಈ ಅವರ ಗೆಲ್ಲುವ ಛಲ ಮತ್ತು ಬದ್ಧತೆಗೆ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂತಹ ಛಲ ಒಳ್ಳೆಯದೇ. ಆದರೆ ಸುದೀರ್ಘ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಉಳಿಯಬೇಕಾದರೆ ದೈಹಿಕ ದೃಢತೆ ಕೂಡ ಅಷ್ಟೇ ಮುಖ್ಯ. ಹೀಗಾಗಿ ವೈಭವ್ ಸೂರ್ಯವಂಶಿ ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಹರಾರೆಯಲ್ಲಿ ವೈಭವ್ ಅಬ್ಬರ:
ಝಿಂಬಾಬ್ವೆ ವಿರುದ್ಧದ ಕೊನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 49 ಎಸೆತಗಳಲ್ಲಿ 81 ರನ್ (8 ಬೌಂಡರಿ, 4 ಸಿಕ್ಸರ್) ಚಚ್ಚಿದ್ದರು. ಈ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್ಗಳಲ್ಲಿ 192 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಝಿಂಬಾಬ್ವೆ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ 35 ರನ್ಗಳ ಜಯ ಸಾಧಿಸಿದೆ.
ಇದನ್ನೂ ಓದಿ: ಕ್ಲೀನ್ ಸ್ವೀಪ್ನಲ್ಲಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ
ಇನ್ನು ಈ ಸರಣಿಯ ಮೂರು ಪಂದ್ಯಗಳಿಂದ ಒಟ್ಟು 151 ರನ್ ಗಳಿಸಿದ ವೈಭವ್ ಸೂರ್ಯವಂಶಿ, ಈ ಸಿರೀಸ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ‘ಪ್ಲೇಯರ್ ಆಫ್ ದಿ ಮ್ಯಾಚ್’ ಮತ್ತು ‘ಪ್ಲೇಯರ್ ಆಫ್ ದಿ ಸೀರೀಸ್’ ಎರಡೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.