ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಅವರ ಪುತ್ರ ಎ.ಆರ್. ಅಮೀನ್ ಅವರು ಚೆನ್ನೈನಲ್ಲಿ ಭಾನುವಾರ (ಆಗಸ್ಟ್ 9) ಸಾಯಂಕಾಲ ನಡೆದ ಕಾರು ಅಪಘಾತದಲ್ಲಿ (Car Accident) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಿಂಡಿಯ ಕತ್ತಿಪಾರಾ ಫ್ಲೈಓವರ್ ಬಳಿ ಎ.ಆರ್. ಅಮೀನ್ (AR Ameen) ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಅಡ್ಯಾರ್ ಸಂಚಾರ ತನಿಖಾ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎರಡೂ ವಾಹನಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಅಮೀನ್ ಅವರು ತಮ್ಮ ಸ್ನೇಹಿತನೊಂದಿಗೆ ಕೋಯಂಬೇಡಿನಿಂದ ನಗರದತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಪಕ್ಕದ ರಸ್ತೆಯಿಂದ ಬಂದ ವ್ಯಾಗನ್-ಆರ್ ಕಾರು, ಅಮೀನ್ ಪ್ರಯಾಣಿಸುತ್ತಿದ್ದ ಪೋರ್ಷೆ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಅಮೀನ್ ಹಾಗೂ ಅವರ ಸ್ನೇಹಿತ ದೊಡ್ಡ ಅನಾಹುತದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದ ತಕ್ಷಣವೇ ಅಮೀನ್ ಹಾಗೂ ಅವರ ಸ್ನೇಹಿತನನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಅವರು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಇನ್ನು ವ್ಯಾಗನ್-ಆರ್ ಕಾರಿನಲ್ಲಿದ್ದ ಗಾಯಾಳುವನ್ನು ಕಲೈಂಜರ್ ಶತಮಾನೋತ್ಸವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಲಾಗಿದೆ.
ಇದನ್ನೂ ಓದಿ: ಭಾರತದ ಇನ್ಯಾವ ಸಂಗೀತ ನಿರ್ದೇಶಕನಿಗೂ ಸಿಗದಷ್ಟು ಸಂಭಾವನೆ ಪಡೆದ ಎಆರ್ ರೆಹಮಾನ್
ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಮಗನಾಗಿದ್ದರೂ, ಅಮೀನ್ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸುತ್ತಿದ್ದಾರೆ. 2015ರಲ್ಲಿ ಮಣಿರತ್ನಂ ನಿರ್ದೇಶನದ ‘ಓ ಕಾದಲ್ ಕಣ್ಮಣಿ’ ಚಿತ್ರದ ‘ಮೌಲಾ ಸಲ್ಲಿ ವಸಲ್ಲಿಮ್’ ಹಾಡಿನ ಮೂಲಕ ಹಿನ್ನೆಲೆ ಗಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆ ಹಾಡು ಅವರಿಗೆ ಖ್ಯಾತಿ ತಂದುಕೊಟ್ಟಿತು.
ನಂತರ ಹಲವು ಭಾಷೆಗಳಲ್ಲಿ ಹಾಡಿರುವ ಅಮೀನ್ ಅವರು ತಮ್ಮ ತಂದೆಯವರ ಅಂತರರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ತಮಿಳು ಆವೃತ್ತಿಯ ‘ಚಿಕಿರಿ ಚಿಕಿರಿ’ ಹಾಡಿಗೆ ಧ್ವನಿಯಾಗಿದ್ದರು. ಅಲ್ಲದೆ, ಜಸ್ಲೀನ್ ರಾಯಲ್ ಅವರೊಂದಿಗೆ ಸೇರಿ ‘ಭೀಗಿ ಭೀಗಿ’ ಆಲ್ಬಂ ಹಾಡನ್ನು ಹಾಡಿದ್ದು, ಅದರ ಮ್ಯೂಸಿಕ್ ವೀಡಿಯೋದಲ್ಲಿ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ನಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.