ಕೊಪ್ಪಳ, ಆಗಸ್ಟ್ 02: ಜಿಲ್ಲೆಯಲ್ಲಿ ಒಂದೆಡೆ ಬರಗಾಲದ ತಾಂಡವವಾಡುತ್ತಿದೆ. ಮಳೆಯಿಲ್ಲದೆ ಜನರು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹಕ್ಕಿ ಜ್ವರ (bird flu) ಆತಂಕ ಶುರುವಾಗಿದೆ. ಕೊಪ್ಪಳ (koppal) ನಗರದ ಹೃದಯಭಾಗದಲ್ಲೇ ನೂರಾರು ಹಕ್ಕಿಗಳು ಸಾವನ್ನಪ್ಪುತ್ತಿವೆ. ಇತ್ತ ನಗರದಲ್ಲಿ ಜನರಿಗೆ ಹಕ್ಕಿ ಜ್ವರದ ಆತಂಕ ಶುರುವಾಗಿದೆ.
ನಿಗೂಢವಾಗಿ ಸಾವನ್ನಪ್ಪುತ್ತಿವೆ ಬೆಳ್ಳಕ್ಕಿಗಳು
ಕೊಪ್ಪಳದಲ್ಲಿ ಕಳೆದ ಮೂರು ತಿಂಗಳಿಂದ ಕೊಪ್ಪಳದ ನಗರಸಭೆ ಹಿಂಭಾಗದ ಮರದಲ್ಲಿ ಸಾವಿರಾರು ಬೆಳ್ಳಕ್ಕಿಗಳ ಹಿಂಡು ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಸಂಸಾರ ಹೂಡಿದ್ದವು. ಆದರೆ ಕಳೆದ ಒಂದು ವಾರದಿಂದ ಪ್ರತಿನಿತ್ಯ ಹತ್ತಾರು ಹಕ್ಕಿಗಳು ಸತ್ತು ಬೀಳ್ತಿವೆ. ಅಸ್ವಸ್ಥಗೊಂಡಿರುವ ನೂರಾರು ಹಕ್ಕಿಗಳು ಹಾರಲಾರದ ಪರಿಸ್ಥಿತಿಗೆ ತಲುಪಿವೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮಣ್ಣು ಲೂಟಿ: ಟಿಪ್ಪರ್ ತಡೆದ ಬಿಜೆಪಿ MLCಗೆ ‘ನಾನೇ ದಂಡ ಕಟ್ಟುತ್ತೇನೆಂದ’ ಸಿಪಿಐ
ಹಕ್ಕಿಗಳ ಈ ಸಾವಿನಿಂದ ಜನರಿಗೆ ಹಕ್ಕಿ ಜ್ವರದ ಆತಂಕ ಶುರುವಾಗಿದೆ. ಒಂದೆಡೆ ಜಿಲ್ಲೆಯಲ್ಲಿ ಮಳೆಯಿಲ್ಲದೆ ಬರಗಾಲ ಆವರಿಸಿದೆ. ಇದರ ನಡುವೆ ಇದೀಗ ಈ ರೀತಿ ಸಾಲು ಸಾಲು ಬೆಳ್ಳಕ್ಕಿಗಳು ನಿಗೂಢವಾಗಿ ಸಾಯುತ್ತಿರುವುದು ಸಾರ್ವಜನಿಕರಲ್ಲಿ ಹಕ್ಕಿ ಜ್ವರದ ಭೀತಿಯನ್ನು ಹುಟ್ಟುಹಾಕಿದೆ. ಮರದಲ್ಲಿದ್ದ ನೂರಾರು ಹಕ್ಕಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಕ್ಕಿಗಳು ಈಗಾಗಲೇ ಅಸ್ವಸ್ಥಗೊಂಡಿದ್ದು, ಒಂದೊಂದಾಗಿ ನೆಲಕ್ಕೆ ಬೀಳುತ್ತಿವೆ. ಹಾರಾಡುವುದಕ್ಕೆ ಆಗದೆ, ಸಂಕಷ್ಟ ಎದುರಿಸುತ್ತಿವೆ.
ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು
ವಿಪರ್ಯಾಸವೆಂದರೆ ಕಣ್ಣೆದುರೇ ದಿನವೂ ಹಕ್ಕಿಗಳು ಸತ್ತು ಬೀಳುತ್ತಿದ್ದರೂ ನಗರಸಭೆ ಅಧಿಕಾರಿಗಳಾಗಲಿ ಅಥವಾ ಪಶುಸಂಗೋಪನಾ ಇಲಾಖೆಯವರಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಮೃತಪಟ್ಟ ಹಕ್ಕಿಗಳ ರಕ್ತ ಅಥವಾ ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗೆ ಕಳುಹಿಸುವ ಕೆಲಸವೂ ನಡೆದಿಲ್ಲ. ನಗರಸಭೆ ಹಿಂಭಾಗವೇ ಘಟನೆ ನಡೆದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಸ್ಥಳೀಯರು ಮಾಹಿತಿ ನೀಡಿದರು, ನಾವು ಎಸ್ಐಆರ್ ಕೆಲಸದಲ್ಲಿ ಬ್ಯೂಸಿ ಇದ್ದೇವೆ ಎನ್ನುತ್ತಿದ್ದಾರೆ. ಇದು ಸಹಜವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ಕೆರೆ ವಿವಾದ: ರಾತ್ರೋರಾತ್ರಿ ಗೇಟ್ ಮರುನಿರ್ಮಾಣ; ಮತ್ತೆ ಸಿಡಿದೆದ್ದ ರೈತರು
ಹಕ್ಕಿಗಳ ನಿರಂತರ ಸಾವಿಗೆ, ಜನರಲ್ಲಿ ಆತಂಕ ಮನೆ ಮಾಡಿದೆ. ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಕೂಡಲೇ ಪರಿಶೀಲನೆ ಮಾಡಬೇಕು. ಅಲ್ಲದೆ ಜಿಲ್ಲೆಯಲ್ಲಿ ಅತೀ ಹೆಚ್ಚು ಕೋಳಿ ಫಾರಂಗಳಿವೆ. ಇದೀಗ ಹಕ್ಕಿ ಜ್ವರದ ಆತಂಕ ಎಲ್ಲರಲ್ಲೂ ಮನೆ ಮಾಡಿದ್ದು, ಜೊತೆಗೆ ಭಯ ಆವರಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.