Headlines

ಒನ್ ನೇಷನ್ ಒನ್ ಎಲೆಕ್ಷನ್‌ನಿಂದ ರಾಜ್ಯಗಳ ಅಧಿಕಾರ ಕಸಿಯಲ್ಲ: ಇಂದಿರಾ ಗಾಂಧಿ ಕಾಲದ ಅಸಹಿಷ್ಣುತೆ ನೆನಪಿಸಿದ ಸಚಿವ ಪ್ರಹ್ಲಾದ್ ಜೋಶಿ – Kannada News | Gadag: Prahlad Joshi Slams Rahul Gandhi on One Nation One Election, Cites Congress History

ಪ್ರಹ್ಲಾದ್ ಜೋಶಿ ಮತ್ತು ರಾಹುಲ್​ ಗಾಂಧಿ

ಗದಗ, ಜು.11: ಒನ್ ನೇಷನ್, ಒನ್ ಎಲೆಕ್ಷನ್ (ಒಂದೇ ದೇಶ, ಒಂದೇ ಚುನಾವಣೆ) ಜಾರಿಗೆ ಬಂದರೆ ದೇಶದ ಫೆಡರಲ್ ಅಥವಾ ಒಕ್ಕೂಟ ವ್ಯವಸ್ಥೆ ಹಾಳಾಗುತ್ತದೆ ಎನ್ನುವುದೆಲ್ಲಾ ಸಂಪೂರ್ಣ ಅರ್ಥವಿಲ್ಲದ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆಯ ಜಾರಿ ಪ್ರಕ್ರಿಯೆ ಹಾಗೂ ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

‘ಒನ್ ನೇಷನ್, ಒನ್ ಎಲೆಕ್ಷನ್’ ಜಾರಿ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದ ಅವರು, “ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯ (JPC) ವರದಿಯನ್ನು ಮೊದಲು ಲೋಕಸಭಾ ಸ್ಪೀಕರ್ ಅವರಿಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಸ್ಪೀಕರ್ ಅವರಿಗೆ ವರದಿ ಸಲ್ಲಿಕೆಯಾದ ಬಳಿಕವಷ್ಟೇ ಅದು ಸರ್ಕಾರದ ಕೈ ಸೇರಲಿದೆ. ತದನಂತರ ಕೇಂದ್ರ ಸರ್ಕಾರವು ಆ ವರದಿಯನ್ನು ಸಮಗ್ರವಾಗಿ ಪರಿಶೀಲನೆ ನಡೆಸಲಿದ್ದು, ಆ ಬಳಿಕವಷ್ಟೇ ಮುಂದಿನ ಅಂತಿಮ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ,” ಎಂದು ಪ್ರಕ್ರಿಯೆಯನ್ನು ವಿವರಿಸಿದರು.

ಕಾಂಗ್ರೆಸ್ ಮಾಡುತ್ತಿರುವ ಒಕ್ಕೂಟ ವ್ಯವಸ್ಥೆಯ ಧಕ್ಕೆ ಆರೋಪವನ್ನು ತಳ್ಳಿಹಾಕಿದ ಜೋಶಿ, “ಕೇಂದ್ರ ಸರ್ಕಾರವು ರಾಜ್ಯಗಳ ಅಧಿಕಾರವನ್ನು ಕಸಿದುಕೊಂಡರೆ ಮಾತ್ರ ಫೆಡರಲ್ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ. ಆದರೆ, ಸಂವಿಧಾನದತ್ತವಾಗಿ ರಾಜ್ಯಗಳಿಗೆ ಸಿಕ್ಕಿರುವ ಅಧಿಕಾರಗಳು ಮತ್ತು ಹಕ್ಕುಗಳು ಹಾಗೇ ಇರುತ್ತವೆ. ಹೀಗಿದ್ದೂ ಒಕ್ಕೂಟ ವ್ಯವಸ್ಥೆ ಹಾಳಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದವರು ಹಾಸ್ಯಾಸ್ಪದ ಹಾಗೂ ಸತ್ಯಕ್ಕೆ ದೂರವಾದ ಮಾತು ಎಂದು ಕಿಡಿಕಾರಿದರು.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೂಡು ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಅವರು ಪಕ್ಷದಲ್ಲಿ ಇರೋದರಿಂದಲೇ ಕಾಂಗ್ರೆಸ್ ಸ್ಥಿತಿ ಇಂದು ಹೀಗಾಗಿದೆ. ಅವರು ಯಾವಾಗಲೂ ಅತ್ಯಂತ ಬಾಲಿಶವಾಗಿ ಮಾತನಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಯಾರಾದರೂ ಉಳಿದ ನಾಯಕರು ಲಾಜಿಕಲ್ ಆಗಿ ಅಥವಾ ಅರ್ಥಗರ್ಭಿತವಾಗಿ ಮಾತನಾಡಲು ಹೋದರೆ, ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತದೆ. ರಾಹುಲ್ ಗಾಂಧಿ ಅವರು ಹೇಗೆ ಮಾತನಾಡುತ್ತಾರೋ, ಉಳಿದವರೂ ಸಹ ಅದೇ ರಾಗ ಆಡಬೇಕು ಎನ್ನುವ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಇಡೀ ದೇಶದಲ್ಲಿ ಬಿಜೆಪಿಗೆ ನ್ಯಾಷನಲ್ ಪ್ರೆಜೆನ್ಸ್ (ರಾಷ್ಟ್ರೀಯ ಅಸ್ತಿತ್ವ) ಇದೆ, ಇದರಿಂದ ಒನ್ ನೇಷನ್ ಒನ್ ಎಲೆಕ್ಷನ್ ತಂದರೆ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಕಾಂಗ್ರೆಸ್‌ನವರು ಅಳುತ್ತಿದ್ದಾರೆ. ದೇಶದಲ್ಲಿ ನಿಮಗೆ ರಾಷ್ಟ್ರೀಯ ಅಸ್ತಿತ್ವ ಇಲ್ಲದೇ ಹೋದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ತಪ್ಪಿತಸ್ಥರೇ? ಅದು ನಿಮ್ಮ ರಾಹುಲ್ ಗಾಂಧಿಯವರ ತಪ್ಪು. ಇಲ್ಲಿರುವ ಕಾಂಗ್ರೆಸ್ ಮಂತ್ರಿಗಳಿಗೆ ಹಾಗೂ ರಾಜ್ಯಾಧ್ಯಕ್ಷರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ಮೈಸೂರು ದಸರಾದಲ್ಲಿ ಕಂಬಳಕ್ಕೆ ಭಾರಿ ವಿರೋಧ: ಯದುವೀರ್ ಆಕ್ಷೇಪ ಬೆನ್ನಲ್ಲೇ ಹೆಚ್‌ಡಿಕೆ ವಾಗ್ದಾಳಿ
ದೇಶದಲ್ಲಿ ಅಸಹಿಷ್ಣುತೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಗಳು ಆರಂಭವಾಗಿದ್ದು ಪಂಡಿತ ಜವಾಹರಲಾಲ್ ನೆಹರು ಅವರ ಕಾಲದಲ್ಲೇ. ಅದನ್ನು ಮುಂದುವರಿಸಿದ ಇಂದಿರಾ ಗಾಂಧಿಯವರು ರಾಜ್ಯ ಸರ್ಕಾರಗಳನ್ನು ತಮ್ಮ ಮನಬಂದಂತೆ ವಿಸರ್ಜನೆ ಮಾಡಲು ತೀವ್ರ ಯತ್ನ ನಡೆಸಿದ್ದರು. ಆದರೆ, ಇತಿಹಾಸ ಪ್ರಸಿದ್ಧ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಒಂಬತ್ತು ಜನ ನ್ಯಾಯಾಧೀಶರ ಪೀಠವು ಐತಿಹಾಸಿಕ ತೀರ್ಪು ನೀಡಿದ ಬಳಿಕವಷ್ಟೇ ಕಾಂಗ್ರೆಸ್‌ನವರು ಹಿಂದೆ ಸರಿದರು. ಇಲ್ಲದಿದ್ದರೆ ತಮ್ಮ ಮನಸ್ಸಿಗೆ ಬಂದಾಗಲೆಲ್ಲಾ ಚುನಾವಣೆ ಮಾಡುತ್ತಿದ್ದರು. ಪಕ್ಷವನ್ನು ಗಟ್ಟಿಯಾಗಿ ಕಟ್ಟುವುದು ಆಯಾ ಪಾರ್ಟಿಯ ಕೆಲಸ. ನೀವು ಬೇಕಿದ್ದರೆ ರಾಹುಲ್ ಗಾಂಧಿ ನೇತೃತ್ವದಲ್ಲೇ ಪಕ್ಷ ಕಟ್ಟಿ ಜನಾಭಿಪ್ರಾಯ ಗಳಿಸಿ, ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ಸವಾಲು ಹಾಕಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *