ಕನ್ನಡ ಇನ್ಫ್ಲುಯೆನ್ಸರ್ ಬ್ಲ್ಯಾಕ್ಮೇಲ್ ಕೇಸ್ಗೆ ಬಿಗ್ ಟ್ವಿಸ್ಟ್
ಬೆಂಗಳೂರು, ಮೇ 13: ಕನ್ನಡದ ಪ್ರಭಾವಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ 1.5 ಕೋಟಿ ರೂ. ಬ್ಲ್ಯಾಕ್ಮೇಲ್ (Blackmail) ಆರೋಪ ಕೇಳಿಬಂದಿತ್ತು. ಆದರೆ ಪ್ರಕರಣವು ಈಗ ಸಿನಿಮಾ ಶೈಲಿಯ ತಿರುವು ಪಡೆದುಕೊಂಡಿದೆ. ತನ್ನ ಪತಿ ಕಾರ್ತಿಕ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಸ್ವತಃ ಆತನ ಪತ್ನಿ ಹರ್ಷಿತಾ ಅವರೇ ಪೊಲೀಸರಿಗೆ ಪತ್ರ ಬರೆಯುವ ಮೂಲಕ ಉದ್ಯಮಿಯ ಅಸಲಿ ಮುಖವನ್ನು ಬಯಲು ಮಾಡಿದ್ದಾರೆ.
ಮುಖ್ಯಾಂಶಗಳು
- ಇನ್ಫ್ಲುಯೆನ್ಸರ್ ಬ್ಲ್ಯಾಕ್ಮೇಲ್ ಪ್ರಕರಣಕ್ಕೆ ಪತ್ನಿಯ ದೂರಿನಿಂದ ಸ್ಫೋಟಕ ತಿರುವು ಸಿಕ್ಕಿದೆ
- ಪತಿ ಕಾರ್ತಿಕ್ ತನ್ನ ಲೈಂಗಿಕ ಅಕ್ರಮ ಮುಚ್ಚಿಹಾಕಲು ಸುಳ್ಳು ಕಥೆ ಸೃಷ್ಟಿಸಿದ್ದಾನೆ ಎಂದ ಪತ್ನಿ
- ಹಲವು ಯುವತಿಯರಿಗೆ ವಂಚಿಸಿರುವ ಕಾರ್ತಿಕ್
ನನ್ನ ಪತಿ ಸುಳ್ಳು ಆರೋಪ ಮಾಡಿದ್ದಾರೆಂದ ಪತ್ನಿ
ಹೆಚ್ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕನೆಂದು ಹೇಳಿಕೊಂಡಿರುವ ಕಾರ್ತಿಕ್, ತನಗೆ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ನನ್ನ ಖಾಸಗಿ ಫೋಟೋಗಳನ್ನು ಪತ್ನಿ ಹರ್ಷಿತಾಗೆ ಕಳುಹಿಸಿದ್ದಲ್ಲದೆ ನನ್ನ ಬಳಿ ಕೋಟಿಗಟ್ಟಲೆ ಹಣ ಕೇಳಿದ್ದಾಳೆ ಎಂದು ಆರೋಪಿಸಿದ್ದ. ಆದರೆ ಈ ಪ್ರಕರಣಕ್ಕೀಗ ಆತನ ಪತ್ನಿಯಿಂದಲೇ ಸ್ಫೋಟಕ ತಿರುವು ಸಿಕ್ಕಿದೆ. ಹರ್ಷಿತಾ ಜಯನಗರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತನ್ನ ಪತಿ ಸೃಷ್ಟಿಸಿರುವ ಬ್ಲ್ಯಾಕ್ಮೇಲ್ ಕಥೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಸಾಧನಾ ಶೆಟ್ಟಿ ಯಾವತ್ತೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ನನ್ನ ಪತಿಯೇ ತನ್ನ ಲೈಂಗಿಕ ಅಕ್ರಮಗಳನ್ನು ಮುಚ್ಚಿಹಾಕಲು ಆಕೆಯನ್ನು ಬ್ಲ್ಯಾಕ್ಮೇಲರ್ ಎಂದು ಚಿತ್ರಿಸುತ್ತಿದ್ದಾನೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕಾರ್ತಿಕ್ ಒಬ್ಬ ದೊಡ್ಡ ಉದ್ಯಮಿಯೇನಲ್ಲ, ಆತ ಕೇವಲ ತನ್ನ ಕ್ಲಿನಿಕ್ನ ಮಾರ್ಕೆಟಿಂಗ್ ನೋಡಿಕೊಳ್ಳುತ್ತಿದ್ದ ಕೆಲಸಗಾರ ಅಷ್ಟೇ ಎಂದು ಕ್ಲಿನಿಕ್ನ ನಿರ್ದೇಶಕಿಯೂ ಆಗಿರುವ ಹರ್ಷಿತಾ ಸತ್ಯ ಬಿಚ್ಚಿಟ್ಟಿದ್ದಾರೆ.
ಕಾರ್ತಿಕ್ ಮನೆಗೆ ಬಂದಿದ್ದ ಸಾಧನಾ
ಮದುವೆಯಾಗುವುದಾಗಿ ನಂಬಿಸಿ ಸಾಧನಾ ಶೆಟ್ಟಿಯನ್ನು ಹೈದರಾಬಾದ್, ಬೆಂಗಳೂರು ಮತ್ತು ಮಾಲ್ಡೀವ್ಸ್ಗೆ ಕರೆದೊಯ್ದಿದ್ದ ಕಾರ್ತಿಕ್, ಆಕೆಗಾಗಿ ಹೈದರಾಬಾದ್ನಲ್ಲಿ ಪಿಜಿ ವ್ಯವಸ್ಥೆಯನ್ನೂ ಮಾಡಿದ್ದ. ಆದರೆ ಆತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ನಂತರ 2025ರ ಆಗಸ್ಟ್ 8ರಂದು ಕಾರ್ತಿಕ್ ನಿವಾಸಕ್ಕೆ ಆಗಮಿಸಿದ್ದ ಇನ್ಪುಯೆನ್ಸರ್ ಸಾಧನಾ, ಆತ ನನಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾನೆಂದು ಕುಟುಂಬಸ್ಥರ ಮುಂದೆ ಆರೋಪಿಸಿದ್ದಳು. ಈ ವೇಳೆ ನಮ್ಮ ಬಳಿ ಹಣವಿದೆ ಎಂದು ಅವಳು ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಕಾರ್ತಿಕ್ ತನ್ನ ಪತ್ನಿಯನ್ನು ನಂಬಿಸಿದ್ದ.
ಇದನ್ನೂ ಓದಿ ಉದ್ಯಮಿ ಜತೆ ಡೇಟಿಂಗ್, ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಆರೋಪ: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರುದ್ಧ ದೂರು
ಕಾರ್ತಿಕ್ ಮಾಸ್ಟರ್ ಪ್ಲ್ಯಾನ್
ಸಾಧನಾ ಏನಾದರೂ ಪೊಲೀಸರಿಗೆ ದೂರು ನೀಡಿದರೆ ಕಷ್ಟ ಎಂದು ಅರಿತ ಕಾರ್ತಿಕ್, ಆಕೆಯನ್ನೇ ಸಿಲುಕಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ತನ್ನ ಸ್ನೇಹಿತರ ಸಹಾಯದಿಂದ ಆಕೆಯ ಫೋನ್ ಕಳವು ಮಾಡಿಸಿ, ವಾಪಸ್ ನೀಡಿದ್ದಲ್ಲದೆ ಸಾಧನಾಗೆ ಹಲವು ಬಾರಿ ಬೆದರಿಕೆ ಕರೆಯನ್ನೂ ಮಾಡಿದ್ದ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆಂದು ಕತೆಯನ್ನೂ ಕಟ್ಟಿದ್ದ. ಇಷ್ಟೆಲ್ಲಾ ಆದ ನಂತರ ಪತಿ ಬದಲಾಗಿದ್ದಾನೆಂದು ಹರ್ಷಿತಾ ನಂಬಿದ್ದರು.
ಉದ್ಯಮಿಯ ಕರಾಳ ಮುಖ ಬಯಲು
ಆದರೆ ಸಾಧನಾ ಕಳುಹಿಸಿದ ಸಾಕ್ಷ್ಯಗಳನ್ನು ನೋಡಿದ ಬಳಿಕ ಹರ್ಷಿತಾ ಕೂಡ ಕಂಗಾಲಾಗಿದ್ದರು. ಕಾರ್ತಿಕ್ ಕೇವಲ ಸಾಧನಾ ಮಾತ್ರವಲ್ಲದೆ ಇನ್ನೂ ಹಲವು ಯುವತಿಯರಿಗೆ ಇದೇ ರೀತಿ ವಂಚಿಸಿರುವುದು ಅವರಿಗೆ ಯುವತಿಯಿಂದ ತಿಳಿದುಬಂತು. ನಂತರ ಎರಡು ತಿಂಗಳಿಂದ ಪತಿಯಿಂದ ದೂರವಿದ್ದ ಆಕೆ, ಪ್ರಕರಣ ಸಂಬಂಧ ಮಾಹಿತಿ ಕೇಳಿದ ಪೊಲೀಸರ ಮುಂದೆ ಪತಿಯ ಕರಾಳ ಮುಖ ಬಯಲಿಗೆಳೆದಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಜಯನಗರ ಪೊಲೀಸರು, ಕರ್ನಾಟಕ ಮತ್ತು ತೆಲಂಗಾಣ ಡಿಐಜಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಹರ್ಷಿತಾ ರವಾನಿಸಿದ್ದಾರೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ