ಕಳೆದ 60 ವರ್ಷಗಳಿಂದಲೂ ಡಿಎಂಕೆ, ಎಐಎಡಿಎಂಕೆ ಹೊರತಾಗಿ ಇನ್ಯಾವ ಪಕ್ಷದವರು ಸಹ ತಮಿಳುನಾಡಿನಲ್ಲಿ ಸಿಎಂ ಆಗಿರಲಿಲ್ಲ. ಇದೀಗ ಆ 60 ವರ್ಷದ ದಾಖಲೆಯನ್ನು ಮುರಿದು ದಳಪತಿ ವಿಜಯ್ ಇಂದು (ಮೇ 10) ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಕೆಲವು ಸಣ್ಣ-ಪುಟ್ಟ ಅಡತಡೆಗಳನ್ನು ಎದುರಿಸಿದ ವಿಜಯ್, ಕೊನೆಗೂ ಕಾಂಗ್ರೆಸ್, ಸಿಪಿಐ, ಸಿಪಿಐಎಂ, ವಿಸಿಕೆ, ಐಯುಎಂಎಲ್ ಪಕ್ಷಗಳ ಬೆಂಬಲದೊಂದಿಗೆ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಇಂದು ವಿಜಯ್ ಪ್ರಮಾಣ ವಚನ ಸ್ವೀಕಾರದ ಸಮಯದಲ್ಲಿ ಅವರು ಧರಿಸಿದ್ದ ಉಡುಪು ಗಮನ ಸೆಳೆಯಿತು. ಭಾರತದಲ್ಲಿ ರಾಜಕಾರಣಿಗಳೆಂದರೆ ಬಿಳಿ ಬಟ್ಟೆ ಅದರಲ್ಲೂ ಸೆಲ್ವಾರ್ ಕಮೀಜ್ ಮಾದರಿಯ, ದಕ್ಷಿಣದಲ್ಲಾದರೆ ಬಿಳಿ ಶರ್ಟು, ಪಂಚೆ ಉಡುವುದು ತೀರ ಸಾಮಾನ್ಯ. ಆದರೆ ವಿಜಯ್ ಇಂದು ಕಪ್ಪು ಬಣ್ಣದ ಸೂಟು ಧರಿಸಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಸೂಟು ಧರಿಸುವ ಮೂಲಕ ತಾವು ಸಂಪ್ರದಾಯವಾದಿ ರಾಜಕಾರಣಿ ಅಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದರು.
ವಿಜಯ್, ಸೂಟು ಧರಿಸಿದ್ದೇನೋ ಸರಿ, ಆದರೆ ಕಪ್ಪು ಬಣ್ಣದ ಸೂಟನ್ನೇ ಧರಿಸಿದ್ದೇಕೆ? ಕಪ್ಪು ಬಣ್ಣವನ್ನು ಬಹುತೇಕ ಭಾರತೀಯ ಮಂದಿ ಅಪಶಕುನವೆಂದು ಪರಿಗಣಿಸುತ್ತಾರೆ. ಶುಭ ಸಂದರ್ಭಗಳಲ್ಲಿ ಕಪ್ಪು ಬಣ್ಣದ ಧಿರಿಸುಗಳನ್ನು ಧರಿಸುವುದಿಲ್ಲ. ವಿಜಯ್ ಕ್ರಿಶ್ಚಿಯನ್ ಧರ್ಮದವರಾಗಿದ್ದು, ಅವರ ಧರ್ಮದಲ್ಲಿ ಸಹ ಕಪ್ಪು ಉಡುಪನ್ನು ಶುಭ ಸಂದರ್ಭಗಳಲ್ಲಿ ಧರಿಸುವುದಿಲ್ಲ, ಹಾಗಿದ್ದರೂ ಸಹ ವಿಜಯ್ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಕಪ್ಪು ಬಣ್ಣದ ಧಿರಿಸು ಧರಿಸಿ ಬಂದಿದ್ದರು.
ಇದನ್ನೂ ಓದಿ:ವಿಜಯ್ ಪ್ರಮಾಣವಚನ ನೋಡಲು ಬರಲಿಲ್ಲ ಪತ್ನಿ, ಮಕ್ಕಳು; ಮಿಂಚಿದ್ದು ಮಾತ್ರ ತ್ರಿಶಾ
ವಿಜಯ್ ಕಪ್ಪು ಬಣ್ಣದ ಧಿರಿಸು ಧರಿಸುವುದಕ್ಕೆ ಕಾರಣವಿದೆ. ಕಪ್ಪು ಬಣ್ಣವು ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿಯ ಸಂಕೇತವಾಗಿದೆ. ದ್ರಾವಿಡ ಚಳವಳಿಯ ಪ್ರಸಾರಕ್ಕೆ ಕಾರಣರ್ತ ಮತ್ತು ‘ದ್ರಾವಿಡ ಕಳಗಂ’ ಸಂಸ್ಥಾಪಕ ಪೆರಿಯಾರ್ ಅವರು ಜಾತಿ ತಾರತಮ್ಯ, ಸಾಮಾಜಿಕ ತಾರತಮ್ಯ ಮತ್ತು ಮೌಢ್ಯದ ವಿರುದ್ಧ ಪ್ರತಿಭಟನಾರ್ತವಾಗಿ ಕಪ್ಪು ಬಟ್ಟೆ ಉಡಲು ಕರೆ ನೀಡಿದ್ದರು. ಪೆರಿಯಾರ್ ಹಿಂಬಾಲಕರು, ಅವರ ವಿಚಾರವನ್ನು ಪ್ರತಿಪಾದಿಸುವವರು ಕಪ್ಪು ಬಟ್ಟೆಗಳನ್ನು ಧರಿಸುತ್ತಿದ್ದರು.
ವಿಜಯ್ ಸಹ ಪೆರಿಯರ್ ಅವರ ಆದರ್ಶಗಳಲ್ಲಿ ನಂಬಿಕೆ ಇರಿಸಿದವರಾಗಿದ್ದು, ಅವರ ಚುನಾವಣಾ ಪ್ರಚಾರದ ಎಲ್ಲ ವೇದಿಕೆಗಳಲ್ಲಿಯೂ ಪೆರಿಯಾರ್ ಅವರ ಚಿತ್ರಗಳನ್ನು ಇರಿಸಿಕೊಂಡಿದ್ದರು. ಹಾಗಾಗಿ ಪೆರಿಯಾರ್ ಆದರ್ಶಗಳ ಪ್ರದಿಪಾದಕರಾಗಿ ಅವರು ಇಂದು ಕಪ್ಪು ಬಣ್ಣದ ಉಡುಪು ಧರಿಸಿ ಬಂದಿದ್ದರು. ಕಪ್ಪು ಬಣ್ಣದ ಕೋಟು, ಪ್ಯಾಂಟು ಮತ್ತು ಬಿಳಿ ಬಣ್ಣದ ಶರ್ಟ್ ಧರಿಸಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ