ನಿರ್ಮಲಾ ಸೀತಾರಾಮನ್Image Credit source: tv9 kannada
ಬೆಂಗಳೂರು, ಜೂನ್ 14: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್ಡಿಎ ಸರ್ಕಾರ 12 ವರ್ಷಗಳನ್ನು ಪೂರ್ತಿ ಮಾಡಿದೆ. ಚುನಾಯಿತ ಪ್ರತಿನಿಧಿಯಾಗಿ ನರೇಂದ್ರ ಮೋದಿ ದಾಖಲೆಯ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಡಿಜಿಟಲ್ ಪೇಮೆಂಟ್ ಮೂಲಕ ಬೀದಿ ವ್ಯಾಪಾರಿಗಳು ಯುಪಿಐ ಬಳಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ದಾಖಲೆ ಸೃಷ್ಟಿಸಲಾಗಿದೆ. ಗುಣಮಟ್ಟದ ರಸ್ತೆಗಳ ನಿರ್ಮಾಣವಾಗಿದೆ. ವಾಯುಮಾರ್ಗಗಳು, ಏರ್ಪೋರ್ಟ್, ರೈಲು ಮಾರ್ಗಗಳ ಅಭಿವೃದ್ಧಿ ಆಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸೂತ್ರದಲ್ಲಿ ದೇಶ ಮುನ್ನಡೆಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು
ಬೆಂಗಳೂರಿನ ಜಯನಗರದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈವರೆಗೆ ಬರೋಬ್ಬರಿ 2 ಕೋಟಿಗೂ ಅಧಿಕ ‘ಪಿಎಂ ಜನ ಧನ್’ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸಲು 3.4 ಲಕ್ಷ ಕೋಟಿಗೂ ಅಧಿಕ ಮುದ್ರಾ ಸಾಲವನ್ನು ವಿತರಿಸಲಾಗಿದೆ. ವಿಶೇಷವಾಗಿ ಬೆಂಗಳೂರಿನ ಪೀಣ್ಯ ಮತ್ತು ಶಿರಸಿಯಂತಹ ಪ್ರಮುಖ ಎಂಎಸ್ಎಂಇ ಕೈಗಾರಿಕಾ ವಲಯಗಳಿಗೆ ಇದರಿಂದ ಭಾರಿ ನೆರವಾಗಿದೆ ಎಂದರು.
ನಿರ್ಮಲಾ ಸೀತಾರಾಮನ್ ಟ್ವೀಟ್
In Karnataka: –
– More than 2 crore PM Jan Dhan accounts opened
– Over ₹3.4 lakh crore in MUDRA loans have been disbursed, largely in the state’s MSME pockets like Peenya & Sirsi
– More than 1.9 crore Ayushman cards issued, providing a ₹5 lakh health cover
– 4 crore… pic.twitter.com/VeYzXyl9Xi
— Nirmala Sitharaman Office (@nsitharamanoffc) June 14, 2026
ರಸ್ತೆ ಬದಿಯ 6 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ‘ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲಾಗಿದೆ. ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ 1.9 ಕೋಟಿಗೂ ಅಧಿಕ ‘ಆಯುಷ್ಮಾನ್ ಕಾರ್ಡ್’ಗಳನ್ನು ವಿತರಿಸಲಾಗಿದ್ದು, ಪ್ರತಿ ಕುಟುಂಬಕ್ಕೆ 5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ಸಿಕ್ಕಿದೆ. ಇನ್ನು ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧ ಒದಗಿಸಲು 1,610ಕ್ಕೂ ಹೆಚ್ಚು ‘ಜನೌಷಧಿ ಕೇಂದ್ರ’ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
12 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ
‘ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ’ಗೆ 1.67 ಕೋಟಿ ಹಾಗೂ ‘ಪಿಎಂ ಸುರಕ್ಷಾ ಬಿಮಾ ಯೋಜನೆ’ಗೆ 2.60 ಕೋಟಿ ಜನ ನೊಂದಾಯಿಸಿಕೊಂಡಿದ್ದಾರೆ. ಇದರೊಂದಿಗೆ 49 ಲಕ್ಷ ಜನ ‘ಅಟಲ್ ಪೆನ್ಷನ್ ಯೋಜನೆ’ಯ ಲಾಭ ಪಡೆಯುತ್ತಿದ್ದಾರೆ. 4 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಈ ಯೋಜನೆಯಡಿ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ದೇಶದ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. 12 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಆಗಿದೆ. ಭಾರತದ 15 ಕೋಟಿ ಕುಟುಂಬಕ್ಕೆ ನಲ್ಲಿ ಮೂಲಕ ನೀರು ಸಿಗುತ್ತಿದೆ. 10 ಕೋಟಿ ಕುಟುಂಬಗಳಿಗೂ ಎಲ್ಪಿಜಿ ಕನೆಕ್ಷನ್ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಅನ್ನೋದು ಸರಿಯಲ್ಲ
ಅನುದಾನದ ವಿಚಾರದಲ್ಲಿ ಕೇಂದ್ರದಿಂದ ತಾರತಮ್ಯ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರಕ್ಕೆ ಹೆಚ್ಚು ತೆರಿಗೆ ಪಾಲು ಕೊಡುತ್ತಿದ್ದೇವೆ ಎಂದ ಮಾತ್ರಕ್ಕೆ, ಹೆಚ್ಚು ಅನುದಾನ ಕೊಟ್ಟಿಲ್ಲ ಅನ್ನೋದು ಸರಿಯಲ್ಲ. ಕಲಬುರಗಿ, ಯಾದಗಿರಿಯಂತಹ ಪ್ರದೇಶದಿಂದಲೂ ತೆರಿಗೆ ಸಂಗ್ರಹ ಆಗುತ್ತದೆ. ಆದರೆ ಬೆಂಗಳೂರಿಗೆ ಅನುದಾನ ಹೆಚ್ಚು ಅನ್ನೋದು ಹೇಗೆ ಸರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಕಡೆಗೋಲು ಕೃಷ್ಣನ ದರ್ಶನ ಪಡೆದ ನಿರ್ಮಲಾ ಸೀತಾರಾಮನ್
ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿವೆ. ನಿಮ್ಮಿಂದ ಕೊಡಲು ಆಗುವುದಿದ್ದರೆ ಸದನದಲ್ಲಿ ಚರ್ಚೆ ಮಾಡಿ. ಬಜೆಟ್ನಲ್ಲಿ ನಿಧಿ ಸಂಗ್ರಹದ ಬಗ್ಗೆ ಪ್ಲ್ಯಾನ್ ಮಾಡಿ ಜಾರಿಗೊಳಿಸಿ. ಬೇಕಾಬಿಟ್ಟಿ ಗ್ಯಾರಂಟಿ ನೀಡುವುದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ
ಆರ್ಥಿಕತೆ ವಿನಾಶದತ್ತ ಸಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ರಾಹುಲ್ ಭಾರತದ ಆರ್ಥಿಕತೆ ಬಗ್ಗೆ ನಕರಾತ್ಮಕವಾಗಿ ಮಾತನಾಡುತ್ತಾರೆ. ನಾನು ಸ್ಪಷ್ಟಪಡಿಸುತ್ತೇನೆ, ಆರ್ಥಿಕತೆ ವಿನಾಶದ ಹಾದಿಯಲ್ಲಿ ಇಲ್ಲ. ಕಾಂಗ್ರೆಸ್ ನಾಯಕರು ದುರ್ಬಲ ಭಾರತ ಮಾಡಲು ಹೊರಟಿದ್ದಾರೆ. ಮಧ್ಯಪ್ರಾಚ್ಯದ ಯುದ್ಧದ ನಡುವೆ ಆರ್ಥಿಕ ಬೆಳವಣಿಗೆ ಚೆನ್ನಾಗಿದೆ. ಹೊರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಸಮಸ್ಯೆ ಇದೆ. ಹೆಚ್ಚು ಹಣ ಕೊಡುವ ದೇಶಗಳಿಗೆ ತೈಲ ಸಾಗಾಣಿಕೆ ನಡೆಯುತ್ತಿದೆ. ಹಡಗುಗಳಿಗೆ ವಿಮೆ ಇದ್ದರೂ ಸಹ ಯುದ್ಧ ಕಾಲದಲ್ಲಿ ಉಪಯೋಗವಿಲ್ಲ. ಎಲ್ಲಾ ಚಾಲೆಂಜ್ಗಳ ಮಧ್ಯೆಯೂ ಭಾರತದಲ್ಲಿ LPG ಕೊರತೆಯಾಗಿಲ್ಲ. ರಾಹುಲ್ ಗಾಂಧಿಗೆ ಇದು ಗೊತ್ತಾಗುತ್ತಿಲ್ಲ, ನೆಗೆಟಿವ್ ಹೇಳಿಕೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.