Headlines

ಕರ್ನಾಟಕದ 7 ಜಿಲ್ಲೆಯ 10 ಅಧಿಕಾರಿಗಳ ಮನೆ-ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಕೋಟಿ ಕೋಟಿ ಆಸ್ತಿ, ಚಿನ್ನಾಭರಣ ಪತ್ತೆ – Kannada News | Karnataka Lokayukta Raids: Crores Worth of Disproportionate Assets Unearthed from Officials

ಬೆಂಗಳೂರು, ಜುಲೈ 08: ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು (Lokayukta Raids) ಕೆಲವು ಸರ್ಕಾರಿ ಅಧಿಕಾರಿಗಳಿಗೆ ಶಾಕ್​ ನೀಡಿದ್ದಾರೆ. ಕಚೇರಿ, ಮನೆ ಸೇರಿ ಮೇಲೆ ದಾಳಿ ಮಾಡಿ ಜಾಲಾಡಿದ್ದಾರೆ. ಇನ್ನು ದಾಳಿ ವೇಳೆ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿ, ಚಿನ್ನಾಭರಣ, ನಗದು ಪತ್ತೆಯಾಗಿದ್ದು, ತಿಂಗಳಿಗೆ ಲಕ್ಷವೂ ದಾಟದ ಸಂಬಳ ಇದ್ದರೂ ಕೋಟ್ಯಂತರ ರೂ ಆಸ್ತಿ ಗಳಿಸಿರುವ ರಹಸ್ಯ ಬಯಲಾಗಿದೆ.

ಲೋಕಯುಕ್ತ ಅಧಿಕಾರಿಗಳು ಇಂದು ರಾಜ್ಯದ್ಯಂತ ಭರ್ಜರಿ ಬೇಟೆ ಆಡಿದ್ದಾರೆ. ರಾಜ್ಯದ 7 ಜಿಲ್ಲೆಯ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ಮನೆ-ಕಚೇರಿ ಇಂಚಿಂಚೂ ಜಾಲಡಿದ್ದಾರೆ. ಈ ದಾಳಿ ವೇಳೆ ಸರ್ಕಾರಿ ಅಧಿಕಾರಿಗಳ ಬಳಿ ಕೋಟ್ಯಂತರ ಸಂಪತ್ತಿನ ರಹಸ್ಯ ಬಯಲಾಗಿದೆ.

ಬೆಂಗಳೂರಿನ ನಾಲ್ವರು ಅಧಿಕಾರಿಗಳಿಗೆ ಲೋಕಾ ಶಾಕ್​​

ಬೆಂಗಳೂರಿನ ಮೂವರು ಅಧಿಕಾರಿಗಳಿಗೆ ಸೇರಿದ 14 ಕಡೆಗಳಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಪಿಡಬ್ಲೂ ಇಇ ನರೇಂದ್ರಗೆ ಸೇರಿದ ಮಹಾಲಕ್ಷ್ಮೀ ಲೇಔಟ್ ಮನೆ, ಕಚೇರಿ ಸೇರಿ ನಾಲ್ಕು ಕಡೆ ದಾಳಿ ಮಾಡಲಾಗಿದೆ.‌ ಎಪಿಎಂಸಿ ಉಪ ನಿರ್ದೇಶಕಿ ಪುಷ್ಪಗೆ ಸೇರಿದ ಗೋವಿಂದರಾಜ ನಗರದ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ. ಪ್ರವೀಣ್ ಹರಿ ಕೆಆರ್ ಐಡಿಎಲ್ ರೆಂಜ್ ಆಫೀಸ್​ನಲ್ಲಿ ಸೂಪರಿಡೆಂಟ್​ಗೆ ಸೇರಿದ ಕನಕಪುರದ ಐಷಾರಾಮಿ ಪಾರ್ಮ್ಹೌಸ್ ಸೇರಿದಂತೆ ಒಟ್ಟು 14 ಕಡೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡರ ಆಪ್ತನಿಂದ ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ಜಾಗ ಕಬಳಿಕೆ ಆರೋಪ: ಲೋಕಾಯುಕ್ತಕ್ಕೆ ದೂರು

ಎಪಿಎಂಸಿ ಉಪ ನಿರ್ದೇಶಕಿ ಪುಷ್ಟ ಮನೆಯಲ್ಲಿ 1.5 ಕೆಜಿ ಚಿನ್ನಾಭರಣ ಪತ್ತೆಯಾಗಿದೆ, ಜೊತೆಗೆ ಗೋವಿಂದರಾಜ ನಗರದಲ್ಲಿ ಮನೆ ಹೊಂದಿರುವ ಪುಷ್ಪ ಒಟ್ಟು ಆಸ್ತಿ ಮೌಲ್ಯ 7 ಕೋಟಿಗೂ ಅಧಿಕ ಇದೆಯಂತೆ. ಅಲ್ಲದೆ ಪಿಡಬ್ಲೂಡಿ ಇ.ಇ ನರೇಂದ್ರ ಮನೆಯಲ್ಲಿಯೂ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ. ಜೊತೆಗೆ ಪ್ರವೀಣ್ ಶ್ರೀ ಹರಿ ಕನಕಪುರದಲ್ಲಿ 21 ಎಕರೆಯಲ್ಲಿ ಪಾರ್ಮ್ಹೌಸ್ ಮಾಡಿಕೊಂಡಿದ್ದು ಆಸ್ಟ್ರೀಚ್ ಸೇರಿ ಬೇರೆ ಪ್ರಾಣಿ, ಪಕ್ಷಿಗಳನ್ನ ಸಾಕಿಕೊಂಡಿವುದರ ಬಗ್ಗೆ ಮಾಹಿತಿ ಸಿಕ್ಕಿದ್ದು, ಪರಿಶೀಲನೆ ಮಾಡಿದ್ದಾರೆ.

ಬೇನಾಮಿ ಆಸ್ತಿ, ಲಕ್ಷಾಂತರ ರೂ, ಚಿನ್ನಾಭರಣ ಪತ್ತೆ

ಬೆಂಗಳೂರು ದಕ್ಷಿಣ ‌ತಾಲೂಕಿನ ಕುಂಬಳಗೂಡು ‌ಗ್ರಾಮ ಪಂಚಾಯತಿ ಪಿಡಿಒ ಬಿ ತಿಮ್ಮಯ್ಯ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ದಾಳಿ ವೇಳೆ ಮೂರಂತಸ್ಥಿನ ಮನೆ, ಗೋದಾಮು, ಬೇನಾಮಿ ಆಸ್ತಿ, ಲಕ್ಷಾಂತರ ರೂ ಹಣ, ಚಿನ್ನಾಭರಣಗಳು ಪತ್ತೆಯಾಗಿವೆ.

ಪತ್ನಿ ಹೆಸರಲ್ಲಿ ಪೆಟ್ರೋಲ್ ಬಂಕ್: ಅಪಾರ ಜಮೀನು ಪತ್ತೆ

ರಾಯಚೂರಿನ ದೇವದುರ್ಗ ತಾಲ್ಲೂಕಿನ ಚಿಕ್ಕಹೊನ್ನಕುಣಿ ಕೆಬಿಜೆಎನ್‌ಎಲ್ 4ನೇ ವಿಭಾಗದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಇ ಬಸನಗೌಡ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆ ಲೋಕಾಯುಕ್ತ ದಾಳಿ ಮಾಡಿದೆ. ನಗರದ ಎಚ್‌ಆರ್‌ಬಿ ಲೇಔಟ್‌ನಲ್ಲಿರುವ ನಿವಾಸ, ಯಕ್ಲಾಸಪುರದಲ್ಲಿರುವ ಮೂರು ಮನೆಗಳು, ತೋಟದ ಮನೆ, ರಾಯಚೂರು ಬೈಪಾಸ್ ರಸ್ತೆಯಲ್ಲಿರುವ ಪತ್ನಿ ಅನಿತಾ ಶೆಟ್ಟಿ ಹೆಸರಿನ ಸಿರಿ ಫಿಲ್ಲಿಂಗ್ ನಾಯರಾ ಪೆಟ್ರೋಲ್ ಬಂಕ್, ಅದರ ಪಕ್ಕದ ಬಾರ್ ಆ್ಯಂಡ್​ ರೆಸ್ಟೋರೆಂಟ್, ಗೋಡೌನ್ ಸೇರಿದಂತೆ ಒಟ್ಟು 7 ಸ್ಥಳಗಳಲ್ಲಿ ಅಧಿಕಾರಿಗಳು ದಾಖಲೆಗಳು ಮತ್ತು ಆಸ್ತಿಗಳ ಪರಿಶೀಲನೆ ಮಾಡಿದರು. ಅಲ್ಲದೇ ಇಇ ಬಸನಗೌಡ ದೇವದುರ್ಗದ ಜಾಲಹಳ್ಳಿ ಬಳಿ ಸುಮಾರು 30 ಎಕರೆ ನೀರಾವರಿ ಜಮೀನು ಹೊಂದಿರುವ ಮಾಹಿತಿ ಇದ್ದು, ಆ ಬಗ್ಗೆಯೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಚಿತ್ರದುರ್ಗದ ಇಬ್ಬರು ಅಧಿಕಾರಿಗಳಿಗೆ ಲೋಕಾ ಶಾಕ್​

ಇತ್ತ ಚಿತ್ರದುರ್ಗ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಎರಡು ಕಡೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಬಬ್ಬೂರು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಂಕರ್ ಅವರ ಮನೆ ಹಾಗೂ ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯಲ್ಲಿರುವ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಮನೆ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡಿದೆ.

ಎಸಿಎಫ್ ಕಿರಣ್ ಅಂಗಡಿ ಮನೆ, ಕಚೇರಿ ಮೇಲೂ ದಾಳಿ

ಶಿವಮೊಗ್ಗ ಅರಣ್ಯ ಇಲಾಖೆಯ ಎಸಿಎಫ್ ಕಿರಣ್ ಅಂಗಡಿ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಏಕಕಾಲದಲ್ಲಿ ದಾಳಿ ಮಾಡಿದೆ. ಶಿವಮೊಗ್ಗದ ಕಚೇರಿ ಹಾಗೂ ಧಾರವಾಡ ನಗರದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರುವ ನಿವಾಸ, ಅಳ್ನಾವರ್ ರಸ್ತೆಯಲ್ಲಿರುವ ಫಾರ್ಮ್‌ಹೌಸ್ ಮತ್ತು ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿ ಸೇರಿ ನಾಲ್ಕು ಕಡೆ ಧಾರವಾಡ ಮತ್ತು ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.

20 ಎಕರೆಗೂ ಹೆಚ್ಚು ಜಮೀನು ಹೊಂದಿರುವ ಜೆಸ್ಕಾಂ ಅಧಿಕಾರಿ

ಕಲಬುರಗಿ ಜಿಲ್ಲೆಯಲ್ಲಿ ಜೆಸ್ಕಾಂ ಅಧಿಕಾರಿಯೊಬ್ಬರ ಮನೆ, ಕಚೇರಿ ಸೇರಿ 7 ಕಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದರು. ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಮೃತರಾವ್ ಯಲಾಲ್ ಅವರ ಕಲಬುರಗಿಯ ಜಾಗೃತಿ ಕಾಲೋನಿಯ ಮನೆ, ಬಸವ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲ್ಯಾಟ್, ಕೊತ್ತಂಬರಿ ಲೇಔಟ್‌ನ ಜೆಸ್ಕಾಂ ಕಚೇರಿ ಹಾಗೂ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿರುವ ಮನೆ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ. ಜಾಗೃತಿ ಕಾಲೋನಿಯಲ್ಲಿ ಪ್ಲಾಟಿನಂ ಸ್ಟುಡಿಯೋ ಹಾಗೂ ನಂದೂರ್ ಕೈಗಾರಿಕಾ ಪ್ರದೇಶದಲ್ಲಿ ಫ್ಲ್ಯಾಟ್ ಹೊಂದಿರುವ ಅಮೃತರಾವ್ ಅವರು 20 ಎಕರೆಗೂ ಹೆಚ್ಚು ಜಮೀನು ಹೊಂದಿದ್ದಾರೆ.

ಇದನ್ನೂ ಓದಿ: ಮತ್ತೊಂದು ಸಾಹಸಕ್ಕೆ ಕೈಹಾಕಿದ ಸರ್ಕಾರ: ಬಿಡದಿ ರೀತಿಯಲ್ಲೇ ಮತ್ತೊಂದು ಟೌನ್​​​ಶಿಪ್, ಎಲ್ಲಿ?

ತುಮಕೂರಿನಲ್ಲಿ ಸಣ್ಣ ನೀರಾವರಿ ಇಲಾಖೆಯ ತಿಪಟೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಧುಸೂದನ್​​ ನಿವಾಸ ಮತ್ತು ಕಚೇರಿ ಸೇರಿ 5 ಕಡೆ ಲೋಕಾಯುಕ್ತ ಪೊಲೀಸರು ಏಕಾಲದಲ್ಲಿ ದಾಳಿ ಮಾಡಿದರು. ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ನಿವಾಸ, ತಿಪಟೂರಿನಲ್ಲಿರುವ ಕಚೇರಿ ಹಾಗೂ ಬೆಂಗಳೂರಿನ ಸಂಬಂಧಿಕರ ಮನೆ ಸೇರಿದಂತೆ ಒಟ್ಟು 5 ಕಡೆಗಳಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲನೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *