ಕಿರುತೆರೆ ನಿರ್ಮಾಪಕರ (Television Producers) ಸಂಘವು ಕಲಾವಿದರಿಗೆ ಎಚ್ಚರಿಕೆ ನೀಡಿದೆ, ನಿರ್ಮಾಪಕರ ಬಗ್ಗೆ ಕ್ಷುಲ್ಲಕ ಹೇಳಿಕೆಗಳನ್ನು ನೀಡುವ, ಅಗೌರವದಿಂದ ಸಾರ್ವಜನಿಕ ಹೇಳಿಕೆ ನೀಡುವ ಕಲಾವಿದರ ವಿರುದ್ಧ ಸಂಘದ ನಿಯಮಾವಳಿಗಳ ಪ್ರಕಾರ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದೆ. ಕಿರುತೆರೆ ನಿರ್ಮಾಪಕರ ಸಂಘ (ಕೆಟಿಪಿಎ) ಈ ಬಗ್ಗೆ ವಿವರವಾದ ಹೇಳಿಕೆ ಬಿಡುಗಡೆ ಮಾಡಿದ್ದು, ನಟಿ ಹಂಸಾ, ಬಿಗ್ಬಾಸ್ ಸ್ಪರ್ಧಿ ಧ್ರುವಂತ್, ಬರಹಗಾರ ಸುಂದರ್ ಇನ್ನಿತರರ ಹೇಳಿಕೆಗಳನ್ನು ಖಂಡಿಸಿದೆ.
ಸಂಭಾವನೆ ಬಾಕಿ ಉಳಿಸಿಕೊಂಡ ನಿರ್ಮಾಪಕರ ವಿರುದ್ಧ ನಟಿ ಹಂಸಾ ಅವರು ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ಉಲ್ಲೇಖಿಸಿರುವ ನಿರ್ಮಾಪಕರ ಸಂಘ, ‘ನಿರ್ಮಾಪಕರೊಬ್ಬರ ವಿರುದ್ಧ ಟಿವಿ ಮಾಧ್ಯಮಗಳಲ್ಲಿ ಕಿರುತೆರೆ ನಟಿ ಹಂಸ ಬಳಸಿದ ಭಾಷೆ ಅಸಮಂಜಸವಾಗಿದೆ. ಯಾವುದೇ ವೈಯಕ್ತಿಕ ಅಥವಾ ವೃತ್ತಿಪರ ಸಮಸ್ಯೆಗಳಿದ್ದರೂ ಅದನ್ನು ಸಂಘದ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಸಾರ್ವಜನಿಕವಾಗಿ ನಿರ್ಮಾಪಕರನ್ನು ನಿಂದಿಸುವ ಅಗತ್ಯ ಇರಲಿಲ್ಲ ಎಂದಿದೆ ಸಂಘ. ನಟ, ಮಾಜಿ ಬಿಗ್ಬಾಸ್ ಸ್ಪರ್ಧಿ ಧ್ರುವಂತ್ ನಿರ್ಮಾಪಕರ ಬಗ್ಗೆ ಬಳಸಿರುವ ಭಾಷೆಯ ಬಗ್ಗೆಯೂ ನಿರ್ಮಾಪಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಕೆಲ ನಿರ್ಮಾಪಕರು, ಹೊಸ ಕಲಾವಿದರನ್ನು ಬಳಸಿಕೊಂಡು ಕಳಪೆ ಧಾರಾವಾಹಿ ನಿರ್ಮಿಸುತ್ತಿದ್ದಾರೆ ಎಂದು ಬರಹಗಾರ ಸುಂದರ್ ನೀಡಿರುವ ಹೇಳಿಕೆಗೆ ಉತ್ತರಿಸಿರುವ ನಿರ್ಮಾಪಕರ ಸಂಘ, ‘ಹಿರಿಯ ಕಲಾವಿದರು ಸಹ ಒಂದೊಮ್ಮೆ ಹೊಸ ಕಲಾವಿದರೇ ಆಗಿದ್ದರು. ಅವರಿಗೂ ಆಗ ನಿರ್ಮಾಪಕರು ಅವಕಾಶ ನೀಡಿದ್ದರು. ಕಾಲ ಕಾಲಕ್ಕೆ ಹೊಸ ಕಲಾವಿದರಿಗೆ ಅವಕಾಶ ನೀಡುವುದು ನಿರ್ಮಾಪಕರ ಜವಾಬ್ದಾರಿ ಅದನ್ನೇ ಮಾಡಲಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ:‘ಬಟ್ಟೆ ಬದಲಿಸುವಾಗ..’; ನಿರ್ಮಾಪಕನ ಹೆಸರೂ ಹೇಳಿ ತಮಗಾದ ಕಿರುಕುಳ ವಿವರಿಸಿದ ಕಿರುತೆರೆ ನಟಿ
ನಟ ದಿಲೀಪ್ ರಾಜ್ ಸಾವಿನ ಸಂದರ್ಭದಲ್ಲಿ ಕೇಳಿ ಬಂದ ಕೆಲ ಆರೋಪಗಳಿಗೂ ಸ್ಪಷ್ಟನೆ ನೀಡಿರುವ ನಿರ್ಮಾಪಕರ ಸಂಘ, ‘ದಿಲೀಪ್ ರಾಜ್ ಸಾವಿಗೆ ವಾಹಿನಿಗಳು ನೀಡಿರುವ ಒತ್ತಡ ಕಾರಣ ಎನ್ನಲಾಗಿತ್ತು, ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಘ, ‘ಆಧಾರರಹಿತವಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿದ್ದು ತಪ್ಪು’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ