ನವದೆಹಲಿ, ಮೇ 8: ತಮಿಳುನಾಡಿನಲ್ಲಿ 55 ವರ್ಷಗಳಿಂದ ಡಿಎಂಕೆ ಜೊತೆ ಮೈತ್ರಿಯಲ್ಲಿದ್ದ ಕಾಂಗ್ರೆಸ್ ಈ ಬಾರಿ ವಿಜಯ್ ಅವರ ಟಿವಿಕೆಗೆ (TVK) ಬೆಂಬಲ ಘೋಷಿಸಲು ತಮ್ಮ ದಶಕಗಳ ಮೈತ್ರಿಯನ್ನು ಮುರಿದುಕೊಂಡಿದೆ. ಇದು ಎರಡೂ ಪಕ್ಷಗಳ ನಾಯಕರ ಮೇಲೆ ಪರಿಣಾಮ ಬೀರಿದೆ. ಡಿಎಂಕೆ ಸಂಸದೆ ಕನಿಮೋಳಿ ಅವರು ಲೋಕಸಭೆ ಸ್ಪೀಕರ್ಗೆ ಪತ್ರ ಬರೆದಿದ್ದು, ನಮ್ಮ ಮೈತ್ರಿ ಮುರಿದುಬಿದ್ದಿರುವುದರಿಂದ ನಾವು (ಡಿಎಂಕೆ ಸಂಸದರು) ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಜೊತೆ ಕುಳಿತುಕೊಳ್ಳುವುದಿಲ್ಲ. ನಮಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ ಎಂದು ಕೋರಿದ್ದಾರೆ. ಈ ಪತ್ರವು ಕಾಂಗ್ರೆಸ್ ಜೊತೆಗಿನ ಡಿಎಂಕೆ (DMK) ಮೈತ್ರಿ ಅಂತ್ಯಗೊಂಡಿರುವುದನ್ನು ಮತ್ತು ಇಂಡಿಯ ಮೈತ್ರಿಕೂಟದಿಂದ ಡಿಎಂಕೆ ಹಿಂದೆ ಸರಿದಿರುವುದನ್ನು ಸೂಚಿಸುತ್ತದೆ.
ತಮಿಳುನಾಡಿನಾದ್ಯಂತ 234 ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಇದಕ್ಕೆ ಮೇ 4ರಂದು ಮತ ಎಣಿಕೆ ನಡೆದಿದ್ದು, ತಮಿಳುನಾಡು ವಿಕ್ಟರಿ ಪಾರ್ಟಿ (ಟಿವಿಕೆ) 108 ಸ್ಥಾನಗಳನ್ನು, ಡಿಎಂಕೆ 59 ಸ್ಥಾನಗಳನ್ನು, ಎಐಎಡಿಎಂಕೆ 47 ಸ್ಥಾನಗಳನ್ನು, ಕಾಂಗ್ರೆಸ್ 5 ಸ್ಥಾನಗಳನ್ನು, ಪಿಎಂಕೆ 4 ಸ್ಥಾನಗಳನ್ನು, ಐಯುಎಂಎಲ್ 2 ಸ್ಥಾನಗಳನ್ನು, ಸಿಪಿಐ 2 ಸ್ಥಾನಗಳನ್ನು, ಸಿಪಿಐ (ಎಂ) 2 ಸ್ಥಾನಗಳನ್ನು ಮತ್ತು ವಿಸಿಕೆ 2 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನವನ್ನು ಗೆದ್ದಿವೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು 118 ಸ್ಥಾನಗಳು ಅಗತ್ಯವಿರುವುದರಿಂದ, ಟಿವಿಕೆ ಇತರೆ ಪಕ್ಷಗಳ ಬೆಂಬಲ ಕೋರಿತ್ತು. ಆಗ ಡಿಎಂಕೆ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್ ತನ್ನ ಮೈತ್ರಿಯನ್ನು ಮುರಿದುಕೊಂಡು ಟಿವಿಕೆಗೆ 5 ಶಾಸಕರ ಬೆಂಬಲ ನೀಡಿತು. ಹೀಗಾಗಿ, ಡಿಎಂಕೆ ಸಂಸದೆ ಕನಿಮೋಳಿ ಕಾಂಗ್ರೆಸ್ ಸಂಸದರ ಜೊತೆ ಸಂಸತ್ನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದಿದ್ದಾರೆ.
DMK MP Kanimozhi has written a letter to the Lok Sabha Speaker, requesting a change of seating arrangement in the Lok Sabha.
“I write to respectfully request suitable changes in the seating arrangement of the MP belonging to the DMK in the Lok Sabha. In view of the changed… pic.twitter.com/nFFsjQmFnt
— ANI (@ANI) May 8, 2026
ಇದನ್ನೂ ಓದಿ: ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಲೋಕಸಭೆಯಲ್ಲಿ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಕೋರಿ ಡಿಎಂಕೆ ಸಂಸದೆ ಕನಿಮೋಳಿ ಲೋಕಸಭಾ ಸ್ಪೀಕರ್ಗೆ ಪತ್ರ ಬರೆದಿದ್ದಾರೆ. “ಲೋಕಸಭೆಯಲ್ಲಿ ಡಿಎಂಕೆ ಸಂಸದರಿಗೆ ಆಸನ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುವಂತೆ ಗೌರವಯುತವಾಗಿ ವಿನಂತಿಸಲು ನಾನು ಈ ಪತ್ರ ಬರೆಯುತ್ತಿದ್ದೇನೆ. ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನೊಂದಿಗಿನ ನಮ್ಮ ಮೈತ್ರಿಯ ಅಂತ್ಯವನ್ನು ಪರಿಗಣಿಸಿ, ನಮ್ಮ ಸಂಸದರು ಅವರ ಹತ್ತಿರದಲ್ಲಿ ನೀಡಲಾಗಿರುವ ಆಸನದಲ್ಲಿ ಕುಳಿತುಕೊಳ್ಳುವುದು ಸೂಕ್ತವಲ್ಲ. ಹೀಗಾಗಿ, ಬೇರೆ ಆಸನದ ವ್ಯವಸ್ಥೆ ಮಾಡಿ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈಗ ಎಲ್ಲರ ಕಣ್ಣುಗಳು ಲೋಕಸಭಾ ಸ್ಪೀಕರ್ ಅವರ ನಿರ್ಧಾರದ ಮೇಲೆ ನೆಟ್ಟಿವೆ. ಅವರು ಈ ವಿನಂತಿಯನ್ನು ಅಂಗೀಕರಿಸಿದರೆ, ಸದನದ ಆಸನ ಪಟ್ಟಿಯಲ್ಲಿ ಬದಲಾವಣೆಯಾಗಲಿದೆ ಮತ್ತು ಡಿಎಂಕೆ ವಿರೋಧ ಪಕ್ಷದ ಪಾಳಯದಲ್ಲಿ ಸ್ವತಂತ್ರ ಬಣವಾಗಿ ಕಾಣಿಸಿಕೊಳ್ಳುತ್ತದೆ. ಈ ಬೆಳವಣಿಗೆಯು ವಿರೋಧ ಪಕ್ಷದ ಒಗ್ಗಟ್ಟಿನ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಡಿಎಂಕೆ ಲೋಕಸಭೆಯಲ್ಲಿ 22 ಮತ್ತು ರಾಜ್ಯಸಭೆಯಲ್ಲಿ 8 ಸಂಸದರನ್ನು ಹೊಂದಿದೆ. ಇಂಡಿಯ ಮೈತ್ರಿಕೂಟವನ್ನು ತೊರೆಯುವ ಡಿಎಂಕೆ ನಿರ್ಧಾರವು ಈ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ನೀಡಲಿದೆ. ಇದು ಹಲವಾರು ಪ್ರಮುಖ ಮಸೂದೆಗಳ ಮೇಲಿನ ಮತದಾನದ ಮೇಲೂ ಪರಿಣಾಮ ಬೀರಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ