ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 1998ರ ಕೃಷ್ಣಮೃಗ ಬೇಟೆ ಪ್ರಕರಣದ ಹಿನ್ನೆಲೆಯನ್ನು ಆಧರಿಸಿ ಸಿದ್ಧವಾಗುತ್ತಿರುವ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran: The Battle for Legacy) ಸಿನಿಮಾ ವಿವಾದ ಈಗ ನ್ಯಾಯಾಲಯದ ಅಂಗಳ ತಲುಪಿದೆ. ಸಲ್ಮಾನ್ ಖಾನ್ ಸಲ್ಲಿಸಿರುವ ತುರ್ತು ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಜೂನ್ 19ಕ್ಕೆ ನಿಗದಿಪಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ (Salman Khan) ಮತ್ತು ‘ಕಾಲಾ ಹಿರಣ್’ ಸಿನಿಮಾ ನಿರ್ಮಾಪಕ ನಡುವೆ ಕಾನೂನಿನ ಸಮರ ಶುರುವಾಗಿದೆ.
ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು ಚಿತ್ರತಂಡ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಸಲ್ಮಾನ್ ಖಾನ್ ಅವರು ಚಿತ್ರದ ನಿರ್ಮಾಣ, ಪ್ರಚಾರ ಹಾಗೂ ಬಿಡುಗಡೆಗೆ ತಕ್ಷಣವೇ ತಡೆ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಇತ್ತೀಚೆಗಷ್ಟೇ ಬಿಡುಗಡೆಯಾದ ಟೀಸರ್ನಲ್ಲಿ ಸಲ್ಮಾನ್ ಖಾನ್ ಅವರ ಸಾರ್ವಜನಿಕ ಇಮೇಜ್, ಅವರ ಐಕಾನಿಕ್ ಬ್ರೇಸ್ಲೆಟ್ ಮತ್ತು ಅವರ ವೈಯಕ್ತಿಕ ಕಾನೂನು ಹೋರಾಟದ ವಿವರವನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಎಂದು ಸಲ್ಮಾನ್ ಪರ ವಕೀಲರು ವಾದಿಸಿದ್ದಾರೆ.
ಚಿತ್ರದ ಪ್ರಚಾರದ ಉದ್ದೇಶಕ್ಕಾಗಿ ಚಿತ್ರತಂಡವು ಪರೋಕ್ಷವಾಗಿ ಸಲ್ಮಾನ್ ಖಾನ್ ಹೆಸರನ್ನು ಬಳಸಿಕೊಳ್ಳುತ್ತಿದ್ದು, ಇದರಿಂದ ಅವರ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮುನ್ನ ಸಲ್ಮಾನ್ ಖಾನ್ ಅವರ ಕಾನೂನು ತಂಡವು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿ, ಚಿತ್ರದ ಕೆಲಸಗಳನ್ನು ನಿಲ್ಲಿಸುವಂತೆ ಹಾಗೂ ಪ್ರಚಾರದ ವಸ್ತುಗಳನ್ನು ಹಿಂಪಡೆಯುವಂತೆ ಸೂಚಿಸಿತ್ತು. ಆದರೆ ನಿರ್ಮಾಪಕ ಅಮಿತ್ ಜಾನಿ ನೇತೃತ್ವದ ಚಿತ್ರತಂಡ ಇದಕ್ಕೆ ಕಿವಿಕೊಡದೆ ಸಿನಿಮಾದ ಕೆಲಸವನ್ನು ಮುಂದುವರಿಸಿದೆ.
‘ಕಾಲಾ ಹಿರಣ್’ ಚಿತ್ರದ ಟೀಸರ್:
ಅಮಿತ್ ಜಾನಿ ನಿರ್ಮಾಣದ ಈ ಚಿತ್ರವು ಸಲ್ಮಾನ್ ಖಾನ್ ಮತ್ತು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ನಡುವಿನ ಹಗೆತನದ ಕಥೆಯನ್ನು ಹೋಲುತ್ತಿರುವುದರಿಂದ ಈಗಾಗಲೇ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಜೂನ್ 19ರಂದು ನಡೆಯಲಿರುವ ದೆಹಲಿ ಹೈಕೋರ್ಟ್ ವಿಚಾರಣೆಯು ಈ ಬಹುಚರ್ಚಿತ ಸಿನಿಮಾದ ಭವಿಷ್ಯವನ್ನು ನಿರ್ಧರಿಸಲಿದ್ದು, ಬಾಲಿವುಡ್ನಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ‘ಕಾಲಾ ಹಿರಣ್’ ಟೀಸರ್: ವಿವಾದಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ರೀತಿಯೇ ಕಾಣುವ ನಟ
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ‘ಕಾಲಾ ಹಿರನ್’ ಚಿತ್ರದ ಟೀಸರ್ ಅತ್ಯಂತ ವಿವಾದಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಸಲ್ಮಾನ್ ಖಾನ್ ಅವರನ್ನೇ ಹೋಲುವ ‘ಅಯಾನ್ ಖಾನ್’ ಪಾತ್ರವು ರಾತ್ರಿಯಲ್ಲಿ ಕಾಡಿನ ಮಧ್ಯೆ ಕೃಷ್ಣಮೃಗವನ್ನು ಬೇಟೆಯಾಡುವ ದೃಶ್ಯಗಳು ಮತ್ತು ಆ ಘಟನೆಯ ನಂತರ ಜೈಲಿನ ಒಳಗಿನಿಂದಲೇ ‘ಲಯನ್ ಬಿಷ್ಣೋಯ್’ ಎಂಬ ಪಾತ್ರವು ಮುಂಬೈ ಅಂಡರ್ವರ್ಲ್ಡ್ಗೆ ಸವಾಲು ಹಾಕುತ್ತಾ ಕೊಲೆ ಬೆದರಿಕೆ ಒಡ್ಡುವ ಡೈಲಾಗ್ಗಳು ಟೀಸರ್ನ ಹೈಲೈಟ್ ಆಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.