Headlines

ಕೆಪಿಎಸ್​ಸಿ ವಿರುದ್ಧ ಮತ್ತೆ ಅಕ್ರಮ ಆರೋಪ: ಬಿಜೆಪಿ ಮುಖಂಡ ಭಾಸ್ಕರ್ ರಾವ್ ಕಿಡಿ – Kannada News | BJP leader Bhaskar Rao spark on KPSC accuses of illegality again

ಬೆಂಗಳೂರು, ಮಾರ್ಚ್​ 04: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮತ್ತೆ ಅಕ್ರಮ ಆರೋಪ ಕೇಳಿಬಂದಿದೆ. ಕೆಪಿಎಸ್​ಸಿಯ ಕೆಎಎಸ್​​ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ (Bhaskar Rao)​​ ತೀವ್ರ ಕಳವಳ ವ್ಯಕ್ತಪಡಿಸಿದ್ದು, ರಾಜ್ಯದ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಜವಾಬ್ದಾರಿಯುತ ಸಂಸ್ಥೆಯ ನಂಬಿಕೆಯನ್ನು ಸಾರ್ವಜನಿಕರು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆಂದು ಕಿಡಿಕಾರಿದ್ದಾರೆ.

ಕೆಪಿಎಸ್​ಸಿ ಹಗರಣದ ಸುದ್ದಿಗಳು ತೀವ್ರ ಕಳವಳಕಾರಿ ಎಂದ ಭಾಸ್ಕರ್ ರಾವ್

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಪೋಸ್ಟ್ ಮಾಡಿದ್ದು, ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಮತ್ತೊಂದು ಅಕ್ರಮದ ಸುದ್ದಿ ಹೊರಬಿದ್ದಿರುವುದು ಕೇವಲ ಆತಂಕಕಾರಿಯಷ್ಟೇ ಅಲ್ಲ, ಇದು ನಮ್ಮ ಆಡಳಿತ ವ್ಯವಸ್ಥೆಯ ನೈತಿಕ ಅಧಃಪತನದ ಸಂಕೇತವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ಅರ್ಹತೆ ಮತ್ತು ಪ್ರತಿಭೆಯನ್ನು ಒರೆಗೆ ಹಚ್ಚುವ ಪವಿತ್ರ ಪ್ರಕ್ರಿಯೆಯಾಗಬೇಕು. ಆದರೆ, ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನದಲ್ಲಿನ ಅಕ್ರಮಗಳು ಮತ್ತು ನೇಮಕಾತಿ ಭ್ರಷ್ಟಾಚಾರಗಳು, ವ್ಯವಸ್ಥೆಯ ಮೇಲಿನ ಯುವಜನತೆಯ ನಂಬಿಕೆಯನ್ನು ಬುಡಮೇಲು ಮಾಡುತ್ತಿವೆ. ಇದು ಕೇವಲ ಒಂದು ಹುದ್ದೆಯ ಕಳ್ಳತನವಲ್ಲ, ಬದಲಾಗಿ ನಾಡಿನ ಭವಿಷ್ಯದ ಆಡಳಿತ ಯಂತ್ರದ ಮೇಲೆ ನಡೆಯುತ್ತಿರುವ ಪ್ರಹಾರವಾಗಿದೆ ಎಂದಿದ್ದಾರೆ.

ಭಾಸ್ಕರ್ ರಾವ್ ಟ್ವೀಟ್​​

ಸಾಂವಿಧಾನಿಕ ಸಂಸ್ಥೆಯಾಗಿರುವ ಕೆಪಿಎಸ್ಸಿ, ತನ್ನ ಪಾವಿತ್ರ್ಯತೆ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತಿರುವಂತೆ ಗೋಚರಿಸುತ್ತಿದೆ. ಒಂದು ಕಾಲದಲ್ಲಿ ಪ್ರತಿಭಾವಂತ ಯುವಕರು ಹೆಮ್ಮೆಯಿಂದ ನೋಡುತ್ತಿದ್ದ ಈ ಸಂಸ್ಥೆ, ಇಂದು ಆಡಳಿತಾತ್ಮಕ ಲೋಪಗಳ ಆರೋಪದ ನೆರಳಿನಲ್ಲಿ ನರಳುತ್ತಿದೆ. ಪರೀಕ್ಷಾ ಪ್ರಕ್ರಿಯೆಗಳಲ್ಲಿನ ಪಾರದರ್ಶಕತೆಯ ಕೊರತೆ, ತಂತ್ರಜ್ಞಾನದ ಸಮರ್ಪಕ ಅಳವಡಿಕೆಯಿಲ್ಲದಿರುವುದು ಮತ್ತು ಆಂತರಿಕ ಭದ್ರತೆಯನ್ನು ಕಾಪಾಡುವಲ್ಲಿನ ಅಸಹಾಯಕತೆ ಸಂಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಅರ್ಹರನ್ನು ಆಯ್ಕೆ ಮಾಡಬೇಕಾದ ವ್ಯವಸ್ಥೆಯೇ ಅನುಮಾನದ ಹುತ್ತವಾದರೆ, ರಾಜ್ಯದ ಆಡಳಿತದಲ್ಲಿ ದಕ್ಷತೆಯನ್ನು ನಿರೀಕ್ಷಿಸುವುದು ಹೇಗೆ ಎಂಬುದು ಬೌದ್ಧಿಕ ವಲಯದ ಪ್ರಮುಖ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: KAS ಗ್ರೂಪ್ ಎ,ಬಿ ಪರೀಕ್ಷೆ ರಿಸಲ್ಟ್ ವಿರುದ್ಧ ವಿದ್ಯಾರ್ಥಿಗಳ ಅಪಸ್ವರ: ಸಿಬಿಐ ತನಿಖೆಗೆ ಒತ್ತಾಯ

ಈ ಸಾಲು ಸಾಲು ಅಕ್ರಮಗಳಿಗೆ ಕೇವಲ ಕೆಪಿಎಸ್ಸಿ ಮಾತ್ರವಲ್ಲ, ಆಡಳಿತ ಯಂತ್ರವನ್ನು ನಿಯಂತ್ರಿಸುವ ಸರ್ಕಾರಗಳ ವ್ಯವಸ್ಥಿತ ನಿರ್ಲಕ್ಷ್ಯ ಮತ್ತು ಇಚ್ಛಾಶಕ್ತಿಯ ಕೊರತೆಯೂ ಕಾರಣವಾಗಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಈ ಅಕ್ರಮಗಳ ತನಿಖೆಗಳು ಕೇವಲ ತಾತ್ಕಾಲಿಕ ಶಮನದ ತಂತ್ರಗಳಾಗುತ್ತಿವೆಯೇ ಹೊರತು, ವ್ಯವಸ್ಥೆಯ ಶಾಶ್ವತ ಶುದ್ಧೀಕರಣಕ್ಕೆ ದಾರಿಮಾಡಿಕೊಡುತ್ತಿಲ್ಲ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಹೊಸ ಕಾಯ್ದೆಗಳನ್ನು ಜಾರಿಗೆ ತರುವಲ್ಲಿ ಮತ್ತು ಭ್ರಷ್ಟರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವಲ್ಲಿ ಸರ್ಕಾರಗಳು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ. ರಾಜಕೀಯ ಇಚ್ಛಾಶಕ್ತಿಯ ಕೊರತೆಯು ಪರೋಕ್ಷವಾಗಿ ಇಂತಹ ಅಕ್ರಮ ಜಾಲಗಳಿಗೆ ರಕ್ಷಣಾ ಕವಚವನ್ನು ಒದಗಿಸುತ್ತಿದೆ.
ಈ ಸಾಂಸ್ಥಿಕ ವೈಫಲ್ಯದ ಅತಿ ದೊಡ್ಡ ಬಲಿಪಶುಗಳೆಂದರೆ ಹಗಲಿರುಳು ಎನ್ನದೆ, ವರ್ಷಾನುಗಟ್ಟಲೆ ಓದಿ ಪರೀಕ್ಷೆ ಬರೆಯುವ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳು. ತಮ್ಮ ಯೌವನದ ಅಮೂಲ್ಯ ವರ್ಷಗಳನ್ನು ಸಿದ್ಧತೆಗಾಗಿ ಮುಡಿಪಾಗಿಡುವ ಈ ಯುವಜನತೆಗೆ, ಇಂತಹ ಅಕ್ರಮದ ಸುದ್ದಿಗಳು ತೀವ್ರ ಮಾನಸಿಕ ಆಘಾತವನ್ನು ನೀಡುತ್ತವೆ. ಹಣ ಮತ್ತು ಪ್ರಭಾವವಿದ್ದವರಿಗೆ ಮಾತ್ರ ಅವಕಾಶ ಎಂಬ ಅಲಿಖಿತ ನಿಯಮ ಸೃಷ್ಟಿಯಾದರೆ, ಪ್ರತಿಭೆಗೆ ಬೆಲೆ ಎಲ್ಲಿದೆ? ಇದು ಕೇವಲ ನಿರುದ್ಯೋಗದ ಸಮಸ್ಯೆಯಲ್ಲ, ಯುವಸಮುದಾಯವನ್ನು ಹತಾಶೆಗೆ ತಳ್ಳಿ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುವ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದಿದ್ದಾರೆ.

ಇದು ಪರಸ್ಪರ ಕೆಸರೆರಚಾಟದ ಸಮಯವಲ್ಲ

ಇದು ಪರಸ್ಪರ ಕೆಸರೆರಚಾಟದ ಸಮಯವಲ್ಲ, ಬದಲಾಗಿ ಸಂಪೂರ್ಣ ನೇಮಕಾತಿ ವ್ಯವಸ್ಥೆಯನ್ನು ರಚನಾತ್ಮಕ ಸುಧಾರಣೆಗೆ ಒಳಪಡಿಸುವ ತುರ್ತು ಅಗತ್ಯವಿದೆ. ಕೆಪಿಎಸ್ಸಿಯನ್ನು ಯುಪಿಎಸ್ಸಿ ಮಾದರಿಯಲ್ಲಿ ಸಂಪೂರ್ಣವಾಗಿ ವೃತ್ತಿಪರಗೊಳಿಸುವುದು, ಪರೀಕ್ಷಾ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಡಿಜಿಟಲೀಕರಣಗೊಳಿಸಿ ಮಾನವ ಹಸ್ತಕ್ಷೇಪವನ್ನು ಕನಿಷ್ಠಗೊಳಿಸುವುದು ಇಂದಿನ ಜರೂರಾಗಿದೆ. ಸರ್ಕಾರವು ಕೇವಲ ತನಿಖೆಯ ಭರವಸೆ ನೀಡದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಒಂದು ನಿದರ್ಶನವನ್ನು ಸೃಷ್ಟಿಸಬೇಕು. ಇಲ್ಲವಾದಲ್ಲಿ, ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಪರಿಕಲ್ಪನೆ ಕೇವಲ ಭ್ರಮೆಯಾಗಿ ಉಳಿಯುತ್ತದೆ ಎಂದು ಭಾಸ್ಕರ್ ರಾವ್​ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *