ಕೊಟ್ಟಿರೋ 11 ಲಕ್ಷ ರೂ. ಸ್ಕಾರ್ಪಿಯೋ ಕಾರು ಸಾಕಾಗಿಲ್ಲ, ಹೆಚ್ಚು ಹಣ ತರುವಂತೆ ಕಿರುಕುಳ, ಮಹಡಿಯಿಂದ ಬಿದ್ದು ಮಹಿಳೆ ಸಾವು – Kannada News | Family Raises Dowry Harassment Allegations After Greater Noida Woman Found Dead

ನೋಯ್ಡಾ, ಮೇ 18: ಮಗಳ ಮದುವೆ(Marriage)ಗಾಗಿ ಆಕೆಯ ತಂದೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಕೇಳಿದ್ದೆಲ್ಲವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದರು. ಆದರೆ ವರದಕ್ಷಿಣೆಯ ರಕ್ಕಸ ಹಪಾಹಪಿಗೆ ಕೇವಲ 25 ವರ್ಷದ ದೀಪಿಕಾ ನಾರಂಗ್ ಎಂಬಾಕೆ ಪ್ರಾಣ ಕಳೆದುಕೊಂಡಿದ್ದಾಳೆ. ಮದುವೆಯಾಗಿ 17 ತಿಂಗಳಿಗೆ ಮೂರನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಘಟನೆ ನೋಯ್ಡಾದಲ್ಲಿ ನಡೆದಿದೆ.

ಈಕೆಯ ತಂದೆ ಸಂಜಯ್ ನಾರಂಗ್ ಇದು ಆತ್ಮಹತ್ಯೆಯಲ್ಲ, ಇದೊಂದು ಭೀಕರ ಕೊಲೆ ಎಂದು ಕಣ್ಣೀರು ಹಾಕಿದ್ದಾರೆ. 2024ರ ಡಿಸೆಂಬರ್​​ನಲ್ಲಿ ದೀಪಿಕಾ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮಗಳು ಚೆನ್ನಾಗಿರಲೆಂದು ಸಂಜಯ್ 11 ಲಕ್ಷ ರೂ. ಹಾಗೂ ಐಷಾರಾಮಿ ಸ್ಕಾರ್ಪಿಯೋ ಕಾರು ಕೊಟ್ಟಿದ್ದರು. ಮದುವೆಯಾಗಿ ಮೂರ್ನಾಲ್ಕು ತಿಂಗಳಲ್ಲೇ ಅತ್ತೆ, ಮಾವ ಮತ್ತು ಪತಿ ರಿತಿಕ್ ವರದಕ್ಷಿಣೆ ಕೊಟ್ಟಿದ್ದು ಸಾಲದೆಂದು ಆಕೆಗೆ ಕಿರುಕುಳ ಕೊಡಲು ಶುರು ಮಾಡಿದ್ದರು.

ಭಾನುವಾರ ಮಧ್ಯಾಹ್ನ ದೀಪಿಕಾ ತನ್ನ ತಂದೆಗೆ ಅಳುತ್ತಾ ಕರೆ ಮಾಡಿದ್ದಳು, ಪತಿ ಮತ್ತು ಅತ್ತೆ ಮಾವ ಸೇರಿ ನನಗೆ ಹೊಡೆಯುತ್ತಾರೆ ಎಂದು ಅಳಲು ತೋಡಿಕೊಂಡಿದ್ದಳು. ಮಗಳ ಸ್ಥಿತಿ ಕೇಳಿ ಕಳವಳಗೊಂಡ ಸಂಜಯ್ ಅದೇ ದಿನ ಸಂಜೆ ಸಂಬಂಧಿಕರೊಟ್ಟಿಗೆ ಅತ್ತೆಯ ಮನೆಗೆ ಹೋಗಿ ಸಮಾಧಾನ ಮಾಡಲು ಪ್ರಯತ್ನಿಸಿದ್ದರು. ಬಳಿಕ ಮನೆಗೆ ವಾಪಸಾಗಿದ್ದರು. ಅವರು ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ರಾತ್ರಿ 12.30ರ ಸುಮಾರಿಗೆ ದೀಪಿಕಾ ಛಾವಣಿಯಿಂದ ಬಿದ್ದಿದ್ದಾಳೆ ಎನ್ನುವ ಆಘಾತಕಾರಿ ಕರೆ ಬಂದಿತ್ತು.

ಮತ್ತಷ್ಟು ಓದಿ: ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ: ಆಮಂತ್ರಣ ಕೊಡಲು ಹೋದ ವೇಳೆ ಮನೆಗೆ ಕನ್ನ, ವಧುವಿಗೆಂದು ತಂದಿದ್ದ ಆಭರಣ ಕದ್ದ ಕಳ್ಳರು

ಅದು ಆತ್ಮಹತ್ಯೆಯಲ್ಲ ಆಕೆಯ ಹೊಟ್ಟೆಗೆ ಚಾಕು ಅಥವಾ ಸ್ಕ್ರೂಡ್ರೈವರ್​ನಿಂದ ಇರಿದು ಕೊಲೆ ಮಾಡಿ ಬಳಿಕ ಮೇಲಿಂದ ತಳ್ಳಿ, ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂದು ತಂದೆ ದೂರು ಕೊಟ್ಟಿದ್ದಾರೆ. ಕಳೆದ 10 ತಿಂಗಳಿನಿಂದ ಇವರ ಕಿರುಕುಳ ಹೆಚ್ಚಾಗಿತ್ತು. ಮಗಳ ಸಂಸಾರ ಹಾಳಾಗಬಾರದೆಂದು ನಾವು ಸುಮ್ಮನಿದ್ದೆವು , ಈಗ ಎಲ್ಲವೂ ಮುಗಿದುಹೋಗಿದೆ ಎಂದು ತಂದೆ ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆಯಲ್ಲಿದ್ದ ದೀಪಿಕಾ ದೇಹದ ಮೇಲೆ ಕೆಲವು ಗಾಯದ ಗುರುತುಗಳಿದ್ದು, ಮೂಗು ಮತ್ತು ಕಿವಿಗಳಿಂದ ರಕ್ತ ಬರುತ್ತಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತಳ ಪತಿ ರಿತಿಕ್ ತನ್ವರ್ ಮತ್ತು ಮಾವ ಮನೋಜ್‌ನನ್ನು ಈಗಾಗಲೇ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ಅಸಲಿ ರಹಸ್ಯ ಹೊರಬರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *