ಕೋಲಾರ, ಫೆಬ್ರವರಿ 25: ಕೋಲಾರ ಸಿಲ್ಕ್ ಮತ್ತು ಮಿಲ್ಕ್ ಉತ್ಪಾದನೆಯಲ್ಲಿ ಹೆಸರುವಾಸಿಯಾದ ಜಿಲ್ಲೆ. ಅಪರೂಪಕ್ಕೆ ಒಮ್ಮೆ ಸಿಲ್ಕ್ (Silk) ಉತ್ಪಾದನೆ ಮಾಡುವ ರೈತರ ಮುಖದಲ್ಲಿ ಸಂತಸ ಮೂಡುವಂತ ಬೆಲೆ ರೈತರಿಗೆ ಸಿಗುತ್ತಿದೆ. ಕೊರೊನಾ ನಂತರದ ದಿನಗಳಲ್ಲಿ ಇದೇ ಮೊದಲ ಬಾರಿಗೆ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿದೆ. ಕೆಜಿಗೆ ಸಾವಿರಾರು ರೂ ಮಾರಾಟ ಹಿನ್ನೆಲೆ ರೇಷ್ಮೆ ಬೆಳೆಗಾರರು ಸಂತಸಗೊಂಡಿದ್ದಾರೆ.
800 ರಿಂದ 1000 ರೂ
ಕಳೆದ ಎರಡು ಮೂರು ದಿನಗಳಿಂದ ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರ ಮುಖದಲ್ಲಿ ನಗು ದುಪ್ಪಟ್ಟಾಗಿದೆ. ಅದಕ್ಕೆ ಕಾರಣ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆಗೆ ಉತ್ತಮ ಬೆಲೆ ಸಿಗುತ್ತಿದೆ. ಕೆಜಿ ಬಯೋಲ್ಟಿನ್ ರೇಷ್ಮೆ 800 ರಿಂದ 1000 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಕಷ್ಟಪಟ್ಟು ಬೆಳೆದ ರೇಷ್ಮೆ ಬೆಳೆಗಾರರ ಮುಖದಲ್ಲಿ ಸಂತೋಷ ಹಿಮ್ಮಡಿಯಾಗುತ್ತಿದೆ.
ಇದನ್ನೂ ಓದಿ: ದೇಶ-ವಿದೇಶಗಳಿಗೆ ಹಣ್ಣು, ತರಕಾರಿ, ಹೂವು ರಫ್ತು ಮಾಡುವ ‘ಕೃಷಿ ಕಣಜ’ ಕೋಲಾರಕ್ಕೆ ದೊಡ್ಡ ಸಂಕಷ್ಟ
ಕೊರೊನೊ ಕಾಲದಲ್ಲಿ ಚೀನಾ ರೇಷ್ಮೆಯ ಆಮದು ನಿಲ್ಲಿಸಿದ್ದ ಸಮಯದಲ್ಲಿ ರೇಷ್ಮೆಗೆ ಈ ರೀತಿಯ ಬೆಲೆ ಬಂದಿತ್ತು. ಅದಾದ ನಂತರ ಇಷ್ಟು ಬೆಲೆ ಬಂದಿರುವುದು ರೇಷ್ಮೆ ಬೆಳೆಗಾರರಲ್ಲಿ ಸಂತೋಷಕ್ಕೆ ಕಾರಣವಾಗಿದೆ. ಆದರೆ ರೇಷ್ಮೆ ಬೆಲೆ ಏರಿಕೆಯಾಗಲು ಕಾರಣ ವಾತಾವರಣದಲ್ಲಿನ ಏರುಪೇರು. ಹಿಪ್ಪುನೇರಳೆ ಬೆಳೆ ಗುಣಮಟ್ಟ ಕುಸಿತ ಹಾಗೂ ರೇಷ್ಮೆ ಗೂಡು ಉತ್ಪಾದನೆಯಲ್ಲೂ ತೀವ್ರ ಕುಸಿತ ಕಂಡಿದ್ದು, ಮಾರುಕಟ್ಟೆಯಲ್ಲಿ ಬಯೋಲ್ಟಿನ್ ರೇಷ್ಮೆಗೆ ಬೇಡಿಕೆ ಹೆಚ್ಚಿರುವ ಕಾರಣದಿಂದ ರೇಷ್ಮೆ ನೂಲು ತೆಗೆಯುವ ರೀಲರ್ಸ್ ಹೆಚ್ಚಿನ ಬೆಲೆ ಕೊಟ್ಟು ರೇಷ್ಮೆ ಗೂಡು ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆಗೆ ಉತ್ತಮ ಬೆಲೆ ಸಿಗುತ್ತಿದೆ. ಹೀಗಾಗಿ ರೇಷ್ಮೆ ಬೆಳೆಗಾರರು ಕೂಡ ಸಂತೋಷಗೊಂಡಿದ್ದಾರೆ.

ಇನ್ನು ಕೋಲಾರ ಜಿಲ್ಲೆಯಲ್ಲಿ ಹಲವು ದಶಕಗಳಿಂದ ರೇಷ್ಮೆ ಬೆಳೆಯನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಅವಲಂಬಿತವಾಗಿವೆ. ಜಿಲ್ಲೆಯಲ್ಲಿ ಸುಮಾರು 20,134 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳಿ ಅಥವಾ ಮಲ್ಬರಿ ಬೆಳೆ ಬೆಳೆಯಲಾಗುತ್ತಿದ್ದು, 11,500 ಮೆಟ್ರಿಕ್ ಟನ್ನಷ್ಟು ರೇಷ್ಮೆ ಉತ್ಪಾದನೆ ಮಾಡಲಾಗುತ್ತದೆ. ಇನ್ನು ಜಿಲ್ಲೆಯಲ್ಲಿ ಸುಮಾರು 1477 ಗ್ರಾಮಗಳ 19,739 ಜನ ರೈತರು ರೇಷ್ಮೆ ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂಲಿಕಾರರ ಸಮಸ್ಯೆ, ವಾತಾವರಣದಲ್ಲಿನ ಏರುಪೇರಿನ ಪರಿಣಾಮವಾಗಿ ರೇಷ್ಮೆ ಬೆಳೆಗಾರರ ಸಂಖ್ಯೆ ಕ್ಷೀಣಿಸುತ್ತಿದೆ.
ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಶ್ರೀನಿವಾಸ್ ಹೇಳಿದ್ದಿಷ್ಟು
ಮೊದಲೆಲ್ಲಾ ಒಂದು ಟನ್ ರೇಷ್ಮೆ ಉತ್ಪಾದನೆ ಮಾಡುತ್ತಿದ್ದ ರೈತರು ಈಗ 400 ರಿಂದ 500 ಕೆಜಿ ರೇಷ್ಮೆ ಉತ್ಪಾದನೆ ಮಾಡುವ ಸ್ಥಿತಿಗೆ ತಲುಪಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೇಷ್ಮೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇರುವ ಹಿನ್ನೆಲೆ ಜೊತೆಗೆ ರೇಷ್ಮೆ ಬೆಲೆ ಕೂಡ ಉತ್ತಮ ಬೆಲೆ ಕಾಪಾಡಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಯತ್ತ ರೈತರು ಒಲವು ತೋರಿದಲ್ಲಿ ಉತ್ತಮ ಆದಾಯ ಗಳಿಸಬಹುದು ಅನ್ನೋದು ರೇಷ್ಮೆ ಮಾರುಕಟ್ಟೆ ಉಪನಿರ್ದೇಶಕ ಶ್ರೀನಿವಾಸ್ ಮಾತು.
ಲಕ್ಷಾಂತರ ರೂ ಸಂಪಾದನೆ ಮಾಡಲು ಅವಕಾಶವಿದೆ: ಆಂಜನೇಯರೆಡ್ಡಿ
ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ರೇಷ್ಮೆಗೆ ಒಳ್ಳೆಯ ಬೆಲೆ ಸಿಗುತ್ತಿದ್ದು, ರೇಷ್ಮೆ ಬೆಳೆಗಾರರು ಲಕ್ಷ ಲಕ್ಷ ಹಣ ಸಂಪಾದನೆ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ರೇಷ್ಮೆ ಇಲಾಖೆಯಿಂದ ರೈತರಿಗೆ ರೇಷ್ಮೆ ಬೆಳೆ ಬೆಳೆಯಲು ಸಹ ಹಲವು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಅನ್ನೋದು ರೇಷ್ಮೆ ಇಲಾಖೆ ಉಪನಿರ್ದೇಶಕ ಆಂಜನೇಯರೆಡ್ಡಿ ಮಾತು.
ಇದನ್ನೂ ಓದಿ: ನಮ್ಮ ಕೋಲಾರದಲ್ಲಿ ತಯಾರಾಗುವ ಹೆಲಿಕಾಪ್ಟರ್ಗಳ ವಿಶೇಷತೆ ಏನು? ತಿಳಿದುಕೊಳ್ಳಿ
ಸದ್ಯ ರೇಷ್ಮೆ ಬೆಳೆಗಾರರಿಗೆ ಉತ್ತಮ ಬೆಲೆ ಸಿಕ್ಕಿದ್ದು, ಇತ್ತೀಚೆಗೆ ರೇಷ್ಮೆ ಬೆಳೆಯಿಂದಲೇ ದೂರ ಸರಿಯಬೇಕು ಎಂದುಕೊಂಡಿದ್ದ ರೈತರಿಗೆ ಈ ಬೆಲೆ ಏರಿಕೆ ಹೊಸ ಉತ್ಸಾಹವನ್ನು ತುಂಬಿದೆ. ರೇಷ್ಮೆ ಬೆಳೆಗಾರರಿಗೆ ಪ್ರೇರಣೆ ನೀಡುವಲ್ಲಿ ಈ ಉತ್ತಮ ಬೆಲೆ ಸಹಕಾರಿಯಾಗಿರುವುದರಲ್ಲಿ ಎರಡು ಮಾತಿಲ್ಲ. ರೇಷ್ಮೆ ಇಲಾಖೆ ರೇಷ್ಮೆ ಬೆಳೆಗಾರರಿಗೆ ಬೇಕಾದ ಸಹಕಾರ ನೀಡಬೇಕು ಎನ್ನುವುದು ಬೆಳೆಗಾರರ ಆಗ್ರಹವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.