ಕೊಲ್ಕತ್ತಾ, ಜೂನ್ 15: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ನಾಯಕರಿಗೆ ಸಾರ್ವಜನಿಕ ವಲಯದಲ್ಲಿ ‘ಮೊಟ್ಟೆ ದಾಳಿ’ಯ ಭೀತಿ ಎದುರಾಗಿದೆ. ಇಂದು ಸಂಜೆ ಟಿಎಂಸಿ ಪ್ರಮುಖ ವಕ್ತಾರ ಮತ್ತು ಶಾಸಕ ಕುನಾಲ್ ಘೋಷ್ ಅವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರ ಕಾಳೀಘಾಟ್ ನಿವಾಸದಿಂದ ಹೊರಬರುತ್ತಿದ್ದಂತೆ ಅವರ ಮೇಲೆ ವ್ಯಕ್ತಿಯೊಬ್ಬ ಮೊಟ್ಟೆ ಎಸೆದಿದ್ದಾನೆ. ಮಾಧ್ಯಮಗಳೊಂದಿಗೆ ಮಾತನಾಡಲು ಕುನಾಲ್ ಘೋಷ್ ಅವರು ಮಮತಾ ಬ್ಯಾನರ್ಜಿ ಅವರ ನಿವಾಸದ ಹೊರಗೆ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ಇಂದು ಸಂಜೆ ಸುಮಾರು 6.30ರ ಸುಮಾರಿಗೆ ಕುನಾಲ್ ಘೋಷ್ ಮಮತಾ ಬ್ಯಾನರ್ಜಿ ಅವರ ಮನೆಯಿಂದ ಹೊರಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಕಪ್ಪು ಶರ್ಟ್ ಧರಿಸಿದ್ದ ಯುವಕನೊಬ್ಬ ಅತ್ಯಂತ ಹತ್ತಿರದಿಂದ ಕುನಾಲ್ ಘೋಷ್ ಅವರ ತಲೆಗೆ ಗುರಿಯಾಗಿಸಿ ಮೊಟ್ಟೆಯೊಂದನ್ನು ಎಸೆದಿದ್ದಾನೆ.
ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ಶಾಸಕ ಕುನಾಲ್ ಘೋಷ್, ಇದು ಸಾರ್ವಜನಿಕರ ಸ್ವಾಭಾವಿಕ ಆಕ್ರೋಶವಲ್ಲ, ಬದಲಿಗೆ ವ್ಯವಸ್ಥಿತವಾಗಿ ಯೋಜಿಸಲಾದ ‘ಗೂಂಡಾಗಿರಿ’ ಎಂದು ಕರೆದಿದ್ದಾರೆ. ಇತ್ತೀಚೆಗಷ್ಟೇ ಸೋನಾರ್ಪುರದಲ್ಲಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆಯೂ ಸ್ಥಳೀಯರು ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆದಿದ್ದರು. ಇದಲ್ಲದೆ ಬಿಧಾನನಗರದ ಮಾಜಿ ಮೇಯರ್ ಸಬ್ಯಸಾಚಿ ದತ್ತಾ, ಟಿಎಂಸಿ ನಾಯಕರಾದ ಜಯಪ್ರಕಾಶ್ ಮುಜುಂದಾರ್ ಮತ್ತು ಬಾಪ್ಪಾದಿತ್ಯ ದಾಸ್ಗುಪ್ತಾ ಸೇರಿದಂತೆ ಹಲವು ನಾಯಕರು ಇತ್ತೀಚೆಗೆ ಸಾರ್ವಜನಿಕವಾಗಿ ಅಥವಾ ಪೊಲೀಸ್ ವಶದಲ್ಲಿದ್ದಾಗ ಇಂತಹದೇ ಮೊಟ್ಟೆ ದಾಳಿಯನ್ನು ಎದುರಿಸಿದ್ದಾರೆ.
(Video Source: ANI)
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ