ನವದೆಹಲಿ, ಜುಲೈ 7: ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ನಡೆದ ಭೀಕರ ಕಾಲ್ತುಳಿತದ (Karur Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಡಿಎಂಕೆ (DMK) ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಇಂದು (ಜುಲೈ 7) ನಿರಾಕರಿಸಿದೆ. ಈ ವೇಳೆ ನ್ಯಾಯಾಲಯವು ರಾಜಕೀಯ ಪಕ್ಷಗಳಿಗೆ ಕಟು ಎಚ್ಚರಿಕೆಯನ್ನೂ ನೀಡಿದೆ. ಕರೂರ್ ಕಾಲ್ತುಳಿತ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ರಜೆ ಕಾಲದ ಪೀಠವು “ರಾಜಕೀಯ ಲಾಭಕ್ಕಾಗಿ ನ್ಯಾಯಾಲಯವನ್ನು ರಾಜಕೀಯ ವೇದಿಕೆಯನ್ನಾಗಿ ಬಳಸಿಕೊಳ್ಳಬೇಡಿ” ಎಂದು ಡಿಎಂಕೆ ಪಕ್ಷಕ್ಕೆ ನೇರವಾಗಿ ಎಚ್ಚರಿಕೆ ನೀಡಿತು.
ಸಿಬಿಐ ತನಿಖೆ ನಡುವೆ ಹಸ್ತಕ್ಷೇಪ ಬೇಡ:
ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸುಪ್ರೀಂ ಕೋರ್ಟ್ ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಿದೆ. ಹೀಗಿರುವಾಗ, ರಾಜಕೀಯ ಪ್ರತಿಸ್ಪರ್ಧಿಯಾದ ಡಿಎಂಕೆ ಸಲ್ಲಿಸಿರುವ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ, ಒಂದು ವೇಳೆ ವಾದ ಮುಂದುವರಿಸಿದರೆ ಅರ್ಜಿಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ನ್ಯಾಯಪೀಠವು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ವಿಜಯ್ ರ್ಯಾಲಿಯಲ್ಲಿ ಕಾಲ್ತುಳಿತವಾಗಿ 41 ಜನ ಮೃತಪಟ್ಟಿದ್ದ ಕರೂರ್ನಲ್ಲಿ ಗೆಲ್ಲೋದು ಯಾರು?
ಡಿಎಂಕೆ ಅರ್ಜಿಯಲ್ಲೇನಿತ್ತು?:
ನಟ ಹಾಗೂ ರಾಜಕಾರಣಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಸಚಿವರು ಮತ್ತು ನಾಯಕರು ಈ ಪ್ರಕರಣದ ಕುರಿತು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ತನಿಖೆಯ ದಿಕ್ಕು ತಪ್ಪಿಸುವ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನವಾಗಿದೆ ಎಂದು ಡಿಎಂಕೆ ಆರೋಪಿಸಿತ್ತು. ಅಲ್ಲದೆ, ಮುಖ್ಯಮಂತ್ರಿ ಮತ್ತು ಸಚಿವರು ಈ ಪ್ರಕರಣದ ಬಗ್ಗೆ ಮಾತನಾಡುವುದನ್ನು ತಡೆಯಬೇಕು ಎಂದು ಕೋರಿತ್ತು. ಡಿಎಂಕೆಯ ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ಮುಖ್ಯಮಂತ್ರಿಯವರ ಪ್ರವಾಸದ ವೇಳಾಪಟ್ಟಿಯನ್ನು ಮತ್ತು ಅವರ ಭಾಷಣಗಳನ್ನು ಸುಪ್ರೀಂ ಕೋರ್ಟ್ ನಿಯಂತ್ರಿಸಬೇಕು ಎಂದು ನೀವು ಬಯಸುತ್ತೀರಾ?” ಎಂದು ಪ್ರಶ್ನಿಸಿದರು. “ಅವರು ಭಾಷಣ ಮಾಡಿದರೆ, ಅದಕ್ಕೆ ನೀವೂ ಭಾಷಣದ ಮೂಲಕವೇ ಕೌಂಟರ್ ನೀಡಿ. ಅದನ್ನು ಬಿಟ್ಟು ಕೋರ್ಟ್ಗೆ ರಾಜಕೀಯ ತರಬೇಡಿ” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಕರೂರ್ ಕಾಲ್ತುಳಿತ ಪ್ರಕರಣ; ವಿಜಯ್ ವಿರುದ್ಧ ಹೈಕೋರ್ಟ್ ಆಕ್ರೋಶ, ಎಸ್ಐಟಿ ತನಿಖೆಗೆ ಆದೇಶ
ನಟ, ರಾಜಕಾರಣಿ ವಿಜಯ್ ಅವರ ಸಚಿವ ಸಂಪುಟದಲ್ಲಿ ಈಗ ಸಚಿವರಾಗಿರುವ ಕೆಲವು ಆರೋಪಿಗಳು ಕರೂರ್ ಕಾಲ್ತುಳಿತದ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿತ್ತು. ವಿಚಾರಣೆಯ ಸಂದರ್ಭದಲ್ಲಿ ಈ ಪ್ರಕರಣದ ತನಿಖೆಯನ್ನು ಈಗಾಗಲೇ ಕೇಂದ್ರೀಯ ತನಿಖಾ ದಳಕ್ಕೆ (CBI) ಹಸ್ತಾಂತರಿಸಲಾಗಿದೆ ಎಂಬುದನ್ನು ನೆನಪಿಸಿ ದ ನ್ಯಾಯಪೀಠವು, ಅರ್ಜಿಯ ಆಧಾರವನ್ನು ಪ್ರಶ್ನಿಸಿತು.”ಈ ಪ್ರಕರಣದಲ್ಲಿ ತಾನೇ ಸ್ವತಃ ಸಿಬಿಐ ತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್, ರಾಜಕೀಯ ಪ್ರತಿಸ್ಪರ್ಧಿಯ ಅರ್ಜಿಯನ್ನು ಹೇಗೆ ಸ್ವೀಕರಿಸಲು ಸಾಧ್ಯ?” ಎಂದು ಸುಪ್ರೀಂ ಕೋರ್ಟ್ ಡಿಎಂಕೆ ಪರ ವಕೀಲರನ್ನು ಕೇಳಿತು. “ನೀವು ಈ ಅರ್ಜಿಯನ್ನು ಇಲ್ಲಿಗೆ ಕೈಬಿಡುವುದು ಒಳಿತು. ಏಕೆಂದರೆ ನಾವು ಇದನ್ನು ವಜಾಗೊಳಿಸುವ ನಿರ್ಧಾರದಲ್ಲಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.
ಏನಿದು ಕರೂರ್ ಕಾಲ್ತುಳಿತದ ಘಟನೆ?:
ಸೆಪ್ಟೆಂಬರ್ 27, 2025ರಂದು ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷದ ಬೃಹತ್ ರ್ಯಾಲಿ ನಡೆದಿತ್ತು. ಈ ವೇಳೆ ನಿರೀಕ್ಷೆಗೂ ಮೀರಿದ ಜನಸಂದಣಿ ಸೇರಿದ ಕಾರಣ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 39 ಜನರು ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಈ ದುರಂತವು ತಮಿಳುನಾಡು ರಾಜಕಾರಣದಲ್ಲಿ ತೀವ್ರ ವಿವಾದ ಹಾಗೂ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ರ್ಯಾಲಿಯಲ್ಲಿ ಜನರ ಸಂಖ್ಯೆಯು ನಿರೀಕ್ಷೆಗಿಂತ ಗಣನೀಯವಾಗಿ ಹೆಚ್ಚಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು. ಘಟನೆಯ ತನಿಖೆಗಾಗಿ ತನಿಖಾ ಆಯೋಗವನ್ನು ರಚಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ