ನೀರಿಗಾಗಿ ಹುಡುಕಾಟ ನಡೆಸಿರುವ ಕೋತಿImage Credit source: tv9 kannada
ಕೋಲಾರ, ಮೇ 02: ಅಲ್ಲಿ ವರ್ಷದ 365 ದಿನಗಳು ಗಂಗೆ ನಿರಂತರವಾಗಿ ಹರಿಯುತ್ತಾಳೆ. ಹಾಗಾಗಿ ಆ ಜಾಗವನ್ನ ಅಂತರಗಂಗೆ ಎಂದೆ ಕರೆಯಲಾಗುತ್ತದೆ. ಆದರೆ ಈ ಬಾರಿಯ ಬಿಸಿಲ (Heatwave) ಬೇಗೆ ಅಂತರಗಂಗೆಗೂ ತಟ್ಟಿದ್ದು, ಪ್ರಾಣಿ-ಪಕ್ಷಿಗಳು ಆಹಾರ, ನೀರಿಲ್ಲದೆ ಪ್ರಾಣ ಕಳೆದುಕೊಳ್ಳುತ್ತಿವೆ. ಕಳೆದ ಒಂದು ವಾರದಲ್ಲಿ ನಾಲ್ಕರಿಂದ ಐದು ಕೋತಿಗಳು (Monkeys) ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ವರ್ಷ ಕೋಲಾರದಲ್ಲಿ ಬಿಸಿಲ ಬೇಗೆಯಿಂದ ತಾಪಮಾನ ಹೆಚ್ಚಾಗಿದೆ. ಕಾಶಿವಿಶ್ವೇಶ್ವರ ಸ್ವಾಮಿಯ ಸನ್ನಿಧಿ ಹಾಗೂ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಅಂತರಗಂಗೆಯಲ್ಲಿ, ಹಲವು ವರ್ಷಗಳಿಂದ ಸಾವಿರಾರು ಕೋತಿಗಳು, ನವಿಲುಗಳು ಮತ್ತು ಮೊಲಗಳು ವಾಸಿಸುತ್ತಿವೆ. ಆದರೆ, ಈ ವರ್ಷದ ಬಿಸಿಲ ತಾಪ ತಾರಕಕ್ಕೇರಿದ್ದು, ಪ್ರಾಣಿಗಳು ತೀವ್ರ ನಿತ್ರಾಣ ಸ್ಥಿತಿಗೆ ತಲುಪಿವೆ. ಈ ಪ್ರದೇಶವು ಅರಣ್ಯ ಇಲಾಖೆ, ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಕೊಂಡರಾಜನಹಳ್ಳಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಗೆ ಬರುತ್ತದೆ. ಇಷ್ಟು ಜವಾಬ್ದಾರಿಯುತ ಇಲಾಖೆಗಳಿದ್ದರೂ, ಬೆಟ್ಟದ ಮೇಲೆ ವಾಸಿಸುವ ಮೂಕ ಪ್ರಾಣಿಗಳಿಗೆ ಕನಿಷ್ಠ ಕುಡಿಯುವ ನೀರು ಅಥವಾ ಆಹಾರದ ವ್ಯವಸ್ಥೆ ಮಾಡದಿರುವುದು ದುರ್ದೈವದ ಸಂಗತಿಯಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಹಕ್ಕಿ ಜ್ವರದ ಆತಂಕ: ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ!
ಇನ್ನು ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿರುವ ಅಂತರಗಂಗೆಯಲ್ಲಿ ಸಾವಿರಾರು ಕೋತಿಗಳು, ನವಿಲುಗಳು, ಮೊಲ ಸೇರಿದಂತೆ ಹಲವು ಪ್ರಾಣಿಗಳನ್ನು ಬೆಟ್ಟದಲ್ಲಿ ಕಾಣಬಹುದು. ಪ್ರತಿ ವರ್ಷ ಬೇಸಿಗೆ ಬಂದರೆ ಸಾಕು ಇಲ್ಲಿರುವ ವಾನರ ಸೈನ್ಯಕ್ಕೆ ನೀರು, ಆಹಾರದ ಸಮಸ್ಯೆ ತಲೆದೂರುತ್ತೆ. ಕೆಲ ಕೋತಿಗಳು ಪ್ರವಾಸಿಗರ ಕೈಕಾಲು ಹಿಡಿದು ಕೊಟ್ಟ ತಿಂಡಿ ತಿಂದು ಬದುಕುತ್ತಿವೆ.
ಕೆಲವು ದಾನಿಗಳು ವಾರದಲ್ಲಿ ಎರಡ್ಮೂರು ದಿನ ಮಾರುಕಟ್ಟೆಯಿಂದ ಹಣ್ಣು, ತರಕಾರಿಗಳನ್ನ ತಂದುಕೊಡುತ್ತಾರೆ. ಇನ್ನು ಅರಣ್ಯ ಇಲಾಖೆಯು ಕಾಡು ಪ್ರಾಣಿಗಳಿಗಾಗಿ ರೂಪಿಸಿದ ಕೋಟ್ಯಂತರ ರೂ ಯೋಜನೆ ಕೇವಲ ಪುಸ್ತಕದಲ್ಲಿ ಮಾತ್ರ ಇದೆ. ಇಲ್ಲಿನ ಕೆಲವು ಪ್ರಾಣಿ ಪ್ರಿಯರು ಈ ಕೋತಿಗಳ ಪರಿಸ್ಥಿತಿಯನ್ನು ನೋಡಲಾಗದೆ ಆಗಾಗ ಮುದ್ದೆ, ತರಕಾರಿ, ಹಣ್ಣುಗಳನ್ನು ನೀಡುತ್ತಾರೆ. ಅದನ್ನು ಹೊರತು ಪಡಿಸಿದರೆ ಕೋತಿಗಳಿಗೆ ಹೊಟ್ಟೆಗೆ ತಣ್ಣೀರು ಬಟ್ಟೆನೆ ಗತಿ ಎನ್ನುವಂತ್ತಾಗಿದೆ.
ಸ್ಥಳೀಯರು ಹೇಳುವುದೇನು?
ಅರಣ್ಯ ಇಲಾಖೆ ಬೆಟ್ಟದಲ್ಲಿ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗುವ ಮರ-ಗಿಡಗಳನ್ನು ಬೆಳೆಸಿಲ್ಲ. ಹಣ್ಣು ಸಿಗುವ ಗಿಡಮರಗಳನ್ನ ಬೆಳೆಸಬೇಕು ಹಾಗೂ ಅವುಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸ್ಥಳೀಯರಾದ ಮುನಿರಾಜು ಅವರ ಮಾತು.
ಇದನ್ನೂ ಓದಿ: ತುಮಕೂರಿನಲ್ಲಿ ಹಕ್ಕಿ ಜ್ವರದ ಭೀತಿ: ನವಿಲುಗಳ ಸಾವಿನ ಬೆನ್ನಲ್ಲೇ ಈಗ 30 ಕೋಳಿಗಳ ಸಾವು! ಜಿಲ್ಲೆಯಲ್ಲಿ ಹೈ ಅಲರ್ಟ್
ಪ್ರವಾಸೋದ್ಯಮದ ಹೆಸರಿನಲ್ಲಿ ನಿತ್ಯ ಸಾವಿರಾರು ಜನರು ಭೇಟಿ ನೀಡುವ ಈ ಸ್ಥಳದಲ್ಲಿ, ಮೂಕ ಪ್ರಾಣಿಗಳು ಹಸಿವಿನಿಂದ ಸಾಯುತ್ತಿರುವುದು ಇಲಾಖೆಗಳ ವೈಫಲ್ಯವನ್ನು ಎತ್ತಿ ತೋರಿಸುವಂತಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಈ ವಾನರ ಸೈನ್ಯವನ್ನು ರಕ್ಷಿಸುವತ್ತ ಗಮನ ಹರಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 9:32 pm, Sat, 2 May 26