ಕೋಲಾರ, ಮೇ 01: ರೈತರ ಶ್ರಮದಿಂದ ಕಟ್ಟಿಬೆಳೆಸಿರುವ ಕೋಲಾರ ಹಾಲು ಒಕ್ಕೂಟವು (Kolar Milk Union) ಇಂದು ಕೆಲ ರಾಜಕೀಯ ನಾಯಕರ ಹಗರಣಗಳ (Scam) ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಒಕ್ಕೂಟದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕೇಂದ್ರ ಮತ್ತು ರಾಜ್ಯದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಈ ಹಗರಣವೇ ಇದೀಗ ಸ್ಥಳೀಯ ರಾಜಕೀಯ ಕೆಸರೆರೆಚಾಟಕ್ಕೂ ಕಾರಣವಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇರುವಾಗಲೇ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಕೆ.ವೈ. ನಂಜೇಗೌಡ ಮತ್ತು ಬಿಜೆಪಿ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಶಾಸಕ ಮಂಜುನಾಥಗೌಡ, ಶಾಸಕ ನಂಜೇಗೌಡ ಒಕ್ಕೂಟದ ಅಧ್ಯಕ್ಷರಾದ ನಂತರ ಸುಮಾರು 300 ಕೋಟಿ ರೂಪಾಯಿಯಷ್ಟು ಹಗರಣ ನಡೆದಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಕೋಲಾರದಲ್ಲಿ ಕಲಬೆರಕೆ ಹಾಲು: ವರದಿಯಲ್ಲಿ ಆಘಾತಕಾರಿ ಅಂಶ; ಬೆಚ್ಚಿಬಿದ್ದ ಜನ
ಅಲ್ಲದೆ, ನೇಮಕಾತಿ ಪ್ರಕ್ರಿಯೆ, ಸೋಲಾರ್ ಪ್ಲಾಂಟ್ ನಿರ್ಮಾಣ ಮತ್ತು ಎಂವಿಕೆ ಗೋಲ್ಡನ್ ಡೈರಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ನಡೆಸಿದ್ದು, ಇದೀಗ ಲೋಕಾಯುಕ್ತ ಸಂಸ್ಥೆಯೂ ತನಿಖೆ ಕೈಗೊಂಡಿದೆ ಎಂದು ಅವರು ತಿಳಿಸಿದ್ದರು.
ಆರೋಪ ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಎಂದ ಶಾಸಕ ಕೆ.ವೈ. ನಂಜೇಗೌಡ
ಈ ಆರೋಪಗಳಿಗೆ ತಿರುಗೇಟು ನೀಡಿರುವ ಶಾಸಕ ಕೆ.ವೈ. ನಂಜೇಗೌಡ, ತಮ್ಮ ಅವಧಿಯಲ್ಲಿ ಯಾವುದೇ ಹಗರಣ ನಡೆದಿಲ್ಲ, ಬದಲಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಆರೋಪಗಳನ್ನು ತಳ್ಳಿಹಾಕಿರುವ ಅವರು, ತಮ್ಮ ಮೇಲಿರುವ ಹಗರಣದ ಆರೋಪ ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದ್ದಾರೆ.
300 ಕೋಟಿ ಅಲ್ಲ, ಅದು 512 ಕೋಟಿ ರೂ ಹಗರಣ ಎಂದ ದೂರುದಾರ
ಈ ನಡುವೆ, ಪ್ರಕರಣದ ದೂರುದಾರ ಗೂಳಿಗಾನಹಳ್ಳಿ ನಾಗರಾಜ್ ಪತ್ರಿಕಾಗೋಷ್ಠಿ ನಡೆಸಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೋಲಾರ ಹಾಲು ಒಕ್ಕೂಟದಲ್ಲಿ ನಡೆದಿರುವ ಹಗರಣದ ಮೊತ್ತ 300 ಕೋಟಿ ಅಲ್ಲ, ಅದು 512 ಕೋಟಿ ರೂ ಎಂದು ಆರೋಪಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿಯೇ ಅಧ್ಯಕ್ಷರು 9 ಕೋಟಿ ರೂ ಹಣ ಪಡೆದಿದ್ದಾರೆ ಮತ್ತು ಪರೀಕ್ಷೆಯಲ್ಲಿ ಓಎಂಆರ್ (OMR) ಶೀಟ್ಗಳನ್ನು ಅದಲುಬದಲು ಮಾಡುವ ಮೂಲಕ ಅಕ್ರಮ ಎಸಗಲಾಗಿದೆ ಎಂದು ಅವರು ದೂರಿದ್ದಾರೆ.
ಒಟ್ಟು 75 ಹುದ್ದೆಗಳ ಪೈಕಿ 27 ಹುದ್ದೆಗಳಲ್ಲಿ ಅಕ್ರಮ ನಡೆದಿದ್ದು, ಪರೀಕ್ಷಾರ್ಥಿಗಳ ಎರಡೆರಡು ಓಎಂಆರ್ ಶೀಟ್ಗಳು ಪತ್ತೆಯಾಗಿವೆ ಎಂಬ ಅಂಶ ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಿದೆ. ಜೊತೆಗೆ, ಒಕ್ಕೂಟದ ನಿರ್ದೇಶಕರುಗಳು ರೈತರ ಹಣದಲ್ಲಿ ಧಾರ್ಮಿಕ ದತ್ತಿ ನಿಧಿಯ ಮೂಲಕ ತಲಾ ಒಂದು ಚಿನ್ನದ ನಾಣ್ಯವನ್ನು ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹೀಗೆ ಹಾಲು ಒಕ್ಕೂಟದಲ್ಲಿ ನಂಜೇಗೌಡ ಅಧ್ಯಕ್ಷರಾದ ನಂತರ ಹಲವು ಹಗರಣಗಳು ನಡೆದಿವೆ. ಸದ್ಯದಲ್ಲೇ ಲೋಕಾಯುಕ್ತ ಹಾಗೂ ಇ.ಡಿ ತನಿಖೆಯ ವರದಿಗಳು ಬಂದ ಬಳಿಕ ಸತ್ಯಾಸತ್ಯಗಳು ಹೊರಬೀಳಲಿವೆ ಎಂದರು.
ಇದನ್ನೂ ಓದಿ: ನಂದಿನಿ ಸೇರಿ ಹಲವು ಕಂಪನಿಗಳ ನಕಲಿ ಹಾಲು ತಯಾರಿಕಾ ಜಾಲ ಪತ್ತೆ
ಒಟ್ಟಾರೆ ರೈತರ ಶ್ರಮದಲ್ಲಿ ಕಟ್ಟಲಾಗಿರುವ ಹಾಲು ಒಕ್ಕೂಟದಲ್ಲಿ ರಾಜಕೀಯ ನಾಯಕರು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೋಟ್ಯಂತರ ರೂ ಹಗರಣದ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ತನಿಖಾ ಸಂಸ್ಥೆಗಳ ವರದಿ ಹೊರಬಂದ ನಂತರವಷ್ಟೇ ಸತ್ಯಾಸತ್ಯತೆಗಳು ಹೊರಬೀಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.