Headlines

ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮಾತ್ರವಲ್ಲ ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ – Kannada News | Why Drinking Turmeric Water on an Empty Stomach Is Trending

ಅರಿಶಿನ ಅಡುಗೆಮನೆಯ ಅವಿಭಾಜ್ಯ ಅಂಗ. ಶತಮಾನಗಳಿಂದಲೂ ಇದನ್ನು ಕೇವಲ ಮಸಾಲೆಯಾಗಿ ಮಾತ್ರವಲ್ಲ, ಸಾಂಪ್ರದಾಯಿಕ ಔಷಧೀಯ ಪದಾರ್ಥವಾಗಿಯೂ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಮಳೆಗಾಲದಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರು ಕುಡಿಯುವ ಅಭ್ಯಾಸವೂ ಹೆಚ್ಚುತ್ತಿದೆ. ಇದರಲ್ಲಿ ಇರುವ ಕರ್ಕ್ಯೂಮಿನ್ (Curcumin) ಎಂಬ ನೈಸರ್ಗಿಕ ಸಂಯುಕ್ತವು ಉರಿಯೂತ ನಿವಾರಕ, ಆಂಟಿಆಕ್ಸಿಡೆಂಟ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದರೆ ಇದನ್ನು ಮಿತ ಪ್ರಮಾಣದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ಸೇವಿಸುವುದು ಮುಖ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಅರಿಶಿನ ನೀರು ಕುಡಿಯುವುದರಿಂದ ಸಿಗಬಹುದಾದ ಆರೋಗ್ಯ ಲಾಭಗಳು:

ಜೀರ್ಣಕ್ರಿಯೆಗೆ ನೆರವು: ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಅರಿಶಿನ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಗಮವಾಗಲು ನೆರವಾಗಬಹುದು. ಹೊಟ್ಟೆ ಉಬ್ಬರ, ಗ್ಯಾಸ್ ಹಾಗೂ ಮಲಬದ್ಧತೆ ಸಮಸ್ಯೆ ಕಡಿಮೆಯಾಗಲು ಸಹಕಾರಿ.

ರೋಗನಿರೋಧಕ ಶಕ್ತಿ ಹೆಚ್ಚಳ: ಅರಿಶಿನದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಸೋಂಕಿನ ಅಪಾಯ ಕಡಿಮೆ ಮಾಡಲು ಸಹಾಯ ಮಾಡಬಹುದು.

ಉರಿಯೂತ ಮತ್ತು ಕೀಲು ನೋವು ಕಡಿಮೆ ಮಾಡಲು ಸಹಕಾರಿ: ಕರ್ಕ್ಯೂಮಿನ್ ದೇಹದಲ್ಲಿನ ಉರಿಯೂತವನ್ನು ತಗ್ಗಿಸುವ ಗುಣ ಹೊಂದಿರುವುದರಿಂದ ಕೀಲು ನೋವು ಅಥವಾ ಸಂಧಿವಾತ ಇರುವವರಿಗೆ ಕೆಲವು ಮಟ್ಟಿಗೆ ಪ್ರಯೋಜನವಾಗಬಹುದು.

ಹೃದಯದ ಆರೋಗ್ಯ ಕಾಪಾಡುತ್ತದೆ: ಕೆಲವು ಅಧ್ಯಯನಗಳ ಪ್ರಕಾರ ಕರ್ಕ್ಯೂಮಿನ್ ರಕ್ತನಾಳಗಳ ಆರೋಗ್ಯ ಕಾಪಾಡಲು ಸಹಾಯ ಮಾಡಬಹುದು. ಸಮತೋಲನ ಆಹಾರ ಮತ್ತು ವ್ಯಾಯಾಮದ ಜೊತೆಗೆ ಇದು ಹೃದಯ ಆರೋಗ್ಯಕ್ಕೂ ಪೂರಕವಾಗಬಹುದು.

ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ: ಆಂಟಿಆಕ್ಸಿಡೆಂಟ್ ಗುಣಗಳಿಂದ ಚರ್ಮದ ಕೋಶಗಳನ್ನು ರಕ್ಷಿಸಲು ಸಹಾಯವಾಗಬಹುದು. ಇದರಿಂದ ಚರ್ಮ ಆರೋಗ್ಯಕರವಾಗಿ ಕಾಣಲು ನೆರವಾಗುತ್ತದೆ.

ಮೆದುಳಿನ ಆರೋಗ್ಯಕ್ಕೆ ಸಹಕಾರಿ: ಕೆಲವು ಸಂಶೋಧನೆಗಳು ಕರ್ಕ್ಯೂಮಿನ್ ಮೆದುಳಿನ ಕೋಶಗಳ ಕಾರ್ಯಕ್ಷಮತೆಯನ್ನು ಬೆಂಬಲಿಸಬಹುದು ಎಂದು ಸೂಚಿಸಿವೆ. ಆದರೆ ಅಲ್ಜೈಮರ್ಸ್‌ನಂತಹ ಕಾಯಿಲೆಗಳನ್ನು ತಡೆಯುತ್ತದೆ ಎಂಬುದಕ್ಕೆ ಇನ್ನಷ್ಟು ವೈಜ್ಞಾನಿಕ ಅಧ್ಯಯನಗಳು ಅಗತ್ಯವಿದೆ.

ಇದನ್ನೂ ಓದಿ: ಪದೇ ಪದೇ ತುಟಿ ಒಡೆಯುವುದು ಕೇವಲ ಹವಾಮಾನದಿಂದಲ್ಲ ಇದಕ್ಕೆ ಈ ವಿಟಮಿನ್ ಕೊರತೆಯೂ ಕಾರಣವಾಗಿರಬಹುದು

ಅರಿಶಿನದಲ್ಲಿರುವ ಕರ್ಕ್ಯೂಮಿನ್ ದೇಹದಲ್ಲಿ ಸುಲಭವಾಗಿ ಹೀರಿಕೊಳ್ಳುವುದಿಲ್ಲ. ಆದ್ದರಿಂದ ಚಿಟಿಕೆ ಕರಿಮೆಣಸು (Black Pepper) ಸೇರಿಸಿ ಕುಡಿಯುವುದರಿಂದ ಅದರ ಹೀರಿಕೊಳ್ಳುವಿಕೆ ಹೆಚ್ಚಾಗಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಆದರೆ ಕರಿಮೆಣಸನ್ನೂ ಮಿತ ಪ್ರಮಾಣದಲ್ಲೇ ಬಳಸಬೇಕು.

ಯಾರು ಎಚ್ಚರಿಕೆ ವಹಿಸಬೇಕು?

ಪಿತ್ತಕೋಶದಲ್ಲಿ ಕಲ್ಲು ಇರುವವರು, ರಕ್ತ ತೆಳುವಾಗಿಸುವ ಔಷಧಿ ಸೇವಿಸುವವರು, ಗರ್ಭಿಣಿಯರು ಅಥವಾ ಗ್ಯಾಸ್ಟ್ರಿಕ್ ಅಲ್ಸರ್ ಇರುವವರು ಅರಿಶಿನ ನೀರು ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಅತಿಯಾಗಿ ಸೇವಿಸಿದರೆ ಕೆಲವರಲ್ಲಿ ಹೊಟ್ಟೆ ಉರಿ, ಅಜೀರ್ಣ ಅಥವಾ ಅತಿಸಾರ ಉಂಟಾಗಬಹುದು.

ಅರಿಶಿನ ನೀರು ತಯಾರಿಸುವ ವಿಧಾನ:

ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ಟೀ ಸ್ಪೂನ್ ಶುದ್ಧ ಅರಿಶಿನ ಪುಡಿ ಅಥವಾ ತಾಜಾ ಅರಿಶಿನದ ಸಣ್ಣ ತುಂಡು ಸೇರಿಸಿ ಕುಡಿಯಬಹುದು. ಬೇಕಾದರೆ ಚಿಟಿಕೆ ಕರಿಮೆಣಸು ಸೇರಿಸಬಹುದು. ಸಕ್ಕರೆ ಸೇರಿಸುವುದನ್ನು ತಪ್ಪಿಸಿ.

ಗಮನಿಸಿ: ಅರಿಶಿನ ನೀರು ಆರೋಗ್ಯಕ್ಕೆ ಪೂರಕವಾದ ಪಾನೀಯವಾಗಿದ್ದರೂ, ಅದು ಯಾವುದೇ ಕಾಯಿಲೆಗೆ ಔಷಧಿಯ ಪರ್ಯಾಯವಲ್ಲ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಹಾಗೂ ಉತ್ತಮ ಜೀವನಶೈಲಿಯ ಜೊತೆಗೆ ಇದನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ ಹೆಚ್ಚಿನ ಪ್ರಯೋಜನ ದೊರೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *