
ಬೆಂಗಳೂರು, ಆ.3: ನೂತನ ಸಚಿವರ ಪಟ್ಟಿ ಅಂತಿಮಗೊಳಿಸುವ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಘೋಷಿಸಿದ್ದಾರೆ. ಸದ್ಯಕ್ಕೆ ಹರಿದಾಡುತ್ತಿರುವ ಯಾವುದೇ ಪಟ್ಟಿಗಳು ಅನಧಿಕೃತವಾಗಿದ್ದು, ರಾಜ್ಯಪಾಲರಿಗೆ ಸಲ್ಲಿಸುವ ಸಹಿ ಮಾಡಿದ ಪಟ್ಟಿಯೇ ಅಂತಿಮವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಪಕ್ಷದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ ಎಂದಿರುವ ಡಿಕೆ ಶಿವಕುಮಾರ್, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ಇಪ್ಪತ್ತು ದಿನಗಳಿಂದ ನಾಲ್ಕು ಕ್ಯಾಬಿನೆಟ್ ಪಟ್ಟಿಗಳನ್ನು ತೋರಿಸಿರುವುದನ್ನು ಉಲ್ಲೇಖಿಸಿದ ಅವರು, ಯಾವುದೇ ಸಮಯದಲ್ಲಿ ಹೆಸರುಗಳನ್ನು ಬದಲಾಯಿಸುವ ಅವಕಾಶವಿದೆ ಎಂದರು. ಮಹಿಳಾ ಪ್ರಾತಿನಿಧ್ಯದ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, “ಹೆಣ್ಣುಮಕ್ಕಳಿಲ್ಲದೆ ನಮ್ಮ ಪಕ್ಷವೇ ಇಲ್ಲ. ನಾವು ಅವರಿಗೆ ಶಕ್ತಿ ನೀಡುತ್ತೇವೆ” ಎಂದು ಭರವಸೆ ನೀಡಿದರು. ಅಲ್ಲದೆ, ನೂತನ ಸಚಿವರು ಕಚೇರಿ ಅಥವಾ ಮನೆಯಲ್ಲಿ ಕಾಲ ಕಳೆಯದೆ, ಪ್ರಮಾಣವಚನ ಸ್ವೀಕರಿಸಿದ ನಂತರ ತಕ್ಷಣವೇ ತಮ್ಮ ಕ್ಷೇತ್ರ ಮತ್ತು ಜಿಲ್ಲೆಗಳಿಗೆ ತೆರಳಬೇಕು ಎಂದು ಸೂಚಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ