‘ಸೀತಾ ರಾಮ’ ಧಾರಾವಾಹಿಯ ಭರ್ಜರಿ ಯಶಸ್ಸಿನ ಬಳಿಕ ವೈಷ್ಣವಿ ಗೌಡ ಈಗ ಉದಯ ಟಿವಿಯ ಹೊಸ ಸೀರಿಯಲ್ ಮೂಲಕ ಕಿರುತೆರೆಗೆ ಮರಳಲು ಸಜ್ಜಾಗಿದ್ದಾರೆ. ಈ ಹೊಸ ಧಾರಾವಾಹಿಯ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಇದೀಗ ಇದರ ಅಧಿಕೃತ ಪ್ರೋಮೋ ಬಿಡುಗಡೆಯಾಗಿದೆ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಈ ಹೊಸ ಧಾರಾವಾಹಿಗೆ ‘ಗೆಳತಿ ಗಾಯತ್ರಿ’ ಎಂದು ಹೆಸರಿಡಲಾಗಿದೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ವೈಷ್ಣವಿ ಗೌಡ ಅವರು ‘ಪಾರ್ವತಿ’ ಎಂಬ ಶ್ರೀಮಂತ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಳಿ ಐಷಾರಾಮಿ ಮನೆ, ಕಾರು, ಗಂಡ ಮತ್ತು ಎಲ್ಲಾ ತರಹದ ಸುಖ-ಸೌಲಭ್ಯಗಳಿವೆ. ಆದರೆ, ಅವರ ಮನಸ್ಸಿನಲ್ಲಿ ಒಂದು ಕೊರಗಿದೆ. ಅದೇ ತಮ್ಮ ಬಾಲ್ಯದ ಆಪ್ತ ಗೆಳತಿ ಗಾಯತ್ರಿಯ ನೆನಪು.
ಪ್ರೋಮೋದ ಹೈಲೈಟ್ಸ್
ಪ್ರೋಮೋದಲ್ಲಿ ಪಾರ್ವತಿ ತನ್ನ ಶಾಲಾ ದಿನಗಳ ಫೋಟೋವನ್ನು ನೋಡುತ್ತಾ ಬಾಲ್ಯದ ಗೆಳತಿಯನ್ನು ನೆನಪಿಸಿಕೊಳ್ಳುತ್ತಾಳೆ. ರನ್ನಿಂಗ್ ರೇಸ್ನಲ್ಲಿ ತಾನು ಗೆಲ್ಲಲಿ ಎಂದು ತನಗಾಗಿ ಸೋಲುತ್ತಿದ್ದ ಗೆಳತಿಯ ಅಪಾರ ಪ್ರೀತಿಯನ್ನು ನೆನೆದು ಭಾವುಕಳಾಗುತ್ತಾಳೆ.
ಇದನ್ನೂ ಓದಿ: ‘ಅಗ್ನಿಸಾಕ್ಷಿ’ ರೀಯೂನಿಯಲ್ಲಿ ವೈಷ್ಣವಿ ಗೌಡ ಸಖತ್ ಮಿಂಚಿಂಗ್
‘25 ವರ್ಷಗಳಿಂದ ಕಾಯುತ್ತಿದ್ದೇನೆ ಅಂದರೆ ನಿಮಗೂ ಸ್ವಲ್ಪ ಓವರ್ ಅನಿಸಬಹುದು ಅಲ್ವಾ?’ ಎನ್ನುತ್ತಾ ತನ್ನ ಗೆಳತಿ ಗಾಯತ್ರಿ ಖಂಡಿತ ಮರಳಿ ಬರುತ್ತಾಳೆ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಾಳೆ. ಪ್ರೋಮೋ ನೋಡಿದರೆ ಇದು ಇಬ್ಬರು ಜೀವದ ಗೆಳತಿಯರ ಸುತ್ತ ಸಾಗುವ ಅತ್ಯಂತ ಭಾವನಾತ್ಮಕ ಮತ್ತು ಕುತೂಹಲಕಾರಿ ಕಥೆ ಎಂಬುದು ಸ್ಪಷ್ಟವಾಗುತ್ತದೆ.
ಶೀಘ್ರದಲ್ಲೇ ಪ್ರಸಾರ
‘ಗೆಳತಿ ಗಾಯತ್ರಿನ ಹುಡುಕೊಂಡು ಪಾರ್ವತಿ ಬರ್ತಿದ್ದಾಳೆ’ ಎಂಬ ವಾಯ್ಸ್ ಓವರ್ನೊಂದಿಗೆ ಪ್ರೋಮೋ ಮುಕ್ತಾಯವಾಗುತ್ತದೆ. ವೈಷ್ಣವಿ ಗೌಡ ಅವರ ಮುದ್ದಾದ ನಟನೆ ಮತ್ತು ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಶೀಘ್ರದಲ್ಲೇ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ‘ಸೀತಾ ರಾಮ’ ನಂತರ ವೈಷ್ಣವಿ ಅವರನ್ನು ಮತ್ತೆ ತೆರೆಮೇಲೆ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.