Headlines

ಗೌತಮ್ ಗಂಭೀರ್ ವಿರುದ್ಧ ತಿರುಗಿ ನಿಂತ ಟೀಮ್ ಇಂಡಿಯಾ ಆಟಗಾರರು! – Kannada News | Seniors Revolt Against Gautam Gambhir’s Rigid Coaching Style

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ! ಸರಣಿ ಸೋಲುಗಳಿಂದ ಕಂಗೆಟ್ಟಿರುವ ಬೆನ್ನಲ್ಲೇ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕಠಿಣ ಆಡಳಿತ ಮತ್ತು ಕೋಚಿಂಗ್ ಶೈಲಿಯ ವಿರುದ್ಧ ಹಿರಿಯ ಆಟಗಾರರು ಬಿಸಿಸಿಐ ಅಪೆಕ್ಸ್ ಕೌನ್ಸಿಲ್​ಗೆ ಕೌನ್ಸಿಲ್​ಗೆ ದೂರು ನೀಡಿರುವ ವಿಚಾರ ಬಹಿರಂಗವಾಗಿದೆ.

ಗಂಭೀರ್ ಅವರ ನಡೆಗೆ ತೀವ್ರ ಬೇಸತ್ತಿರುವ ತಂಡದ  ಸೀನಿಯರ್ ಆಟಗಾರರು, ಈ ಕುರಿತು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಹಾಗೂ ಮಾಜಿ ಕ್ರಿಕೆಟಿಗರ ಬಳಿ ರಹಸ್ಯವಾಗಿ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ಈ ಆಂತರಿಕ ಭಿನ್ನಾಭಿಪ್ರಾಯಗಳು ಈಗ ಭಾರತೀಯ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿವೆ.

ಅಸಮಾಧಾನಕ್ಕೆ ಕಾರಣಗಳೇನು?

ಕೋಚಿಂಗ್ ಶೈಲಿ ಮತ್ತು ಕಠಿಣ ಧೋರಣೆ: ಮಾಜಿ ಕೋಚ್ ರಾಹುಲ್ ದ್ರಾವಿಡ್ ಕಾಲದಲ್ಲಿದ್ದ ಮುಕ್ತ ಮತ್ತು ಸ್ನೇಹಪರ ವಾತಾವರಣಕ್ಕೆ ಹೋಲಿಸಿದರೆ, ಗಂಭೀರ್ ಅವರ ಕಠಿಣ ಧೋರಣೆ ಮತ್ತು ಕಮ್ಯುನಿಕೇಶನ್ ಶೈಲಿ ಹಿರಿಯ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ವೈಫಲ್ಯಕ್ಕೆ ಹೊಣೆಗಾರಿಕೆಯ ಕೊರತೆ: ಸರಣಿ ಸೋಲುಗಳ ಸಂದರ್ಭದಲ್ಲಿ ಇಡೀ ಕೋಚಿಂಗ್ ವ್ಯವಸ್ಥೆಯ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲು, ಕೇವಲ ಪ್ರತ್ಯೇಕ ಆಟಗಾರರ ವೈಫಲ್ಯ ಅಥವಾ ಸೆಂಟರ್ ಆಫ್ ಎಕ್ಸಲೆನ್ಸ್ ಕಡೆಗೆ ಬೆರಳು ತೋರಿಸುವ ಪ್ರವೃತ್ತಿ ಆಟಗಾರರಲ್ಲಿ ಅತೃಪ್ತಿ ಮೂಡಿಸಿದೆ.

ಸರಣಿ ಹಿನ್ನಡೆಗಳು: ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ವೈಟ್‌ವಾಶ್ ಸೋಲುಗಳು, ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗಾವಾಸ್ಕರ್ ಟ್ರೋಫಿ ಕೈತಪ್ಪಿದ್ದು, ಹಾಗೂ ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿ ಸೋಲುಗಳು ಗಂಭೀರ್ ಅವರ ಕಾರ್ಯತಂತ್ರದ ಪ್ರತಿಫಲ. ಇದಾಗ್ಯೂ ಈ ತಪ್ಪುಗಳನ್ನು ಆಟಗಾರರ ಮೇಲೆ ಹೊರಿಸಲಾಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಸ್ಥಳೀಯ ಕ್ರಿಕೆಟ್ ಆಡುವಂತೆ ಒತ್ತಡ: ಆಸ್ಟ್ರೇಲಿಯಾ ಪ್ರವಾಸದ ಸೋಲಿನ ನಂತರ, ಹಿರಿಯ ಆಟಗಾರರು ತಮ್ಮ ರೆಡ್-ಬಾಲ್ ಸ್ಥಾನವನ್ನು ಉಳಿಸಿಕೊಳ್ಳಲು ಕಡ್ಡಾಯವಾಗಿ ದೇಶೀಯ ಕ್ರಿಕೆಟ್ ಆಡಬೇಕೆಂದು ಗಂಭೀರ್ ಬಹಿರಂಗವಾಗಿ ಹೇಳಿಕೆ ನೀಡಿದ್ದು ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಇದಾಗ್ಯೂ ಟೀಮ್ ಇಂಡಿಯಾದ ಟೆಸ್ಟ್ ಪ್ರದರ್ಶನದಲ್ಲಿ ಯಾವುದೇ ಮಹತ್ವ ಬದಲಾವಣೆಯಾಗಿಲ್ಲ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಿಸಿಸಿಐ ಮುಂದಿನ ಕ್ರಮಗಳೇನು?

ಪ್ರಸ್ತುತ ಗಂಭೀರ್ ಅವರ ಕೋಚಿಂಗ್ ಹಾದಿಯ ಬಗ್ಗೆ ಬಿಸಿಸಿಐ ತೀವ್ರ ಅಸಮಾಧಾನ ಹೊಂದಿದ್ದು, ಶೀಘ್ರದಲ್ಲೇ ಪರಾಮರ್ಶನಾ ಸಭೆ ನಡೆಸಲಿದೆ. ಈ ಸಭೆಯಲ್ಲಿ ಗಂಭೀರ್ ಆಯ್ಕೆ ಮಾಡಿಕೊಂಡಿದ್ದ ಕೆಲವು ಸಪೋರ್ಟ್ ಸ್ಟಾಫ್‌ಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಭಾರತ ಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ!

ಶ್ರೀಲಂಕಾ ಸರಣಿ ಕೊನೆಯ ಅವಕಾಶ?

ಆಗಸ್ಟ್ 15 ರಿಂದ ಗಾಲೆಯಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಗೌತಮ್ ಗಂಭೀರ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಇಲ್ಲೂ ತಂಡ ಹಿನ್ನಡೆ ಅನುಭವಿಸಿದರೆ ಬಿಸಿಸಿಐ ದೊಡ್ಡ ಮಟ್ಟದ ಕಠಿಣ ನಿರ್ಧಾರ ಕೈಗೊಳ್ಳುವುದು ಖಚಿತ. ಅಂದರೆ ಗಂಭೀರ್ ಅವರನ್ನು ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಯಿದೆ.

Source link

Leave a Reply

Your email address will not be published. Required fields are marked *