Headlines

ಚಂದ್ರಗ್ರಹಣ ಮೋಕ್ಷ ಬಳಿಕ ದೇಗುಲಗಳಲ್ಲಿ ಶುದ್ಧೀಕರಣ, ವಿಶೇಷ ಪೂಜೆ! – Kannada News | Karnataka Temples Reopen with Rituals After Rare Lunar Eclipse

ಬೆಂಗಳೂರು, ಮಾರ್ಚ್​ 04: ನಭೋಮಂಡಲದಲ್ಲಿ ಅಪರೂಪದ ಖಗೋಳ ಕೌತುಕವಾಗಿ ರಕ್ತ ಚಂದ್ರಗ್ರಹಣ (Lunar Eclipse) ನಿನ್ನೆ ಸ್ಪಷ್ಟವಾಗಿ ಗೋಚರಿಸಿದೆ. ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣವಾಗಿ ಆವರಿಸಿದ ಪರಿಣಾಮ, ಬೆಳ್ಳಗೆ ಹೊಳೆಯುತ್ತಿದ್ದ ಚಂದ್ರನು ತಾಮ್ರದ ಕೆಂಪು ಬಣ್ಣದಲ್ಲಿ ಕಂಗೊಳಿಸಿದ್ದ. ಮಧ್ಯಾಹ್ನ 3 ಗಂಟೆ 13 ನಿಮಿಷಕ್ಕೆ ಆರಂಭವಾದ ವರ್ಷದ ಮೊದಲ ಕೇತುಗ್ರಸ್ತ ಚಂದ್ರಗ್ರಹಣ ಸಂಜೆ 6 ಗಂಟೆ 47 ನಿಮಿಷಕ್ಕೆ ಮೋಕ್ಷವಾಯಿತು. ಭಾರತಕ್ಕಿಂತ ಹೆಚ್ಚಾಗಿ ಅಮೆರಿಕದ ಕ್ಯಾಲಿಫೋರ್ನಿಯಾ, ಲಾಸ್ ಏಂಜೆಲಸ್ ಹಾಗೂ ಮೆಕ್ಸಿಕೋ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬ್ಲಡ್ ಮೂನ್ ಸ್ಪಷ್ಟವಾಗಿ ಕಾಣಿಸಿಕೊಂಡಿತು.

ಗ್ರಹಣದ ಹಿನ್ನಲೆಯಲ್ಲಿ ರಾಜ್ಯದ ಅನೇಕ ದೇವಾಲಯಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದವು. ಗ್ರಹಣ ಮೋಕ್ಷವಾಗುತ್ತಿದ್ದಂತೆ ದೇವಾಲಯಗಳಲ್ಲಿ ಶುದ್ಧೀಕರಣ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿವೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯದಲ್ಲಿ ಶುಚಿತ್ವ ಕಾರ್ಯ ನಡೆಸಿ ಮಹಾಪೂಜೆ ನೆರವೇರಿಸಲಾಯಿತು. ಬೆಳಗಾವಿಯ ಕಪಿಲೇಶ್ವರ ದೇಗುಲದಲ್ಲಿ ಗಂಗಾಜಲ ಮತ್ತು ಗೋಮೂತ್ರದಿಂದ ಶುದ್ಧೀಕರಣ ಮಾಡಿ ಕ್ಷೀರಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಿತು.

ಯಾವೆಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ?

ಕಲಬುರಗಿಯ ಶರಣ ಬಸವೇಶ್ವರ ದೇವಸ್ಥಾನದಲ್ಲೂ ಸ್ವಚ್ಛತಾ ಕಾರ್ಯದ ನಂತರ ಪೂಜಾ ವಿಧಿವಿಧಾನಗಳು ನಡೆದವು. ಶಿವಮೊಗ್ಗದ ಜೆಪಿಎನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇಗುಲದಲ್ಲಿ ಗ್ರಹಣಮೋಕ್ಷದ ಬಳಿಕ ಅಭಿಷೇಕ ಮತ್ತು ಗ್ರಹಣ ಶಾಂತಿ ಹೋಮ ನೆರವೇರಿಸಲಾಯಿತು. ದಾವಣಗೆರೆಯ ದುರ್ಗಾಂಬಿಕಾ ದೇವಾಲಯದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಗಳು ಜರುಗಿದವು.

ಮೈಸೂರಿನ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಾಲಯದಲ್ಲಿ ಶುದ್ಧೀಕರಣ ಮಾಡಿ ಗ್ರಹಣದೋಷ ಹೋಮ ನಡೆಸಲಾಯಿತು. ಹಾಸನದ ಪ್ರಸನ್ನ ಗಣಪತಿ ದೇವಾಲಯದಲ್ಲಿ ನವಗ್ರಹ ಶಾಂತಿ ಹಾಗೂ ಜಪತಪ ಹೋಮಗಳು ನೆರವೇರಿದವು. ಕೊಪ್ಪಳದ ಹುಲಿಗೆಮ್ಮ ದೇವಾಲಯದಲ್ಲೂ ವಿಶೇಷ ಅಲಂಕಾರ ಮತ್ತು ಪೂಜಾ ಕೈಂಕರ್ಯಗಳು ನಡೆದವು.

ಇದನ್ನೂ ಓದಿ Mahakali Temple: ಗ್ರಹಣ ಕಾಲದಲ್ಲಿ ಬೆಂಗಳೂರಿನ ಈ ಕಾಳಿ ದೇವಾಲಯದಲ್ಲಿ ನಡೆಯುತ್ತೆ ವಿಶೇಷ ಪೂಜೆ

ಬೆಂಗಳೂರಿನ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಗ್ರಹಣದ ವೇಳೆ ಯಜ್ಞಕಾರ್ಯಗಳು ನೆರವೇರಿದ್ದು, ಮೋಕ್ಷದ ಬಳಿಕ ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಗುಟ್ಟಹಳ್ಳಿಯ ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಚಂದ್ರ ಹಾಗೂ ಕೇತು ಶಾಂತಿ ಹೋಮ, ಪೂರ್ಣಾಹುತಿ ಮತ್ತು ಕಳಸಾಭಿಷೇಕ ನೆರವೇರಿಸಲಾಯಿತು. ಸಾವಿರಾರು ಭಕ್ತರು ದರ್ಶನ ಪಡೆದರು. ಒಟ್ಟಾರೆ, ಗ್ರಹಣದ ನಂತರ ಎಲ್ಲಾ ಪ್ರಮುಖ ದೇವಾಲಯಗಳು ಪುನಃ ಭಕ್ತರಿಗೆ ತೆರೆಯಲ್ಪಟ್ಟಿದ್ದು, ಬೆಳಗ್ಗಿನಿಂದಲೇ ಶುದ್ಧೀಕರಣ ಮತ್ತು ಪೂಜಾ ಕಾರ್ಯಗಳು ಭಕ್ತಿಭಾವದಿಂದ ನಡೆಯುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *