ಚಿಕ್ಕಮಗಳೂರು, ಆಗಸ್ಟ್ 03: ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ (Rain) ಅಬ್ಬರ ಮುಂದುವರೆದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತುಂಗಾ-ಭದ್ರಾ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ಶೃಂಗೇರಿಯ ಗಾಂಧಿ ಮೈದಾನ ಇಡೀ ಜಲಾವೃತವಾಗಿತ್ತು. ಭದ್ರೆಯ ಅಬ್ಬರಕ್ಕೆ ಹೊಲ-ಗದ್ದೆ ತೋಟಗಳು ಜಲಾವೃತವಾಗಿವೆ. ನಾಲ್ಕು ದಿನದ ಹಿಂದೆ ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರು ಸುರಿಯುತ್ತಿರುವ ಮಳೆ ಕಂಡು ಆತಂಕಕ್ಕೀಡಾಗಿದ್ದಾರೆ.
ನದೀತೀರದ ತೋಟಗಳು ಜಲಾವೃತ: ಲಕ್ಷಾಂತರ ರೂ ಹಾನಿ
ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಅಬ್ಬರಕ್ಕೆ ತುಂಗಾ ಮತ್ತಯ ಭದ್ರ ನದಿಗಳ ಜಲಾನಯನ ಪ್ರದೇಶದ ಹೊಲ-ಗದ್ದೆ, ತೋಟಗಳ ಮಾಲೀಕರು ಕಂಗಾಲಾಗಿದ್ದಾರೆ. ಮೂರು ದಿನದ ಹಿಂದೆ ಮಳೆಗಾಗಿ ಮುಗಿಲು ನೋಡುತ್ತಿದ್ದ ಮಳೆನಾಡಿದರು ಇಂದು ಭವಿಷ್ಯದ ಬದುಕಿನ ಬಗ್ಗೆ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳಸ ತಾಲೂಕಿನ ಸಂಸೆ ಸಮೀಪದ ಹೊಸಮಠ ಗ್ರಾಮದ ಅಶೋಕ್, ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಬೆಳೆದಿದ್ದ ತೋಟದ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ಭದ್ರೆಯ ಅಬ್ಬರಕ್ಕೆ ತೋಟ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ತೋಟದಲ್ಲಿದ್ದ ಮಿಶ್ರಬೆಳೆ ಕಾಫಿ, ಅಡಿಕೆ, ಮೆಣಸು, ಬಾಳೆ ಬಹುತೇಕ ನೆಲ ಕಚ್ಚಿದೆ. ಭದ್ರಾ ನದಿಯ ಅಬ್ಬರಕ್ಕೆ ಮಳೆ ನೀರು ಅಶೋಕ್ ಅವರ ಮನೆಗೂ ನುಗ್ಗಿದ್ದು, ಗೃಹ ಉಪಯೋಗಿ ವಸ್ತುಗಳು ನಾಶವಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆ: ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಇನ್ನು ತುಂಗಾ ನದಿಯ ರಭಸಕ್ಕೆ ಶೃಂಗೇರಿ ಮಠದ ಭಕ್ತರು ಕೂಡ ಕಂಗಾಲಾಗಿದ್ದಾರೆ. ಮೂರೇ ಮೂರು ದಿನದ ಮಳೆಗೆ ಶೃಂಗೇರಿ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿ ದೇಗುಲದ ಪಾರ್ಕಿಂಗ್ ಮಾರ್ಗದ ರಸ್ತೆ ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಶಾರದಾಂಬೆ ದೇಗುಲದ ನೆಲ ಮಾಳಿಗೆ, ಊಟದ ಹಾಲ್ಗೂ ಮಳೆ ನೀರು ನುಗ್ಗಿದ್ದು, ಭಕ್ತರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ.
ಸಂಪರ್ಕ ಕಡಿತ: ವಿದ್ಯುತ್ ವ್ಯತ್ಯಯ
ಶೃಂಗೇರಿ ಪಟ್ಟಣದ ಕುರುಬಕೇರಿಯ ಮುಖ್ಯ ರಸ್ತೆಯೂ ಜಲಾವೃತವಾಗಿದೆ. ಪ್ರವಾಸಿಗರು, ಸ್ಥಳೀಯರು ನದಿ ತೀರಕ್ಕೆ ಹೋಗದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಿರಿಮನೆ ಜಲಪಾತದ ರಸ್ತೆಯಲ್ಲಿ ಬೃಹತ್ ಮರ ಬಿದ್ದು ಸಂಚಾರ ಬಂದ್ ಆಗಿತ್ತು. ಮಳೆ ಮಧ್ಯೆಯೂ ಸ್ಥಳೀಯರು ಮರ ತೆರವು ಮಾಡಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೊಪ್ಪ ತಾಲೂಕಿನ ಮೆಣಸಿನಹಾಡ್ಯ ಹಾಗೂ ಕೊಗ್ರೆ ಭಾಗದಲ್ಲಿ ಸೇತುವೆಗಳೇ ಜಲಾವೃತಗೊಂಡು ಹಳ್ಳಿಗರ ಪರದಾಡುವಂತಾಗಿದೆ. ಈ ಮಧ್ಯೆ ಮಳೆಗೆ ವಿದ್ಯುತ್ ತಂತಿ ಮೇಲೆ ಮರ ಬಿದ್ದು ಕಾಡಂಚಿನ ಕುಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಒಟ್ಟಾರೆ, ಮಲೆನಾಡಲ್ಲಿ ಮಳೆ ಅಬ್ಬರ ಪ್ರವಾಹದ ಭೀತಿ ತಂದೊಡ್ಡಿದ್ದರೂ ಕೂಡ, ಕಾಫಿನಾಡಲ್ಲಿ ಈ ವೇಳೆಗೆ ಪ್ರತಿವರ್ಷ ಸುರಿಯುವ ವಾಡಿಕೆ ಮಳೆ ಸುರಿದಿಲ್ಲ. ಇದು ಭವಿಷ್ಯದ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ ಅಡಿಕೆ ಹಾಗೂ ಮೆಣಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಬೆಳೆಗಾರರದ್ದು. ಆದರೆ, ಮುಂದಿನ ದಿನಗಳಲ್ಲಿ ಮಳೆ ಹೀಗೇ ಇರುತ್ತೋ ಅಥವಾ ಕಡಿಮೆಯಾಗಿ ಮತ್ತೆ ಬೆಳೆಗಾರರ ಭವಿಷ್ಯದ ಮೇಲೆ ಬರೆ ಎಳೆಯುತ್ತೋ ಕಾದು ನೋಡಬೇಕು. ಆದರೆ, ಮಲೆನಾಡಿಗರು ಮಾತ್ರ ಉಯ್ಯೋ… ಉಯ್ಯೋ… ಮಳೆರಾಯ ಅಂತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.