Headlines

ಚೆಂಡು ವಿಕೆಟ್​ಗೆ ತಾಗದಿದ್ದರೂ ಔಟ್ ನೀಡಿದ್ದೇಕೆ? ಇಲ್ಲಿದೆ ಐಪಿಎಲ್ ನಿಯಮ – Kannada News | IPL 2026: Angkrish Raghuvanshi Run out explained

ಐಪಿಎಲ್ 2026ರ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯವು ಒಂದು ಅಪರೂಪದ ಮತ್ತು ವಿವಾದಾತ್ಮಕ ರನೌಟ್​​ಗೆ ಸಾಕ್ಷಿಯಾಯಿತು. ಕೆಕೆಆರ್ ತಂಡದ ಯುವ ಬ್ಯಾಟರ್ ಅಂಗ್​​ಕ್ರಿಶ್​ ರಘುವಂಶಿ ಅವರು ‘ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್’ (ಫೀಲ್ಡಿಂಗ್‌ಗೆ ಅಡ್ಡಿಪಡಿಸುವುದು) ನಿಯಮದಡಿ ಔಟ್ ಆಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದಾರೆ.

ಪಂದ್ಯದ 5ನೇ ಓವರ್‌ನಲ್ಲಿ ಪ್ರಿನ್ಸ್ ಯಾದವ್ ಎಸೆದ ಚೆಂಡನ್ನು ಬಾರಿಸಿದ ರಘುವಂಶಿ, ಒಂದು ರನ್ ಪಡೆಯಲು ಓಡಿದರು. ಆದರೆ ಅತ್ತ ಕಡೆಯಿದ್ದ ಕ್ಯಾಮರೋನ್ ಗ್ರೀನ್ ರನ್ ಬೇಡವೆಂದು ನಿರಾಕರಿಸಿದರು. ತಕ್ಷಣ ಕ್ರೀಸ್‌ಗೆ ಮರಳಲು ಪ್ರಯತ್ನಿಸುತ್ತಿದ್ದಾಗ ಮೊಹಮ್ಮದ್ ಶಮಿ ವಿಕೆಟ್ ಕೀಪರ್​ನತ್ತ ಚೆಂಡೆಸೆದರು. ಆದರೆ ಚೆಂಡು ವಿಕೆಟ್‌ಗೆ ತಗುಲುವ ಬದಲು ರಘುವಂಶಿ ಅವರ ಪ್ಯಾಡ್‌ಗೆ ಬಡಿಯಿತು.

ಅಂಪೈರ್​ಗೆ ಮನವಿ:

ಲಕ್ನೋ ಸೂಪರ್ ಜೈಂಟ್ಸ್​​ ತಂಡದ ನಾಯಕ ರಿಷಭ್ ಪಂತ್, ಕೆಕೆಆರ್ ಆಟಗಾರ ಅಂಗ್​ಕ್ರಿಶ್​ ರಘುವಂಶಿ ಉದ್ದೇಶಪೂರ್ವಕವಾಗಿ ಚೆಂಡಿಗೆ ಅಡ್ಡ ಬಂದಿದ್ದಾರೆ ಎಂದು ಔಟ್‌ಗಾಗಿ ಮನವಿ ಮಾಡಿದರು.

ಮೂರನೇ ಅಂಪೈರ್ ರೋಹನ್ ಪಂಡಿತ್ ಅವರು ವಿಡಿಯೋ ಮರುಪರಿಶೀಲಿಸಿದಾಗ, ರಘುವಂಶಿ ಅವರು ಕ್ರೀಸ್‌ಗೆ ಮರಳುವಾಗ ತಮ್ಮ ಓಡುವ ಹಾದಿಯನ್ನು (Running Line) ಬದಲಾಯಿಸಿರುವುದು ಕಂಡುಬಂದಿದೆ. ಐಪಿಎಲ್ ನಿಯಮ 37.1.4ರ ಪ್ರಕಾರ, ಒಬ್ಬ ಬ್ಯಾಟರ್ ಫೀಲ್ಡರ್ ಎಸೆಯುವ ಚೆಂಡು ವಿಕೆಟ್‌ಗೆ ತಗುಲದಂತೆ ತಡೆಯಲು ತನ್ನ ಹಾದಿಯನ್ನು ಬದಲಾಯಿಸಿದರೆ ಅದನ್ನು ‘ಅಡ್ಡಿ’ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ರಘುವಂಶಿ ಅವರನ್ನು ಔಟ್ ಎಂದು ಘೋಷಿಸಲಾಯಿತು.

ಕೆಕೆಆರ್ ಅಸಮಾಧಾನ:

ಮೂರನೇ ಅಂಪೈರ್​​​ನ ಈ ತೀರ್ಪಿಗೆ ಕೆಕೆಆರ್ ಕೋಚ್ ಅಭಿಷೇಕ್ ನಾಯರ್ ಅಸಮಾಧಾನ ವ್ಯಕ್ತಪಡಿಸಿ ಲೈನ್​ ಅಂಪೈರ್‌ಗಳೊಂದಿಗೆ ಚರ್ಚೆ ನಡೆಸಿದರು. ಇತ್ತ ಕೆಕೆಆರ್​ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ತೀರ್ಪಿಗೆ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ನಿಯಮ ಏನು ಹೇಳುತ್ತೆ?

ಕ್ರಿಕೆಟ್‌ನಲ್ಲಿ ಬ್ಯಾಟರ್ ಒಬ್ಬರು ಉದ್ದೇಶಪೂರ್ವಕವಾಗಿ ಎದುರಾಳಿ ತಂಡದ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದರೆ, ಅವರನ್ನು ಈ ನಿಯಮದಡಿ ಔಟ್ ಎಂದು ಘೋಷಿಸಲಾಗುತ್ತದೆ. ಇದು ಕ್ರಿಕೆಟ್‌ನ 37ನೇ ನಿಯಮವಾಗಿದೆ. ಈ ನಿಯಮದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…

ಉದ್ದೇಶಪೂರ್ವಕ ಅಡ್ಡಿ: ರನ್ ಓಡುವಾಗ ಫೀಲ್ಡರ್ ಎಸೆದ ಚೆಂಡು ಸ್ಟಂಪ್‌ಗೆ ತಗುಲದಂತೆ ಬ್ಯಾಟರ್ ಬೇಕೆಂದೇ ಅಡ್ಡ ಬಂದಲ್ಲಿ ಅಥವಾ ತನ್ನ ಹಾದಿಯನ್ನು ಬದಲಿಸಿದರೆ ಈ ನಿಯಮ ಅನ್ವಯವಾಗುತ್ತದೆ.

ಕೈಯಿಂದ ಚೆಂಡನ್ನು ಮುಟ್ಟುವುದು: ಈ ಹಿಂದೆ ‘ಹ್ಯಾಂಡ್ಲ್ಡ್ ದ ಬಾಲ್’ (Handled the ball) ಎಂಬ ಪ್ರತ್ಯೇಕ ನಿಯಮವಿತ್ತು. ಆದರೆ 2017ರಲ್ಲಿ ಇದನ್ನು ‘ಫೀಲ್ಡಿಂಗ್‌ಗೆ ಅಡ್ಡಿಪಡಿಸುವಿಕೆ’ ನಿಯಮದ ಅಡಿಯಲ್ಲಿ ತರಲಾಯಿತು. ಬ್ಯಾಟರ್ ಚೆಂಡನ್ನು ಉದ್ದೇಶಪೂರ್ವಕವಾಗಿ ಕೈಯಿಂದ ಮುಟ್ಟಿದರೆ ಔಟ್ ನೀಡಲಾಗುತ್ತದೆ. ಅಂದರೆ ಚೆಂಡು ವಿಕೆಟ್​ನತ್ತ ಸಾಗುತ್ತಿರುವಾಗ ಮುಟ್ಟಿದರೆ ಅಥವಾ ಗಾಳಿಯಲ್ಲಿರುವಾಗ ಮುಟ್ಟಿದರೆ ಔಟ್ ಎಂದು ಎಂದು ಪರಿಗಣಿಸಲಾಗುತ್ತದೆ.

ಹಾದಿ ಬದಲಿಸುವುದು: ಬ್ಯಾಟರ್ ರನ್ ಓಡುವಾಗ ಫೀಲ್ಡರ್ ಎಸೆಯುವ ಚೆಂಡು ವಿಕೆಟ್‌ಗೆ ತಗುಲದಂತೆ ತಡೆಯಲು ಉದ್ದೇಶಪೂರ್ವಕವಾಗಿ ತಮ್ಮ ಓಡುವ ಹಾದಿಯನ್ನು ಬದಲಿಸಿ (ಚೆಂಡಿಗೆ ಅಡ್ಡವಾಗಿ ಬರುವುದು) ಚೆಂಡು ತಮ್ಮ ದೇಹಕ್ಕೆ ತಗುಲುವಂತೆ ಮಾಡಿದರೆ ಅದು ಔಟ್ ಎಂದು ಪರಿಗಣಿಸಲ್ಪಡುತ್ತದೆ.

ಕ್ಯಾಚ್‌ಗೆ ಅಡ್ಡಿ: ಫೀಲ್ಡರ್ ಕ್ಯಾಚ್ ಹಿಡಿಯುವಾಗ ಬ್ಯಾಟರ್ ಅಡ್ಡ ಬಂದರೆ ಅಥವಾ ಫೀಲ್ಡರ್ ಗಮನ ಸೆಳೆಯಲು ಪ್ರಯತ್ನಿಸಿದರೆ ಔಟ್ ನೀಡಬಹುದು.

ವಿನಾಯಿತಿಗಳು:

  • ತಮಗೆ ಏಟು ಬೀಳದಂತೆ ರಕ್ಷಿಸಿಕೊಳ್ಳಲು ಬ್ಯಾಟರ್ ಪ್ರಯತ್ನಿಸಿದಾಗ ಅದು ಅಡ್ಡಿ ಎಂದು ಪರಿಗಣಿಸಲ್ಪಡುವುದಿಲ್ಲ.
  •  ಅಚಾತುರ್ಯದಿಂದ ಅಥವಾ ಆಕಸ್ಮಿಕವಾಗಿ ಫೀಲ್ಡರ್‌ಗೆ ಅಡ್ಡಿಯಾದರೆ ಅದನ್ನು ಔಟ್ ಎಂದು ಪರಿಗಣಿಸುವುದಿಲ್ಲ.

ಅಂಗ್​​ಕ್ರಿಶ್ ರಘುವಂಶಿದು ಔಟ್ ನೀಡಿದ್ದೇಕೆ?

ರಘುವಂಶಿ ಅವರು ಸಿಂಗಲ್ ರನ್ ಓಡಲು ಹೋಗಿ, ತಮ್ಮ ಪಾರ್ಟ್‌ನರ್ ಕ್ಯಾಮರೋನ್ ಗ್ರೀನ್ ನಿರಾಕರಿಸಿದಾಗ ವಾಪಸ್ ಕ್ರೀಸ್‌ಗೆ ಬಂದರು. ಈ ವೇಳೆ ಅವರು ನೇರವಾದ ಹಾದಿಯಲ್ಲಿ ಬರುವ ಬದಲು, ಉದ್ದೇಶಪೂರ್ವಕವಾಗಿ ತಮ್ಮ ಹಾದಿಯನ್ನು ಬದಲಿಸಿ ಫೀಲ್ಡರ್ ಮೊಹಮ್ಮದ್ ಶಮಿ ಎಸೆದ ಚೆಂಡಿಗೆ ಅಡ್ಡ ಬಂದಿದ್ದರು.

ಅಂಪೈರ್ ಅವರು ರೀಪ್ಲೇಗಳನ್ನು ಪರಿಶೀಲಿಸಿದಾಗ, ರಘುವಂಶಿ ಅವರು ಶಮಿ ಚೆಂಡನ್ನು ಎಸೆಯುವುದನ್ನು ಗಮನಿಸುತ್ತಿದ್ದರು ಮತ್ತು ಅದರ ಪಥವನ್ನು ಅರಿತೇ ಅಡ್ಡ ಬಂದರು ಎಂದು ನಿರ್ಧರಿಸಿದ್ದಾರೆ. ಅಂದರೆ ಇಲ್ಲಿ ರಘುವಂಶಿ ಬೇಕೆಂದೇ ಹಾದಿ ಬದಲಿಸಿರುವುದು ಸ್ಪಷ್ಟವಾಗಿ ಕಾಣಿಸಿದೆ.

ಇದನ್ನೂ ಓದಿ: RCB vs DC ಪಂದ್ಯಕ್ಕೆ 6 ಆಟಗಾರರು ಅಲಭ್ಯ..!

IPL ನಿಯಮ​ 37.1.4 ಪ್ರಕಾರ, ರನ್ ಓಡುವಾಗ ಬ್ಯಾಟರ್ ಯಾವುದೇ ಸರಿಯಾದ ಕಾರಣವಿಲ್ಲದೆ ಫೀಲ್ಡರ್‌ನ ರನ್-ಔಟ್ ಪ್ರಯತ್ನಕ್ಕೆ ಅಡ್ಡಿಯಾಗುವಂತೆ ತನ್ನ ಹಾದಿಯನ್ನು ಬದಲಿಸಿದರೆ, ಅವರನ್ನು ಔಟ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಅಂಗ್​ಕ್ರೀಶ್ ರಘುವಂಶಿಯನ್ನು ಔಟ್ ಎಂದು ತೀರ್ಪು ನೀಡಿದ್ದಾರೆ.

Published On – 8:52 am, Mon, 27 April 26

Source link

Leave a Reply

Your email address will not be published. Required fields are marked *