Headlines

ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆ ಬಳಿ ಕಣ್ಣೀರು ಹಾಕಿದ ದೇವೇಗೌಡ; ಇನ್ನು ಆ ದೇವರೇ ಕಾಪಾಡಬೇಕು ಎಂದ ಹೆಚ್‌ಡಿಕೆ – Kannada News | Deve Gowda’s Wife Chennamma’s Health Critical; Family Prays at Bengaluru Manipal

ದೇವೇಗೌಡರ ಪತ್ನಿ,ಕುಮಾರಸ್ವಾಮಿ ಕಣ್ಣೀರು

ಬೆಂಗಳೂರು, ಜು.17 : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿ ಹೊರಬಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಗದ್ಗದಿತರಾಗಿ ಕಣ್ಣೀರು ಹಾಕಿರುವ ಹೃದಯವಿದ್ರಾವಕ ದೃಶ್ಯ ಕಂಡುಬಂದಿದೆ. ಆಸ್ಪತ್ರೆಯಿಂದ ಹೊರಬರುವಾಗ ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಲೇ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಅವರು ತಾಯಿಯ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

“ಮೊನ್ನೆ ದಿನ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ತಾಯಿಯವರನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಅವರಿಗೆ ಅತ್ಯಂತ ಉತ್ತಮವಾದ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ವೈದ್ಯರು ತಮ್ಮ ಕೈಮೀರಿ ಪ್ರಯತ್ನ ಮಾಡಿದ್ದಾರೆ. ಈಗ ಆ ದೇವರೇ ಅವರನ್ನು ಕಾಪಾಡಬೇಕು” ಎಂದು ಭಾವುಕರಾಗಿ ಹೇಳಿದರು.

ಇಲ್ಲಿದೆ ನೋಡಿ ವಿಡಿಯೋ:

25 ವರ್ಷಗಳ ಹಿಂದೆ ತಾಯಿಯವರ ಮೇಲೆ ಆ್ಯಸಿಡ್ ದಾಳಿ ಆದಾಗಲೂ ಅವರು ಬದುಕುವುದಿಲ್ಲ ಎಂದಿದ್ದರು. ಆದರೆ ಆಗ ದೇವರ ಪೂಜೆಯಿಂದಾಗಿ ಅವರು ಪಾರಾಗಿದ್ದರು. ಅವರು ಮೊದಲಿನಿಂದಲೂ ಆ ದೇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಈಗ ವೈದ್ಯಕೀಯ ಚಿಕಿತ್ಸೆಗಿಂತಲೂ ಆ ರಾಜರಾಜೇಶ್ವರಿ ತಾಯಿಯೇ ಅವರನ್ನು ಕಾಪಾಡಬೇಕು. ಹಿಂದೆಯೂ ಕಾಪಾಡಿದ್ದರು, ಈಗಲೂ ಯಾವುದೇ ಸಮಸ್ಯೆ ಇಲ್ಲದೆ ಗುಣಮುಖರಾಗಿ ಮನೆಗೆ ಬರುತ್ತಾರೆ ಎಂಬ ನಂಬಿಕೆ ನಮಗಿದೆ” ಎಂದು ಗದ್ಗದಿತರಾದರು.

ಇದನ್ನೂ ಓದಿ: ಆಸ್ಪತ್ರೆಗೆ ಭೇಟಿ ನೀಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್

ಇದೇ ವೇಳೆ ಮಣಿಪಾಲ್ ಆಸ್ಪತ್ರೆಯ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಚೆನ್ನಮ್ಮ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. “ಚೆನ್ನಮ್ಮನಿಗೆ ಬುಧವಾರದಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಅವರನ್ನು ತಕ್ಷಣವೇ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ.””ಉಸಿರಾಟದ ಸಮಸ್ಯೆ ಹೊರತುಪಡಿಸಿ ಸದ್ಯಕ್ಕೆ ಬೇರೆ ಯಾವುದೇ ದೊಡ್ಡ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ, ನೋಡೋಣ. ನನಗೆ ಇಂದು ಡಯಾಲಿಸಿಸ್ ಮಾಡಲಾಗಿದೆ, ಹಾಗಾಗಿ ನಾನು ಈಗ ಮನೆಗೆ ಹೋಗಬೇಕು” ಎಂದು ದೇವೇಗೌಡರು ಹೇಳಿದ್ದಾರೆ. ದೊಡ್ಡಗೌಡರ ಇಡೀ ಕುಟುಂಬವೇ ಸದ್ಯ ಆಸ್ಪತ್ರೆಯ ಬಳಿ ಮೊಕ್ಕಾಂ ಹೂಡಿದ್ದು, ಇಡೀ ನಾಡಿನಾದ್ಯಂತ ಚೆನ್ನಮ್ಮ ಅವರು ಬೇಗ ಗುಣಮುಖರಾಗಲಿ ಎಂದು ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ವರದಿ: ಈರಣ್ಣ ಬಸವ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *