ಕಾರವಾರ, ಏಪ್ರಿಲ್ 26: ಮೀಟರ್ ಬಡ್ಡಿ ದಂಧೆ ಕಿಂಗ್ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ (Zameer Durgawale) ಕೊಲೆ (kill) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕಾರ್ಯಾಚರಣೆ ನಡೆಸಿ, ಮಂಜುನಾಥ ನಾಗೇಂದ್ರ ಕಾಜಗಾರ(35), ಶ್ರೀಕಾಂತ್ ಕಿರಣ್ಣನವರ್(22), ಮಲ್ಲಿಕಾರ್ಜುನ ಬಡಶೆಟ್ಟಿ(22), ಮಂಜುನಾಥ್ ವಿಷ್ಣು ಬೆಳಗಾಂವ(20) ಮತ್ತು ದೀಪಕ ನಾಗರಾಜ ನವಲೆ(22) ಬಂಧಿಸಲಾಗಿದೆ. ಸದ್ಯ ಬಂಧಿತರಿಂದ 2 ಕಂಟ್ರಿಮೇಡ್ ಪಿಸ್ತೂಲ್ಗಳನ್ನು ಜಪ್ತಿ ಮಾಡಲಾಗಿದೆ.
4 ವರ್ಷಗಳ ಹಿಂದೆ ಹರ್ಷ ಕೊಲೆ ಪ್ರಕರಣದ ಆರೋಪಿ, ಮುಂಡಗೋಡ ನಿವಾಸಿ ಮಂಜುನಾಥ್ ಕಾಜಗಾರನ ಮೀಟರ್ ಬಡ್ಡಿ ದಂಧೆಗೆ ಜಮೀರ್ ದರ್ಗಾವಾಲೆ ಅಡ್ಡಿಯಾಗಿದ್ದ. ಮಂಜುನಾಥ್ ಜತೆ ಕೆಲಸ ಮಾಡುತ್ತಿದ್ದವರನ್ನು ಜಮೀರ್ ಸೇರಿಸಿಕೊಂಡಿದ್ದ. ಇದರಿಂದ ಮಂಜುನಾಥ್ ಕುಪಿತಗೊಂಡಿದ್ದ. ಅಷ್ಟೇ ಅಲ್ಲದೆ ಜಮೀರ್ ನೀಡುತ್ತಿದ್ದ ಕಿರುಕುಳ ತಾಳಲಾರದೆ ಮುಂಡಗೋಡ ಬಿಟ್ಟು ಹುಬ್ಬಳ್ಳಿಗೆ ಶಿಫ್ಟ್ ಆಗಿದ್ದ.
ಹುಬ್ಬಳ್ಳಿ ಹಂತಕರಿಗೆ ಸುಪಾರಿ
ಇನ್ನು ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿತ್ತು. ಜಮೀರ್ ದರ್ಗಾವಾಲೆ 300ಕ್ಕೂ ಹೆಚ್ಚು ಜನರ ಮೇಲೆ ಚೆಕ್ಬೌನ್ಸ್ ಕೇಸ್ ದಾಖಲಿಸಿದ್ದ. ಜಮೀರ್ ಸಿಕ್ಕಾಪಟ್ಟೆ ಹಣ ಮಾಡುತ್ತಿರುವದನ್ನು ಸಹಿಸದ ಆರೋಪಿ ಮಂಜುನಾಥ್, ಹುಬ್ಬಳ್ಳಿ ಮೂಲದ ಹಂತಕರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ.
ಕೊಲೆಗೆ ಮೀಟರ್ ಬಡ್ಡಿ ದಂಧೆಯೇ ಕಾರಣ
ಇನ್ನು ಜಮೀರ್ ದರ್ಗಾವಾಲೆ ಕೊಲೆಗೆ ಮೀಟರ್ ಬಡ್ಡಿ ದಂಧೆಯೇ ಕಾರಣ ಎಂದು ಮುಂಡಗೋಡ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಈ ಹಿಂದೆ ಟಿವಿ9 ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಎಂ ನಾರಾಯಣ ಜಮೀರ್ ದರ್ಗಾವಾಲೆ ಬಂಧಿಸಿ ಖಡಕ್ ವಾರ್ನ್ ಮಾಡಿದ್ದರು.
ಇದನ್ನೂ ಓದಿ: ಕಲಬುರಗಿಯಲ್ಲಿ ಗುಂಡಿನ ಸದ್ದು: ಫೈರಿಂಗ್ ಮಾಡಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ
ಆ ಬಳಿಕ ದರ್ಗಾವಾಲೆ ಸೈಲೆಂಟ್ ಆಗಿದ್ದ. ಆದರೆ ನಾರಾಯಣ ವರ್ಗಾವಣೆ ಬಳಿಕ ಮತ್ತೆ ಮೀಟರ್ ಬಡ್ಡಿ ದಂಧೆ ಶುರು ಆಗಿತ್ತು. ಮೀಟರ್ ಬಡ್ಡಿ ದಂಧೆಯಿಂದ ಜಮೀರ್ ಕೋಟಿ ಕೋಟಿ ಹಣ ಮಾಡಿದ್ದ. ಈತನ ಕಾಟಕ್ಕೆ ಬಹಳಷ್ಟು ಜನರು ಊರು ಬಿಟ್ಟಿದ್ದಾರೆ. ಇದೀಗ ಮೀಟರ್ ಬಡ್ಡಿ ದಂಧೆಯಿಂದಲೇ ದರ್ಗಾವಾಲೆ ಕೊಲೆಗೀಡಾಗಿದ್ದಾನೆ ಎಂಬುವುದು ತನಿಖೆಯಲ್ಲಿ ಬಯಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.