ವಿದ್ಯಾರ್ಥಿ ಮುಖಂಡ ದೇವೇಂದ್ರನಾಥ್ ಮಹತೋ ಉಪವಾಸ ಸತ್ಯಾಗ್ರಹImage Credit source: PTI
ನವದೆಹಲಿ, ಆಗಸ್ಟ್ 9: ಜಾರ್ಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ (JPSC) ಮತ್ತು ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (JSSC) ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಮಸ್ಯೆ ಬಗೆಹರಿಸಲು ಜಾರ್ಖಂಡ್ ಸರ್ಕಾರವು ವಿದ್ಯಾರ್ಥಿಗಳ ನಿಯೋಗದೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದೆ.
ವಿದ್ಯಾರ್ಥಿಗಳ ಬೇಡಿಕೆ ಮತ್ತು ಸರ್ಕಾರದ ಸ್ಪಂದನೆ
JPSC ಮತ್ತು JSSC ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಬಿಐ (CBI) ತನಿಖೆಯಾಗಬೇಕು ಮತ್ತು ಇತ್ತೀಚೆಗೆ ನಡೆದ 14ನೇ ಜೆಪಿಎಸ್ಸಿ ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಕೆಲ ಪ್ರಮುಖ ಭರವಸೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದೆ:
- ಸಿಐಡಿ ತನಿಖೆ 90 ದಿನದೊಳಗೆ ಪೂರ್ಣಗೊಳ್ಳುತ್ತದೆ.
- ಅಕ್ರಮಗಳ ಬಗ್ಗೆ ಇಡಿಯಿಂದ ಪರಿಶೀಲನೆ
- 14ನೇ ಜೆಪಿಎಸ್ಸಿ ಪರೀಕ್ಷೆ ಹಾಗೂ 2023ರಿಂದ 2025ರವರೆಗಿನ ಬ್ಯಾಕ್ಲಾಗ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗುವುದು.
- ಟಿಡಿಪಿಎಲ್ ಮೂಲಕ ನಡೆಸಲಾದ ಎಲ್ಲಾ ಪರೀಕ್ಷೆಗಳನ್ನೂ ತನಿಖೆಗೆ ಒಳಪಡಿಸಲಾಗುವುದು
- ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಎಲ್ಲಾ ಸುಧಾರಣೆಗಳನ್ನು ಅಂತಿಮಗೊಳಿಸಲಾಗುವುದು.
- ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಯನ್ನು ಸುಧಾರಣಾ ಪ್ರಕ್ರಿಯೆಯಲ್ಲಿ ಬಳಸಲಾಗುವುದು.
- ಸಿಬಿಐ ತನಿಖೆ ನಡೆಸಲಾಗುವುದಿಲ್ಲ.
ಇದನ್ನೂ ಓದಿ: ಹೈದರಾಬಾದ್: ನಲ್ಸಾರ್ ಕಾನೂನು ವಿವಿ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸಿಜೆಐ ಮುಖ್ಯ ಅತಿಥಿಯಾಗಲು ವಿದ್ಯಾರ್ಥಿಗಳಿಂದ ವಿರೋಧ?
ಸರ್ಕಾರದ ಪ್ರತಿಕ್ರಿಯೆ ಮತ್ತು ಕ್ರಮಗಳು: ಸಚಿವರಾದ ಸುದಿವ್ಯ ಕುಮಾರ್ ಮತ್ತು ದೀಪಿಕಾ ಪಾಂಡೆ ಸಿಂಗ್ ಅವರನ್ನೊಳಗೊಂಡ ನಿಯೋಗವು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದೆ. ಆದರೆ, ಈವರೆಗಿನ ಮಾತುಕತೆಗಳು ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ತರುವ ಬಗ್ಗೆ ಸಲಹೆಗಳನ್ನು ನೀಡಲು ಸರ್ಕಾರವು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಇಮೇಲ್ ಐಡಿ (Email ID) ಬಿಡುಗಡೆ ಮಾಡಿದೆ.
ಭಯಪಡದೆ ಬನ್ನಿ ಎಂದ ಸಿಎಂ: ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಯಾವ ರಾಜಕೀಯ ಪಕ್ಷದ ನೆರವು ಬಯಸಬಾರದು. ನಿರ್ಭೀತಿಯಿಂದ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಮುಂದೆ ಬರಬೇಕು ಎಂದು ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಹೇಳಿದ್ದಾರೆ.
ಇದನ್ನೂ ಓದಿ: 90ರ ದಶಕದ ಕರಾಳ ಕಾಶ್ಮೀರಿ ಉಗ್ರ ಇತಿಹಾಸ ಮರುಕಳಿಸುತ್ತಿದೆಯೇ? ಪಂಡಿತರಿಗೆ ಶುರುವಾಗಿವೆ ಉಗ್ರ ಬೆದರಿಕೆಗಳು
ಹದಗೆಟ್ಟ ವಿದ್ಯಾರ್ಥಿ ನಾಯಕನ ಆರೋಗ್ಯ: ಆಗಸ್ಟ್ 3 ರಿಂದ ಜೈಪಾಲ್ ಸಿಂಗ್ ಕ್ರೀಡಾಂಗಣದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಮುಖ ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಮುಂದಿನ ಹೆಜ್ಜೆ: ಭಾನುವಾರ ಮಧ್ಯಾಹ್ನ ಮತ್ತೊಂದು ಸುತ್ತಿನ ನಿರ್ಣಾಯಕ ಮಾತುಕತೆಗೆ ಸರ್ಕಾರ ಕರೆ ನೀಡಿದೆ. ಒಂದು ವೇಳೆ ತಮ್ಮ ಬೇಡಿಕೆಗಳು ಈಡೇರದಿದ್ದರೆ ಆಗಸ್ಟ್ 10 ರಂದು ಜಾರ್ಖಂಡ್ ವಿಧಾನಸಭೆಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 5:03 pm, Sun, 9 August 26