ಜಿಮ್ ಟ್ರೈನರ್ ವಿಜಯ್Image Credit source: tv9 kannada
ಆನೇಕಲ್, ಜೂನ್ 21: ಜಿಮ್ ಟ್ರೈನರ್ ವಿಜಯ್ ಕೊಲೆ ಪ್ರಕರಣಕ್ಕೆ (Gym Trainer kill case) ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪ್ರಭಾವಿ ಉದ್ಯಮಿಯ ಮಗಳ ಜೊತೆಗಿನ ಲವ್ ಕಹಾನಿಯೇ ವಿಜಯ್ ಕೊಲೆಗೆ ಕಾರಣವಾಗಿದೆ. ನಾಲ್ವರು ಆರೋಪಿಗಳ ಬಂಧನ ಬೆನ್ನಲ್ಲೇ ಸ್ಫೋಟಕ ತಿರುವು ಸಿಕ್ಕಿದ್ದು, ಉದ್ಯಮಿ (businessman) ಮಗಳ ಜೊತೆಗಿನ ವಿಜಯ್ ಪ್ರೀತಿ ಸುಪಾರಿ ಕೊಲೆಯಲ್ಲಿ ಅಂತ್ಯವಾಗಿದೆ.
ಮುಖ್ಯಾಂಶಗಳು
- ಜಿಮ್ ಟ್ರೈನರ್ ವಿಜಯ್ ಕೊಲೆ ಕೇಸ್ ಮೇಜರ್ ಟ್ವಿಸ್ಟ್
- ಕೇಸ್ ಹಿಂದೆ ಪ್ರಭಾವಿ ಉದ್ಯಮಿ ಕೈವಾಡ ಆರೋಪ
- ನಾಲ್ವರು ಆರೋಪಿಗಳನ್ನ ಬಂಧಿಸಿರುವ ಬನ್ನೇರುಘಟ್ಟ ಪೊಲೀಸರು
ನಾಲ್ವರ ಬಂಧನ
ಕೋಲಾರದ ಮುಳಬಾಗಿಲು ಗ್ರಾಮದ ಜಿಮ್ ಟ್ರೈನರ್ ವಿಜಯ್ ಕೊಲೆ ಕೇಸ್ ಬೆಳಕಿಗೆ ಬಂದು ಇಂದಿಗೆ 10 ದಿನ ಕಳೆದಿದ್ದು, ಸದ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಸುಪಾರಿ ಸುಳಿವು ಸಿಗುತ್ತಿದ್ದಂತೆ ಹೈಪ್ರೊಫೈಲ್ ಪ್ರಕರಣವಾಗಿ ಬದಲಾಗಿತ್ತು. ಪ್ರಕರಣ ಸಂಬಂಧ ಬನ್ನೇರುಘಟ್ಟ ಪೊಲೀಸರು ಆನೇಕಲ್ ಮೂಲದ ಶ್ರೀರಾಮ್, ಸುಮಿತ್, ವೆಂಕಟೇಶಯ್ಯ ಮತ್ತು ಬಾಬು ಎಂಬ ನಾಲ್ವರನ್ನು ಬಂಧಿಸುತ್ತಿದ್ದಂತೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಇದನ್ನೂ ಓದಿ: ವಿಷ ಸೇವಿಸಿ ಶಾಲಾ ಮುಖ್ಯಶಿಕ್ಷಕ ಆತ್ಮಹತ್ಯೆ ಪ್ರಕರಣ: ಐವರು ಶಿಕ್ಷಕರು ಸೇರಿ 10 ಮಂದಿ ವಿರುದ್ಧ ಎಫ್ಐಆರ್
ಜಿಮ್ ಟ್ರೈನರ್ ವಿಜಯ್ ಕೊಲೆ ಹಿಂದೆ ಆತನ ಪ್ರೇಯಸಿ ತಂದೆ ಉದ್ಯಮಿ ಕಾಮಿನೇನಿ ಪ್ರಸಾದ್ ಎಂಬುವವರ ಕೈವಾಡ ಇದೆ. ಕೋಟ್ಯಂತರ ರೂ ಸುಪಾರಿ ನೀಡಿ ಕೊಲೆ ಮಾಡಿ ಮಾಡಿಸಿದ್ದಾರೆ ಎಂದು ಮೃತ ವಿಜಯ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ನಡುವೆ ಪೊಲೀಸರ ತನಿಖೆ ವೇಳೆ ಪ್ರಕರಣದ ಪ್ರಮುಖ ಆರೋಪಿ ಶ್ರೀರಾಮ್, ಈ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಆನೇಕಲ್ ವಕೀಲನ ಮೂಲಕ ಅವರ ಕಛೇರಿಯಲ್ಲಿಯೇ ಕಾಮಿನೇನಿ ಪ್ರಸಾದ್ ಪರಿಚಯವಾಗಿದ್ದು, ಕೊಲೆ ಬಗ್ಗೆ ಮಾತುಕತೆ ನಡೆಸಿದ್ದರ ಬಗ್ಗೆಯೂ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಮದುವೆಯಾಗಿದ್ದರೂ ಉದ್ಯಮಿ ಮಗಳ ಜೊತೆ ಲವ್ವಿಡವ್ವಿ
ಇನ್ನು ಕೆಲ ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ವಿಜಯ್, ಕೆಆರ್ಪುರಂನಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದ. 7 ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ವಿಜಯ್ ಮಾತ್ರ ಜಿಮ್ ಟ್ರೈನಿಂಗ್ಗೆ ಬರುತ್ತಿದ್ದ ಉದ್ಯಮಿ ಮಗಳ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ವಿಜಯ್ನನ್ನ ಬಿಟ್ಟು ಮಕ್ಕಳ ಜೊತೆ ತವರು ಮನೆ ಸೇರಿದ್ದಳು.
ವಿಜಯ್ಗೆ ವಾರ್ನ್ ಮಾಡಿದ್ದ ಉದ್ಯಮಿ
ಇತ್ತ ವಿಜಯ್ ಕೋಟಿ ಒಡತಿ ಪ್ರೇಯಸಿ ಜೊತೆ ಪರಾರಿಯಾಗಿದ್ದ. ಇತ್ತ ಮಗಳ ಲವ್ ವಿಚಾರ ತಿಳಿದ ಉದ್ಯಮಿ ಕಾಮಿನೇನಿ ಪ್ರಸಾದ್, ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಜೋಡಿಯನ್ನು ಪತ್ತೆಹಚ್ಚಿದ್ದರು. ಅಂದು ವಿಜಯ್ಗೆ ವಾರ್ನ್ ಮಾಡಿದ್ದ ಉದ್ಯಮಿ ಹುಡುಗರನ್ನ ಬಿಟ್ಟು ವಿಜಯ್ ಮೇಲೆ ಹಲ್ಲೆ ಕೂಡ ಮಾಡಿಸಿದ್ದಂತೆ. ಇಷ್ಟಾದ್ರೂ ಬುದ್ಧಿ ಕಲಿಯದ ವಿಜಯ್ ಹಾಗೂ ಉದ್ಯಮಿ ಪುತ್ರಿ ತಮ್ಮ ಪ್ರೀತಿ ಮುಂದುವರಿಸಿದ್ದರು ಎನ್ನಲಾಗಿದೆ.
10 ದಿನದ ಹಿಂದೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಈ ನಡುವೆ 10 ದಿನದ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳೇಶ್ವರಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಕಾಲ್ ಡಿಟೇಲ್ಸ್, ಸಿಡಿಆರ್, ಲೊಕೇಶನ್ ಟವರ್ ಡಂಪ್ ಸೇರಿದಂತೆ ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಆನೇಕಲ್ ಮೂಲದ ಶ್ರೀರಾಮ್, ಸುಮಿತ್, ವೆಂಕಟೇಶಯ್ಯ ಮತ್ತು ಬಾಬು ಎಂಬ ನಾಲ್ವರನ್ನು ಬಂಧಿಸಿದ್ದು, ಪೊಲೀಸರು ತಮ್ಮ ಸ್ಟೈಲ್ನಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ವಿಜಯ್ ಕೊಲೆ ಅಸಲಿ ಕಹಾನಿ ಬಿಚ್ಚಿಟ್ಟಿದ್ದಾರೆ.
ನ್ಯಾಯಕ್ಕಾಗಿ ಪೋಷಕರು ಒತ್ತಾಯ
ಹೈಪ್ರೊಫೈಲ್ ಕೊಲೆ ಕೇಸ್ ಸಂಬಂಧ ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ. ಕೇಂದ್ರ ವಲಯ ಐಜಿಪಿ ಗಿರೀಶ್ ಬನ್ನೇರುಘಟ್ಟ ಠಾಣೆಗೆ ಭೇಟಿ ನೀಡಿ ವಿಜಯ್ ಮರ್ಡರ್ ಕೇಸ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕೊಲೆ ಸಂಬಂಧ ನಾಲ್ವರು ಆರೋಪಿಗಳ ಬಂಧನ ಮಾತ್ರ ಆಗಿದೆ. ಇನ್ನೂ ಪ್ರಕರಣ ತನಿಖಾ ಹಂತದಲ್ಲಿದೆ ಎಂದು ತಿಳಿಸಿದ್ದು, ಆನೇಕಲ್ ವಕೀಲನ ಮೂಲಕ ಉದ್ಯಮಿ ಕಾಮಿನೇನಿ ಪ್ರಸಾದ್ ಆರೋಪಿಗಳಿಗೆ ಸುಪಾರಿ ಕೊಟ್ಟಿರುವ ಬಗ್ಗೆ ಮಾಹಿತಿ ನೀಡಲು ಕೇಂದ್ರ ವಲಯ ಐಜಿಪಿ ಗಿರೀಶ್ ನೀರಾಕರಿಸಿದ್ದಾರೆ. ಆದರೆ ಉದ್ಯಮಿ ಕಾಮಿನೇನಿ ಪ್ರಸಾದ್ಗೆ ಐಪಿಎಸ್ ಅಧಿಕಾರಿಗಳ ನಂಟು ಇದೆ. ಹಾಗಾಗಿ ಪೊಲೀಸರು ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ತನಿಖೆ ನಡೆಸಿ ಮೃತ ವಿಜಯ್ ಸಾವಿಗೆ ನ್ಯಾಯ ಕೊಡಿಸುವಂತೆ ವಿಜಯ್ ಪೋಷಕರು ಮತ್ತು ಆಪ್ತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲೊಂದು ವಿಚಿತ್ರ ಘಟನೆ: ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ ಕ್ಷಣ ಮಾತ್ರದಲ್ಲಿ ಸಾವು!
ಪ್ರೀತಿಸಿ ಮದುವೆ ಆಗಿ ಇಬ್ಬರು ಮಕ್ಕಳಿದ್ದರೂ ಉದ್ಯಮಿ ಮಗಳ ಜೊತೆ ಲವ್ವಿಡವ್ವಿ ಅಂತ ವಿಜಯ್ ಹೆಣವಾಗಿದ್ದಾನೆ. ಕೊಲೆ ಆರೋಪ ಹೊತ್ತಿರುವ ಕಾಮಿನೇನಿ ಮತ್ತು ವಕೀಲ ಸೇರಿದಂತೆ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.