ಅಕ್ಬರ್ ಮತ್ತು ಅವನ ಪತ್ನಿಯ ವೀಡಿಯೋ ಕಾಲ್ನ ಸ್ಕ್ರೀನ್ ಶಾಟ್
ಬೆಂಗಳೂರು, ಮೇ 01: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana agrahara) ಕೈದಿಗಳ ಐಷಾರಾಮಿ ಜೀವನ, ಕಳ್ಳಾಟಗಳ ಕುರಿತು ಸುದ್ದಿ ಹೊರಬರುವುದು ಹೊಸತೇನಲ್ಲ. ಅದೆಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದರೂ ಕೈದಿಗಳು ಮಾತ್ರ ತಮ್ಮ ಮನಸೋಇಚ್ಛೆ ಜೀವನ ನಡೆಸುತ್ತಿದ್ದಾರೆ. ಕೆಲವರು ಗ್ರ್ಯಾಂಡ್ ಆಗಿ ಬರ್ತ್ಡೇ ಆಚರಿಸಿಕೊಂಡರೆ ಇನ್ನೂ ಕೆಲವರು ಗಾಂಜಾ, ತಂಬಾಕು, ಸಿಮ್ ಕಾರ್ಡ್ ಸಾಗಾಟದಂತ ಅಕ್ರಮ ಚಟುವಟಿಗಳಲ್ಲಿ ತೊಡಗಿದ್ದೂ ಉಂಟು. ಅದೇ ರೀತಿ ಕೇಂದ್ರ ಕಾರಾಗ್ರಹದಲ್ಲಿ ಮತ್ತೊಮ್ಮೆ ವಿಚಾರಣಾಧೀನ ಕೈದಿಯೊಬ್ಬ ಸೆಲ್ನಲ್ಲಿ ಕುಳಿತೇ ತನ್ನ ಪತ್ನಿಗೆ ವೀಡಿಯೋ ಕಾಲ್ ಮಾಡಿರುವ ಘಟನೆ ಬಹಿರಂಗವಾಗಿದೆ. ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಬಯಲಾಯ್ತು ರಹಸ್ಯ
ವಿಚಾರಣಾಧೀನ ಖೈದಿಯಾಗಿದ್ದ ಅಕ್ಬರ್, ಜೈಲಿನ ಅಧಿಕಾರಿಗಳ ಕಣ್ಣು ತಪ್ಪಿಸಿ ಮೊಬೈಲ್ ಬಳಸುತ್ತಿದ್ದ ಎನ್ನಲಾಗಿದೆ. ಈತ ಜೈಲಿನ ಒಳಭಾಗದಿಂದಲೇ ಪತ್ನಿಗೆ ವಿಡಿಯೋ ಕಾಲ್ ಮಾಡಿ ಮಾತುಕತೆ ನಡೆಸಿದ್ದ. ಆಕೆಯ ಪತ್ನಿ ಈ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿ, ಏಪ್ರಿಲ್ 9 ರಂದು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಳು. ಏಪ್ರಿಲ್ 28 ರಂದು ಅಕ್ಬರ್ ಜೈಲಿನಿಂದ ಬಿಡುಗಡೆಯಾಗಿದ್ದು, ಆತ ರಿಲೀಸ್ ಆದ ವಿಡಿಯೋವನ್ನೂ ಪತ್ನಿ ಹಂಚಿಕೊಂಡಿದ್ದಳು. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಆಕೆ ಇನ್ಸ್ಟಾದಿಂದ ವಿಡಿಯೋ ಡಿಲೀಟ್ ಮಾಡಿದ್ದಾಳೆ.
ವೈರಲ್ ವೀಡಿಯೋ ನೋಡಿ!
ಈ ಹಿಂದೆಯೂ ನಡೆದಿದ್ದವು ಸರಣಿ ಅಕ್ರಮಗಳು
ಪರಪ್ಪನ ಅಗ್ರಹಾರದಲ್ಲಿ ಇಂತಹ ಅಕ್ರಮಗಳು ಇದೇ ಮೊದಲೇನಲ್ಲ. ಕಳೆದ ವರ್ಷಗಳಿಂದ ಜೈಲು ಐಷಾರಾಮಿ ಸೌಲಭ್ಯಗಳ ತಾಣವಾಗಿ ಮಾರ್ಪಟ್ಟಿರುವ ಬಗ್ಗೆ ಸರಣಿ ಆರೋಪಗಳು ಕೇಳಿಬಂದಿದ್ದವು. ಕಳೆದ ನವೆಂಬರ್ನಲ್ಲಿ ಜೈಲಿನ ಒಳಗಿನ ಹೈಫೈ ಲೈಫ್ ವಿಡಿಯೋಗಳು ಹೊರಬಂದಾಗ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಪರಿಸ್ಥಿತಿ ಸುಧಾರಿಸಲು ಸರ್ಕಾರ ಅಂಶುಕುಮಾರ್ ಅವರನ್ನು ಮುಖ್ಯ ಅಧೀಕ್ಷಕರಾಗಿ ನೇಮಿಸಿತ್ತು.
ಇದನ್ನೂ ಓದಿ ತನ್ನ ಖಾಸಗಿ ಅಂಗದಲ್ಲಿ ತಂಬಾಕು, ಸಿಮ್ ಕಾರ್ಡ್ ತಂದು ಜೈಲಿನಲ್ಲಿ ಸ್ಮಗ್ಲಿಂಗ್! ಯುವತಿ ಅಂದರ್
ಈ ಹಿಂದೆ ಜೈಲಿನ ಟವರ್–1ರ 6ನೇ ಬ್ಯಾರಕ್ ಮೇಲೆ ದಾಳಿ ನಡೆಸಿದಾಗ 8 ಮೊಬೈಲ್ ಫೋನ್ಗಳು, ಸಿಮ್ ಕಾರ್ಡ್ ಮತ್ತು ಚಾರ್ಜರ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಮೊಬೈಲ್ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದರು. ಜನವರಿ 23ರಂದು ಕೈದಿ ಸೋಮಶೇಖರ್ನನ್ನು ಭೇಟಿಯಾಗಲು ಬಂದಿದ್ದ ಮಹಿಳೆಯೊಬ್ಬಳು 22,000 ರೂ. ನಗದು ನೀಡಲು ಯತ್ನಿಸಿ ಸಿಕ್ಕಿಬಿದ್ದಿದ್ದಳು. ಹಾಗೆಯೇ ಮಾರ್ಚ್ 26ರಂದು ರಿತಿಕಾ ರೈ ಎಂಬಾಕೆ ಕೈದಿ ಫರ್ಹಾನ್ ಖಾನ್ನನ್ನು ಭೇಟಿಯಾಗಲು ಬಂದಾಗ, ತನ್ನ ಖಾಸಗಿ ಭಾಗದಲ್ಲಿ ತಂಬಾಕು ಮತ್ತು 5G ಸಿಮ್ ಕಾರ್ಡ್ ಅಡಗಿಸಿಟ್ಟುಕೊಂಡು ಬಂದಿದ್ದು ತಪಾಸಣೆ ವೇಳೆ ಪತ್ತೆಯಾಗಿತ್ತು. ಈ ಎಲ್ಲಾ ಘಟನೆಗಳ ಬಳಿಕ ಮತ್ತೊಮ್ಮೆ ಇಂತಹದ್ದೇ ಕೇಸ್ ಹೊರಬಂದಿದ್ದು, ಜೈಲಿನ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡಿಸಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ