ಭಾರತದ ಪರ 19 ವರ್ಷದೊಳಗಿನವರ ಕ್ರಿಕೆಟ್ನಲ್ಲಿ ಆಡಿದ್ದ ಪಂಜಾಬ್ ಮೂಲದ ಅಮನ್ಪ್ರೀತ್ ಗಿಲ್ (Amanpreet Gill) ಕೇವಲ 36 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಅಸುನೀಗಿದ್ದಾರೆ. ಚಂಡೀಗಢದಲ್ಲಿ ಜನಿಸಿದ ಅಮನ್ಪ್ರೀತ್ ಸಿಂಗ್ ಗಿಲ್ ಪಂಜಾಬ್ ಕ್ರಿಕೆಟ್ ತಂಡಕ್ಕಾಗಿ ದೇಶೀಯ ಕ್ರಿಕೆಟ್ ಆಡಿದ್ದರು. 2007 ರಲ್ಲಿ ಶ್ರೀಲಂಕಾದಲ್ಲಿ ನಡೆದ 19 ವರ್ಷದೊಳಗಿನವರ ತ್ರಿಕೋನ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆ ಸರಣಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಮನೀಶ್ ಪಾಂಡೆ ಕೂಡ ಆಡಿದ್ದರು. ಇದೀಗ ಗೆಳೆಯ ಅಕಾಲಿಕ ಮರಣದಿಂದ ಆಘಾತಕ್ಕೊಳಗಾಗಿರುವ ವಿರಾಟ್ ಕೊಹ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಮನ್ಪ್ರೀತ್ ಅವರ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದೇನೆ ಎಂದಿರುವ ವಿರಾಟ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಸ್ನೇಹಿತನ ಸಾವಿನಿಂದ ಆಘಾತಕ್ಕೊಳಗಾದ ಕೊಹ್ಲಿ
ಅಮನ್ಪ್ರೀತ್ ಗಿಲ್ ಅವರ ನಿಧನದ ಸುದ್ದಿಗೆ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿದ್ದು, “ಅಮನ್ಪ್ರೀತ್ ಗಿಲ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರ ಕುಟುಂಬ ಮತ್ತು ಪ್ರೀತಿಪಾತ್ರರು ಈ ನಷ್ಟವನ್ನು ಭರಿಸುವ ಶಕ್ತಿಯನ್ನು ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ.” ಎಂದು ಬರೆದಿದ್ದಾರೆ.
Shocked and saddened to hear about Amanpreet Gill’s passing. Sending prayers and strength to his family and loved ones. Rest in peace. Om Shanti 🙏
— Virat Kohli (@imVkohli) May 7, 2026
ಅಮನ್ಪ್ರೀತ್ ಗಿಲ್ ಸಾವಿಗೆ ಕಾರಣವೇನು?
ಅಮನ್ಪ್ರೀತ್ ಗಿಲ್ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅಮನ್ಪ್ರೀತ್ ರೋಗದ ವಿರುದ್ಧದ ಹೋರಾಟದಲ್ಲಿ ಸೋತು ಇಹಲೋಕ ತ್ಯಜಿಸಿದ್ದಾರೆ. ಮೇಲೆ ಹೇಳಿದಂತೆ ಗಿಲ್, ಶ್ರೀಲಂಕಾದಲ್ಲಿ ನಡೆದ ಅಂಡರ್-19 ತ್ರಿಕೋನ ಸರಣಿಯಲ್ಲಿ ಭಾರತ ಪರ ಆಡಿದ್ದರು. ಈ ಸರಣಿಯಲ್ಲಿ ಫೈನಲ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಗಿಲ್ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಮನ್ಪ್ರೀತ್ ಈ ಸರಣಿಯಲ್ಲಿ ಆಡಿದ್ದ ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ಗಳನ್ನು ಕಬಳಿಸಿದರು.
ಅಮನ್ಪ್ರೀತ್ ವೃತ್ತಿಜೀವನ
ಪಂಜಾಬ್ ಪರ ರಣಜಿ ಟ್ರೋಫಿಯಲ್ಲಿಯೂ ಆಡಿದ ಅಮನ್ಪ್ರೀತ್ ಆರು ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಕಬಳಿಸಿದರು. 2008 ರಲ್ಲಿ ಮುಂಬೈ ವಿರುದ್ಧ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದ ಗಿಲ್ ಅದರ ನಂತರ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಮುಂಬೈ ವಿರುದ್ಧ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದ ಗಿಲ್, ಆ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದರು. ಮಾತ್ರವಲ್ಲದೆ ತನ್ನ ಮೊದಲ ಪಂದ್ಯದಲ್ಲಿಯೇ ನಾಲ್ಕು ವಿಕೆಟ್ಗಳನ್ನು ಕಬಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ