ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಯುವ ವೇಗಿ ಹರ್ಷಿತ್ ರಾಣಾ (Harshit Rana) ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಗಾಯದ ಸಮಸ್ಯೆಯ ಕಾರಣ ಕಳೆದ ಕೆಲ ತಿಂಗಳಿಂದ ಹೊರಗುಳಿದಿದ್ದ ಹರ್ಷಿತ್ ಇದೀಗ ಚೆನ್ನೈನಲ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.
- ಹರ್ಷಿತ್ ರಾಣಾ ಟಿ20 ವಿಶ್ವಕಪ್ ವೇಳೆ ಗಾಯಗೊಂಡಿದ್ದರು.
- ಮೊಣಕಾಲಿನ ಗಾಯದ ಕಾರಣ ಅವರು ಟಿ20 ವಿಶ್ವಕಪ್ ಟೂರ್ನಿಯನ್ನು ಅರ್ಧದಲ್ಲೇ ತೊರೆದಿದ್ದರು.
- ಈ ಗಾಯದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಕಣಕ್ಕಿಳಿದಿರಲಿಲ್ಲ.
ಅತ್ತ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಹರ್ಷಿತ್ ರಾಣಾ ಅವರನ್ನು ಈ ಮೊದಲು ಅಫ್ಘಾನಿಸ್ತಾನ್ ವಿರುದ್ಧದ ಸರಣಿಗೆ ಆಯ್ಕೆ ಮಾಡಿರಲಿಲ್ಲ. ಇದಾಗ್ಯೂ ಅವರು ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.
ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ಕಾರಣ ಅವರನ್ನು ಅಫ್ಘಾನ್ ವಿರುದ್ಧದ ಕೊನೆಯ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅದರಂತೆ ಇಂದಿನ ಪಂದ್ಯದಲ್ಲಿ ಯುವ ವೇಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.
ಟೀಮ್ ಇಂಡಿಯಾದಿಂದ ಯಾರು ಔಟ್?
ಹರ್ಷಿತ್ ರಾಣಾ ಎಂಟ್ರಿಯಿಂದಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಬದಲಾವಣೆಯೊಂದಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚು.
ಏಕೆಂದರೆ ಅಪ್ಘಾನಿಸ್ತಾನ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡಾಸ್ಚೇಟ್ ಅವರು ಅರ್ಷದೀಪ್ ಸಿಂಗ್ ಅವರಿಗೆ ವಿಶ್ರಾಂತಿ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ.
ಇತ್ತ ಅರ್ಷದೀಪ್ ಸಿಂಗ್ ಹೊರಗುಳಿದರೆ ಅವರ ಸ್ಥಾನದಲ್ಲಿ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಬಹುದು. ಹೀಗಾಗಿ ರಾಣಾ ಎಂಟ್ರಿಯೊಂದಿಗೆ ಅರ್ಷದೀಪ್ ಸಿಂಗ್ ಆಡುವ ಬಳಗದಿಂದ ಹೊರಬೀಳುವ ಸಾಧ್ಯತೆ ಹೆಚ್ಚು.
ಭಾರತ ಏಕದಿನ ತಂಡ: ಶುಭ್ಮನ್ ಗಿಲ್ (ನಾಯಕ) , ಕೆಎಲ್ ರಾಹುಲ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ , ಶ್ರೇಯಸ್ ಅಯ್ಯರ್ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಹರ್ಷ್ ದುಬೆ , ಕುಲ್ದೀಪ್ ಯಾದವ್ , ಅರ್ಷದೀಪ್ ಸಿಂಗ್ , ಗುರ್ನೂರ್ ಬ್ರಾರ್ , ಪ್ರಸಿದ್ಧ್ ಕೃಷ್ಣ , ಪ್ರಿನ್ಸ್ ಯಾದವ್, ಹರ್ಷಿತ್ ರಾಣಾ.
ಕ್ಲೀನ್ ಸ್ವೀಪ್ ಪ್ಲ್ಯಾನ್:
ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸಿದ್ದ ಭಾರತ ತಂಡವು ಲಕ್ನೋನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ 170 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು.
ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವ ದಾಖಲೆ ಮುರಿದ ಲಿಯೋನೆಲ್ ಮೆಸ್ಸಿ
ಇದೀಗ ಮೂರನೇ ಪಂದ್ಯದಲ್ಲೂ ಜಯ ಸಾಧಿಸುವ ಮೂಲಕ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ. ಅದರಂತೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲೂ ಭಾರತ ತಂಡದ ಅಮೋಘ ಗೆಲುವನ್ನು ಎದುರು ನೋಡಬಹುದು.
Published On – 7:28 am, Sat, 20 June 26