Headlines

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..! – Kannada News | Virat Kohli Rules Team India’s 2027 World Cup Blueprint

ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕ ಶುಭ್‌ಮನ್ ಗಿಲ್, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ಬಗೆಗಿನ ಎಲ್ಲಾ ವದಂತಿಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿಲ್, ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ ಯೋಜನೆಯಲ್ಲಿ ಕೊಹ್ಲಿ ಮತ್ತು ರೋಹಿತ್ ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕೊಹ್ಲಿಯೇ ಕಿಂಗ್:

ಈ ಸರಣಿಯ ಆರಂಭಕ್ಕೆ ಮುನ್ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ತರಬೇತಿ ಅವಧಿಯಲ್ಲಿ ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಸುದೀರ್ಘ ಚರ್ಚೆಯಲ್ಲಿ ತೊಡಗಿದ್ದರು. ಈ ಬಗ್ಗೆ ಮಾತನಾಡಿದ ಗಿಲ್, “ಕಳೆದ ಎರಡು ದಿನಗಳ ಹಿಂದೆಯಷ್ಟೇ ನಾನು ಮತ್ತು ವಿರಾಟ್ ಭಾಯ್ 2027ರ ವಿಶ್ವಕಪ್ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದೇವೆ. ತಂಡದ ಸಂಯೋಜನೆಗಳು ಹೇಗೆ ಇರಬೇಕು, ಸದ್ಯ ತಂಡದಲ್ಲಿಲ್ಲದಿದ್ದರೂ ಭವಿಷ್ಯದಲ್ಲಿ ಯಾರು ಪ್ರಮುಖ ಪಾತ್ರ ವಹಿಸಬಹುದು ಮತ್ತು ಪ್ರತಿ ಆಟಗಾರನಿಗೆ ಯಾವ ಸ್ಥಾನ ಸೂಕ್ತ ಎಂಬುದರ ಕುರಿತು ನಾವು ಗಂಭೀರವಾಗಿ ಚರ್ಚಿಸಿದ್ದೇವೆ” ಎಂದು ಬಹಿರಂಗಪಡಿಸಿದ್ದಾರೆ.

ಶುಭ್‌ಮನ್ ಗಿಲ್ ಅವರ ಈ ಹೇಳಿಕೆ ಮತ್ತು ನಡೆ ಟೀಮ್ ಇಂಡಿಯಾದಲ್ಲಿ ಇಂದಿಗೂ ವಿರಾಟ್ ಕೊಹ್ಲಿಯೇ ‘ಕಿಂಗ್’ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.

ಏಕದಿನ ವಿಶ್ವಕಪ್​ಗಾಗಿ ಭಾರತ ತಂಡ ಸಜ್ಜಾಗುತ್ತಿದ್ದು, ಶುಭ್‌ಮನ್ ಗಿಲ್ ಭವಿಷ್ಯದ ನಾಯಕನಾಗಿ ರೂಪುಗೊಳ್ಳುತ್ತಿದ್ದಾರೆ. ಇಂತಹ ಮಹತ್ವದ ಪರಿವರ್ತನೆಯ ಹಂತದಲ್ಲಿ, ಗಿಲ್ ತಮಗಿಂತ ಅನುಭವದಲ್ಲಿ ಹಿರಿಯರಾದ ವಿರಾಟ್ ಕೊಹ್ಲಿ ಅವರ ಬಳಿ ಹೋಗಿ ಭವಿಷ್ಯದ ರೋಡ್‌ಮ್ಯಾಪ್ ಚರ್ಚಿಸಿರುವುದು ಕೊಹ್ಲಿಯ ಸ್ಥಾನ ಮತ್ತು ಗೌರವ ಎಷ್ಟು ದೊಡ್ಡದು ಎಂಬುದನ್ನು ತೋರಿಸುತ್ತದೆ.

ಏಕದಿನ ವಿಶ್ವಕಪ್​ಗೆ ಮಾಸ್ಟರ್ ಪ್ಲ್ಯಾನ್:

ಏಕದಿನ ತಂಡದಲ್ಲಿ ಯಾವ ಆಟಗಾರ ಯಾವ ಕ್ರಮಾಂಕದಲ್ಲಿ ಆಡಬೇಕು, ಸದ್ಯಕ್ಕೆ ತಂಡದಲ್ಲಿಲ್ಲದ ಯುವ ಆಟಗಾರರನ್ನು ಮುಂದಿನ ದಿನಗಳಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬ ‘ದೊಡ್ಡ ಮಟ್ಟದ ಕಾರ್ಯತಂತ್ರಗಳನ್ನು’ ನಾಯಕನು ಕೊಹ್ಲಿ ಜೊತೆಗೂಡಿ ನಿರ್ಧರಿಸುತ್ತಿದ್ದಾರೆ. ಇದು ಕೊಹ್ಲಿ ಕೇವಲ ಒಬ್ಬ ಬ್ಯಾಟರ್ ಆಗಿ ಮಾತ್ರವಲ್ಲದೆ, ಇಡೀ ತಂಡದ ಥಿಂಕ್ ಟ್ಯಾಂಕ್ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ.

ಒಟ್ಟಾರೆಯಾಗಿ ಹೇಳುವುದಾದರೆ, ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ತಂಡದಲ್ಲಿ ತಮಗೆ ಬೇಕಾದ ಬದಲಾವಣೆಗಳನ್ನು ತರಲು ಮತ್ತು ವಿರಾಟ್ ಕೊಹ್ಲಿ ಅವರ ಪ್ರಭಾವವನ್ನು ಕೊಂಚ ಸೈಡ್‌ಲೈನ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಚರ್ಚೆಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿರುವುದು ಸುಳ್ಳಲ್ಲ. ಆದರೆ, ಭವಿಷ್ಯದ ನಾಯಕ ಶುಭ್‌ಮನ್ ಗಿಲ್ ಮಾತ್ರ ಕೊಹ್ಲಿಯ ಆಟ ಹಾಗೂ ಅನುಭವದ ಅನಿವಾರ್ಯತೆಯನ್ನು ಚೆನ್ನಾಗಿ ಅರಿತಿದ್ದಾರೆ.

ಇದನ್ನೂ ಓದಿ: ಐಪಿಎಲ್​ನಲ್ಲೂ ಕಾರ್ಯನಿರ್ವಹಿಸಿ, ನಮ್ಮೊಂದಿಗೂ ಕೈ ಜೋಡಿಸಿ: ECB ಬಿಗ್ ಆಫರ್

ಗಂಭೀರ್ ಅವರ ಹೊಸ ಆಲೋಚನೆಗಳ ನಡುವೆಯೂ, ಶುಭ್​ಮನ್ ಗಿಲ್ ನೇರವಾಗಿ ‘ಕಿಂಗ್’ ಕೊಹ್ಲಿ ಬಳಿಯೇ ತೆರಳಿ 2027ರ ಭವಿಷ್ಯದ ಬ್ಲೂಪ್ರಿಂಟ್ ಸಿದ್ಧಪಡಿಸುತ್ತಿರುವುದು ತಂಡದಲ್ಲಿ ಕೊಹ್ಲಿ ಸ್ಥಾನ ಅಲುಗಾಡದಂತೆ ಮಾಡಿದೆ. ಕೋಚ್ ಗಂಭೀರ್ ಅವರ ರಣತಂತ್ರ ಏನೇ ಇರಲಿ, ಮೈದಾನದ ಒಳಗೆ ಮತ್ತು ಕಾರ್ಯತಂತ್ರದ ರೂಪುರೇಷೆಯಲ್ಲಿ ವಿರಾಟ್ ಕೊಹ್ಲಿ ಇಂದಿಗೂ ಟೀಮ್ ಇಂಡಿಯಾದ ಅಪ್ರತಿಮ ಮಾರ್ಗದರ್ಶಕ ಹಾಗೂ ‘ಅಧಿಪತಿ’ ಎಂಬುದನ್ನು ಗಿಲ್ ಅವರ ಈ ಮಾಸ್ಟರ್ ಪ್ಲಾನ್ ಸ್ಪಷ್ಟಪಡಿಸಿದೆ.

Source link

Leave a Reply

Your email address will not be published. Required fields are marked *