Headlines

ಠಾಕ್ರೆಗೆ ಶಾಕ್; ಶಿವಸೇನೆಯ 6 ಬಂಡಾಯ ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆ – Kannada News | Operation Tiger successful 6 Rebel UBT MPs join Shinde led Shiv Sena in Maharashtra

ಮುಂಬೈ, ಜೂನ್ 22: ಮಹಾರಾಷ್ಟ್ರ ರಾಜಕೀಯ ಕೆಲವು ದಿನಗಳಿಂದ ದೇಶಾದ್ಯಂತ ಭಾರೀ ಸುದ್ದಿಯಲ್ಲಿತ್ತು. ಈಗಾಗಲೇ ಇಬ್ಭಾಗವಾಗಿರುವ ಶಿವಸೇನೆಯಲ್ಲಿ ಮತ್ತೊಮ್ಮೆ ಬಿರುಕು ಉಂಟಾಗಿತ್ತು. ಉದ್ಧವ್ ಠಾಕ್ರೆಯಿಂದ (Uddhav Thackeray) ಅಸಮಾಧಾನಗೊಂಡು ಠಾಕ್ರೆ ಬಣದಿಂದ ಹೊರಬಂದಿದ್ದ ಶಿವಸೇನೆಯ (Shiv Sena Crisis) 6 ಸಂಸದರು ಹೊಸ ಪಕ್ಷ ಕಟ್ಟುತ್ತಾರಾ? ಶಿಂಧೆ ಬಣ ಸೇರುತ್ತಾರಾ? ಮರಳಿ ಪಕ್ಷಕ್ಕೆ ಸೇರಿಕೊಳ್ಳುತ್ತಾರಾ? ಎಂಬ ಕುತೂಹಲ ಮನೆಮಾಡಿತ್ತು. ಆ ಕುತೂಹಲಕ್ಕೆ ತೆರೆಬಿದ್ದಿದೆ. ಅಧಿಕೃತವಾಗಿ ಇಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಬಣದ ಆರೂ ಬಂಡಾಯ ಲೋಕಸಭಾ ಸಂಸದರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಉದ್ಧವ್ ಠಾಕ್ರೆ ಅವರ ಬಣವು ಲೋಕಸಭೆಯಲ್ಲಿ ತನ್ನ ಬಲವನ್ನು ಕಳೆದುಕೊಂಡಂತಾಗಿದೆ.

ಇಂದು ಮುಂಬೈಗೆ ಆಗಮಿಸಿದ್ದ 6 ಸಂಸದರು ಮೊದಲು ಮಲಬಾರ್ ಹಿಲ್ಸ್‌ನಲ್ಲಿರುವ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧಿಕೃತ ನಿವಾಸ ‘ನಂದನವನ’ ಬಂಗಲೆಯಲ್ಲಿ ಮಹತ್ವದ ಸಭೆ ನಡೆಸಿದರು. ಆ ಬಳಿಕ ವೈ.ಬಿ. ಚವಾಣ್ ಕೇಂದ್ರದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಶಿಂಧೆ ನೇತೃತ್ವದ ಶಿವಸೇನೆಯನ್ನು ಅಧಿಕೃತವಾಗಿ ಸೇರುತ್ತಿರುವುದಾಗಿ ಘೋಷಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಹೈಡ್ರಾಮಾ; ಶಿಂಧೆ ಬಣ ಸೇರಲು ಸಜ್ಜಾದ 6 ಬಂಡಾಯ ಸಂಸದರು

ಪಕ್ಷಾಂತರ ಮಾಡಿದ 6 ಸಂಸದರು:

  • ಸಂಜಯ್ ದಿನಾ ಪಾಟೀಲ್ (ಮುಂಬೈ)
  • ಸಂಜಯ್ ಜಾಧವ್ (ಪರಭಣಿ)
  • ಸಂಜಯ್ ದೇಶ್‌ಮುಖ್ (ಯವತ್ಮಾಲ್-ವಾಶಿಮ್)
  • ಓಂ ರಾಜೇ ನಿಂಬಾಳ್ಕರ್ (ಧಾರಾಶಿವ್)
  • ಭೌಸಾಹೇಬ್ ವಾಕಚೌರೆ (ಶಿರಡಿ)
  • ನಾಗೇಶ್ ಪಾಟೀಲ್ ಅಷ್ಟೀಕರ್ (ಹಿಂಗೋಲಿ)

ಆಪರೇಷನ್ ಟೈಗರ್ ಸಕ್ಸಸ್‌ಫುಲ್:

ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವೇ ಈ ರಾಜಕೀಯ ಕಾರ್ಯಾಚರಣೆ ನಡೆಸಲಾಗಿದೆ. ವಿಧಾನಸಭೆ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, ತಾವೇ ರೂಪಿಸಿದ್ದ “ಆಪರೇಷನ್ ಟೈಗರ್” ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೆಮ್ಮೆಯಿಂದ ಘೋಷಿಸಿದ್ದಾರೆ.

“ಶಿವಸೇನೆ ಒಂದು ಕುಟುಂಬ. ಅದು ನಿಜಕ್ಕೂ ಒಂದು ಕುಟುಂಬ. ಕಟ್ಟಾ ಶಿವಸೈನಿಕ್ ಸಂಸದರು ನಿಜವಾದ ಶಿವಸೇನಾ ಕುಟುಂಬಕ್ಕೆ, ಬಾಳಾಸಾಹೇಬರ ಸಿದ್ಧಾಂತದ ಶಿವಸೇನಾ ಕುಟುಂಬಕ್ಕೆ ಸೇರಿದ್ದಾರೆ. ನಾನು ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ” ಎಂದು ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ: ಈಗ ಉಳಿದಿರುವುದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಾತ್ರ; ಉದ್ಧವ್ ಠಾಕ್ರೆಗೆ ಅಮಿತ್ ಶಾ ಟಾಂಗ್

ಲೋಕಸಭೆಯಲ್ಲಿ ಉದ್ಧವ್ ಠಾಕ್ರೆ ಬಣವು ಒಟ್ಟು 9 ಸಂಸದರನ್ನು ಹೊಂದಿತ್ತು. ಇದೀಗ 9ರ ಪೈಕಿ 6 ಸಂಸದರು ಒಟ್ಟಿಗೆ ಬಂಡಾಯವೆದ್ದು ಶಿಂಧೆ ಬಣ ಸೇರಿರುವುದರಿಂದ, ಅವರ ಬಳಿ ಮೂರನೇ ಎರಡರಷ್ಟು (2/3) ಬಹುಮತವಿದೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಈ ಸಂಸದರನ್ನು ಅನರ್ಹಗೊಳಿಸಲು ಉದ್ಧವ್ ಬಣಕ್ಕೆ ಸಾಧ್ಯವಾಗುವುದಿಲ್ಲ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ. ಇದು ಉದ್ಧವ್ ಠಾಕ್ರೆ ಅವರ ಕಾನೂನು ಹೋರಾಟಕ್ಕೂ ದೊಡ್ಡ ಹಿನ್ನಡೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *