ನಟ ಡಾಲಿ ಧನಂಜಯ್ (Daali Dhananjay) ಇತ್ತೀಚೆಗಷ್ಟೆ ತಂದೆಯಾಗಿದ್ದಾರೆ. ಅವರ ಪತ್ನಿ ವೈದ್ಯೆ ಧನ್ಯತಾ, ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾಗಿರುವ ಖುಷಿಯಲ್ಲಿರುವ ನಟ ಡಾಲಿ ಧನಂಜಯ್, ಇದೀಗ ತಮ್ಮ ನವಜಾತ ಶಿಶುವಿಗಾಗಿ ತೊಟ್ಟಿಲು ಖರೀದಿಸುತ್ತಿದ್ದಾರೆ. ಅದೂ ಅಂತಿಥ ಸಾಮಾನ್ಯ ತೊಟ್ಟಿಲಲ್ಲ, ಬದಲಿಗೆ ವಿಶ್ವಪ್ರಸಿದ್ಧವಾಗಿರುವ ಕಲಘಟಗಿಯ ತೊಟ್ಟಿಲು. ಕಲಘಟಗಿ ಪಟ್ಟಣದ ತೊಟ್ಟಿಲಿಗೆ ಸುದೀರ್ಘ ಇತಿಹಾಸವಿದೆ. ಅದಕ್ಕೆ ಅದರದ್ದೇ ಆದ ಪರಂಪರೆ, ಪ್ರಾಮುಖ್ಯತೆ ಇದೆ. ಇಂಥಹಾ ಅಪರೂಪದ ತೊಟ್ಟಿಲನ್ನು ಡಾಲಿ ಖರೀದಿಸುತ್ತಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ, ತೊಟ್ಟಿಲು ಪಟ್ಟಣ ಅಂತಲೇ ಸುಪ್ರಸಿದ್ದವಾಗಿದೆ. ಕಳೆದ ನಾಲ್ಕು ತೆಲೆಮಾರುಗಳಿಂದ ಪಟ್ಟಣದ ಸಾವುಕಾರ ಕುಟುಂಬ ವಿಶಿಷ್ಟ ತೊಟ್ಟಿಲುಗಳನ್ನು ಮಾಡುತ್ತಾ ಬಂದಿದೆ. ಇತ್ತೀಚೆಗೆ ಮರದ ತೊಟ್ಟಿಲುಗಳ ಖರೀದಿಸುವವರ ಸಂಖ್ಯೆ ದಯನೀಯವಾಗಿ ಕುಸಿದಿದೆ, ಆದರೂ ಕಲಘಟಗಿ ತೊಟ್ಟಿಲುಗಳು ಮಾತ್ರ ಬೇಡಿಕೆ ಕಳೆದುಕೊಂಡಿಲ್ಲ. ಸಾವುಕಾರ ಕುಟುಂಬದ ಶ್ರೀಧರ್ ಸಾವುಕಾರು ಇದೀಗ ಕಲಘಟಗಿ ಪಟ್ಟಣದ ಚಿತ್ರಗಾರ ಓಣಿಯಲ್ಲಿರುವ ತಮ್ಮ ಮನೆಯಲ್ಲಿ ತೊಟ್ಟಿಲು ತಯಾರು ಮಾಡುವ ತಮ್ಮ ಹಿಂದಿನ ಪೀಳಿಗೆಯ ಕೆಲಸವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಇವರೇ ಈಗ ಡಾಲಿ ಧನಂಜಯ್ ಅವರಿಗೂ ತೊಟ್ಟಿಲು ನಿರ್ಮಿಸಿಕೊಡಲಿದ್ದಾರೆ.
ಕಲಘಟಗಿ ತೊಟ್ಟಿಲನ್ನು ಮೆಚ್ಚಿಕೊಂಡಿದ್ದ ವರನಟ ಡಾ ರಾಜಕುಮಾರ್, ತಮ್ಮ ಮೊಮ್ಮಕ್ಕಳಿಗೆ ಕಲಘಟಗಿ ತೊಟ್ಟಿಲನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದರಂತೆ. ಅಂಬರೀಶ್ ಅವರು ನಟ ಯಶ್ ಮಕ್ಕಳಿಗೆ ಕಲಘಟಗಿ ತೊಟ್ಟಿಲನ್ನು ಉಡುಗರೆಯಾಗಿ ನೀಡಿದ್ದರು. ನಂತರ ಯಶ್ ಅವರು ಅಂಬರೀಶ್ ಪುತ್ರ ಅಭಿಷೇಕ ಪುತ್ರನಿಗೆ ತೊಟ್ಟಿಲನ್ನು ಉಡುಗರೆಯಾಗಿ ನೀಡಿದ್ದರು. ದೊಡ್ಡಣ್ಣ ಸೇರಿದಂತೆ ಚಿತ್ರರಂಗದ ಅನೇಕರು ಕಲಘಟಗಿ ತೊಟ್ಟಿಲನ್ನು ಮೆಚ್ಚಿಕೊಂಡು, ತಮ್ಮ ಮಕ್ಕಳು, ಮರಿಮೊಮ್ಮಕ್ಕಳಿಗಾಗಿ ಕಲಘಟಗಿ ತೊಟ್ಟಿಲನ್ನು ತಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ?
ಚಿತ್ರರಂಗದವರು ಮಾತ್ರವಲ್ಲಾ, ರಾಮಕೃಷ್ಣ ಹೆಗಡೆ, ಎಮ್ ವೈ ಘೋರ್ಪಡೆ ಸೇರಿದಂತೆ ಅನೇಕ ರಾಜಕಾಣಿಗಳು, ಉದ್ಯಮಿಗಳು, ಅಧಿಕಾರಿಗಳು, ತಮ್ಮ ಕುಟುಂಬದಲ್ಲಿ ಮಗು ಜನನವಾದಾಗ, ಇದೇ ಕಲಘಟಗಿ ತೊಟ್ಟಿಲನ್ನು ತಗೆದುಕೊಂಡು ಹೋಗಿ, ತೊಟ್ಟಿಲಲ್ಲಿ ಮಕ್ಕಳನ್ನು ಹಾಕಿ ಲಾಲಿ ಹಾಡಿ ಸಂಭ್ರಮಿಸಿದ್ದಾರಂತೆ. ಇದೀಗ ನಟ ಡಾಲಿ ಧನಂಜಯ್, ತಮಗೆ ಮಗುವಾಗುತ್ತಿದ್ದಂತೆ, ಪರಿಚಿತ ನಾರಾಯಣ್ ಕಲಾಲ್ ಎನ್ನುವವರ ಸಹಾಯದಿಂದ ಕಲಘಟಗಿಯಲ್ಲಿ ತೊಟ್ಟಿಲು ಮಾಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಕಲಘಟಗಿ ತೊಟ್ಟಿಲು ಡಾಲಿ ಧನಂಜಯ್ ಮನೆ ತಲುಪಲಿದೆ.
ರಾಜ್ಯದ ಅನೇಕ ಕಡೆ ತೊಟ್ಟಿಲು ತಯಾರು ಮಾಡುವವರು ಇದ್ದಾರೆ. ಆದರೆ ಕಲಘಟಗಿ ಸಾವುಕಾರ್ ಕುಟುಂಬ ತಯಾರಿಸೊ ತೊಟ್ಟಿಲು ವಿಶೇಷ ಮತ್ತು ವಿಭಿನ್ನವಾಗಿರುತ್ತವೆ. ಸಾಗುವಾನಿ ಕಟ್ಟಿಗೆಯನ್ನು ಬಳಸಿ ತೊಟ್ಟಿಲು ತಯಾರು ಮಾಡಲಾಗುತ್ತದೆ. ಅದಕ್ಕೆ ಯಾವುದೇ ರಾಸಾಯಿನಿಕ ಮಿಶ್ರಿತ ಬಣ್ಣವನ್ನು ಬಳಯದೆ, ಸಾವುಕಾರ್ ಕುಟುಂಬ, ತಾವೇ ದೇಶಿಯವಾಗಿ ಸಿಗೋ ಅನೇಕ ವಸ್ತುಗಳನ್ನು ಬಳಿಸಿ ಬಣ್ಣವನ್ನು ತಯಾರು ಮಾಡಿ, ಅದರ ಲೇಪನ ಮಾಡುತ್ತಾರೆ. ಹೀಗೆ ಹಚ್ಚಿದ ಬಣ್ಣ ವರ್ಷಗಳವರಗೆ ಹಾಳಾಗದೇ ಉಳಿಯುತ್ತದೆ. ಜೊತೆಗೆ ಇಡೀ ತೊಟ್ಟಿಲಿಗೆ ರಾಮಾಯಣ, ಮಹಾಭಾರತದ ಅನೇಕ ದೃಶ್ಯಗಳ ಚಿತ್ರಗಳನ್ನು ಬಿಡಿಸಲಾಗುತ್ತದೆ. ಎಷ್ಟೇ ವರ್ಷಗಳ ಕಾಲ ಇಟ್ಟರೂ ಈ ತೊಟ್ಟಿಲು ಹಾಳಾಗದೇ ಉಳಿಯುತ್ತದೆ. ಹೀಗಾಗಿ ಕಲಘಟಗಿ ತೊಟ್ಟಿಲಿಗೆ ಎಲ್ಲಿದ ಬೇಡಿಕೆ. ಕೇವಲ ಕರ್ನಾಟಕ ಮಾತ್ರವಲ್ಲಾ, ದೇಶ ಮತ್ತು ಹೊರದೇಶಗಲ್ಲಿದ್ದವರು ಕೂಡಾ ಕಲಘಟಗಿ ತೊಟ್ಟಿಲನ್ನು ತಗೆದುಕೊಂಡು ಹೋಗಿದ್ದಾರಂತೆ. ಪ್ರಧಾನಿ ಮೋದಿ ಅವರಿಗೆ ಕೂಡಾ ಕಲಘಟಗಿ ತೊಟ್ಟಿಲನ್ನು ಸಾವುಕಾರ ಕುಟುಂಬ ಉಡುಗರೆಯಾಗಿ ನೀಡಿತ್ತು. ಒಂದು ತೊಟ್ಟಿಲು ಸಿದ್ದ ಮಾಡಲು ಸರಿಸುಮಾರು ಇಪ್ಪತ್ತು ದಿನದಿಂದ ಒಂದು ತಿಂಗಳ ಸಮಯವನ್ನು ಕುಟುಂಬ ತಗೆದುಕೊಳ್ಳುತ್ತದೆ. ತೊಟ್ಟಿಲು ಆರ್ಡರ್ ಮಾಡಿದವರಿಗೆ ಅಚ್ಚುಕಟ್ಟಾಗಿ ಸುಂದರವಾದ ತೊಟ್ಟಿಲುಗಳನ್ನು ಸಿದ್ದಮಾಡಿ ನೀಡುವ ಕೆಲಸವನ್ನು ಸಾವುಕಾರ್ ಕುಟುಂಬ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ