ಉಡುಪಿ, ಜೂನ್ 17: ರಾಜ್ಯದಲ್ಲಿ ಇತ್ತೀಚೆಗೆ ಸೈಬರ್ ವಂಚನೆ ಪ್ರಕರಗಳ ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಪೊಲೀಸರು ಚಾಪೆ ಕೆಳಗೆ ತೂರಿದರೆ ವಂಚಕರು ರಂಗೋಲಿ ಕೆಳಗೆ ನುಗ್ಗುವ ಕೆಲಸ ಮಾಡುತ್ತಿದ್ದಾರೆ. ಸೈಬರ್ ಫ್ರಾಡ್ಗಳೀಗ ನಾನಾ ರೂಪಗಳನ್ನು ಪಡೆದುಕೊಂಡಿದ್ದು, ಜನಸಾಮಾನ್ಯರನ್ನು ಸುಲಭವಾಗಿ ಯಾಮಾರಿಸುವ ಕೆಲಸಗಳು ನಡೆಯುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಉಡುಪಿಯಲ್ಲೊಂದು ಪ್ರಕರಣ ನಡೆದಿದೆ. ಡೆಬಿಟ್ ಕಾರ್ಡ್ ಮೂಲಕ ವಂಚನೆ ನಡೆಸಿರುವ ಖದೀಮರು ವ್ಯಕ್ತಿಯೋರ್ವರ ಖಾತೆಯಿಂದ ಬರೋಬ್ಬರಿ 2 ಲಕ್ಷ ರೂಪಾಯಿ ಹಣ ದೋಚಿದ್ದಾರೆ.
ದೂರುದಾರರು ಜೂನ್ 3ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ತಮ್ಮ ಡೆಬಿಟ್ ಕಾರ್ಡ್ ಬಳಸಿ ಆಸ್ಪತ್ರೆ ಬಿಲ್ ಪಾವತಿಸಿದ್ದರು. ಬಳಿಕ ಅವರು ಯಾವುದೇ ಹಣಕಾಸು ವ್ಯವಹಾರ ನಡೆಸಿರಲಿಲ್ಲ. ಹೀಗಿದ್ದರೂ ಜೂನ್ 8ರಂದು ಅವರ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿರುವ ಕುರಿತು ಎಸ್ಎಂಎಸ್ ಸಂದೇಶ ಬಂದಿದ್ದು, ಇದರಿಂದ ಅನುಮಾನಗೊಂಡ ಅವರು ಬ್ಯಾಂಕ್ಗೆ ತೆರಳಿ ವ್ಯವಹಾರಗಳ ವಿವರ ಪರಿಶೀಲಿಸಿದಾಗ ವಂಚನೆ ನಡೆದಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸಾವು ಹೀಗೂ ಬರಬಹುದು; ಉಡುಪಿಯಲ್ಲಿ ತೆಂಗಿನಕಾಯಿ ಬಿದ್ದು ಹಸುಗೂಸು ಸಾವು
ಪರಿಶೀಲನೆ ವೇಳೆ ಜೂನ್ 5ರಿಂದ 8ರ ನಡುವಿನ ಅವಧಿಯಲ್ಲಿ, ಅವರ ಅರಿವಿಲ್ಲದೆ 2.12 ಲಕ್ಷವನ್ನು ಅಪರಿಚಿತ ಖಾತೆಗೆ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.