ಕಾರವಾರ, (ಮೇ 24): ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ (Hakkalu River incident )ಮುಳುಗಿ 8 ಜನರು ಸಾವನ್ನಪ್ಪಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಒಟ್ಟು 14 ಜನರು ಒಂದಾಗಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದರವರು ನೀರಿಗೆ ಸಿಲುಕಿದ್ದು, ಎಂಟು ಜನರು ಜನರು ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರನ್ನ ರಕ್ಷಣೆ ಮಾಡಿದ್ದರೆ, ನಾಪತ್ತೆಯಾಗಿರುವ ಇನ್ನಿಬ್ಬರ ಪತ್ತೆಯಾಗಿ ಶೋಧ ಕಾರ್ಯ ಮುಂದುವರೆದಿದೆ. ಲಕ್ಷ್ಮೀ ಮಾದೇವ ನಾಯ್ಕ(38), ಲಕ್ಷ್ಮೀ ಶಿವರಾಮ್ ನಾಯ್ಕ(39), ಮಾಲತಿ ಜಟ್ಟಪ್ಪ ನಾಯ್ಕ(38), ಮಾಸ್ತಮ್ಮ ಮಂಜುನಾಥ ನಾಯ್ಕ(43), ಲಕ್ಷ್ಮೀ ನಾಯ್ಕ, ಲಕ್ಷ್ಮೀ ಅಣ್ಣಪ್ಪ ನಾಯ್ಕ(44), ಜ್ಯೋತಿ ನಾಯ್ಕ(37) ಉಮೇಶ್ ಮಂಜುನಾಥ ನಾಯ್ಕ(42) ಮೃತರು. ಮೃತರು ಒಂದೇ ಕುಟುಂಬದ ಪಡುಶಿರಾಲಿ ಶಾರದಹೊಳೆ ನಿವಾಸಿಗಳಾಗಿದ್ದಾರೆ.
ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದುಬಂದಿದ್ದು, ಒಟ್ಟು 14 ಜನರ ಈ ಪೈಕಿ ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನುಳಿದವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ನದಿ ಪ್ರದೇಶದಲ್ಲಿ ಅಪಾರ ಜನರು ಸೇರಿದ್ದು, ಉಳಿದವರಾದ್ರೂ ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಸಾಮಾನ್ಯವಾಗಿ ಮೀನುಗಾರಿಗೆ ಹೇಗೆ ನಡೆಯುತ್ತೋ ಹಾಗೇ ಕಪ್ಪೆಚಿಪ್ಪು ತೆಗೆಯಲು ನದಿ, ಸಮುದ್ರದ ನೀರು ಬತ್ತಿದಾಗ ಹೋಗುತ್ತಾರೆ. ಇಲ್ಲೂ ಸಹ ಇಡೀ ಕುಟುಂಬ ಕಪ್ಪೆಚಿಪ್ಪು ತೆಗೆಯಲು ತಟ್ಟೆಹಕ್ಕಲು ನದಿಗೆ ತೆರಳಿದ್ದರು. ಆದ್ರೆ, ನೀರಿನ ಆಳ ಗಮನಿಸದೇ ಕಪ್ಪೆಚಿಪ್ಪು ತೆಗೆಯಲು ಹೋಗಿರುವುದೇ ಇಷ್ಟು ದೊಡ್ಡ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ತಟ್ಟೆಹಕ್ಕಲು ನದಿಯಲ್ಲಿ ಘೋರ ದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ 8 ಜನ ಸಾವು, ಇಬ್ಬರು ನಾಪತ್ತೆ
5 ಲಕ್ಷ ರೂಪಾಯಿ ಘೋಷಿಸಿದ ಸಿಎಂ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ…
— Siddaramaiah (@siddaramaiah) May 24, 2026
ಕಪ್ಪೆಚಿಪ್ಪು ತರಲ ನದಿಗೆ ತೆರಳಿದ ಎಂಟು ಜನರು ನೀರುಪಾಲಾಗಿರುವ ಘಟನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಮೃತ ಆತ್ಮಕ್ಕೆ ಶಾಂತಿ ಕೋಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ದುರಂತದ ಬಗ್ಗೆ ಡಿಸಿ ಹೇಳಿದ್ದಿಷ್ಟು
ಇನ್ನು ದುರಂತದ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಪ್ರತಿಕ್ರಿಯಿಸಿದ್ದು, 14 ಜನರ ತಂಡ ತೆರಳಿದ್ದ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ 8 ಜನ ಮೃತಪಟ್ಟ ಮಾಹಿತಿ ಇದೆ. ಎನ್ಡಿಆರ್ಎಫ್ ಸಿಬ್ಬಂದಿಯನ್ನ ಸ್ಥಳಕ್ಕೆ ಕರೆಸಲಾಗಿದೆ. ಸ್ಥಳೀಯ ಪೊಲೀಸರು ಕೂಡ ಕಾರ್ಯಾಚರಣೆ ನಡೆಸ್ತಿದ್ದಾರೆ. ಸಂಜೆ ವೇಳೆಗೆ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದ್ದು, ನಾವು ಶೋಧ ಕಾರ್ಯಾಚರಣೆ ಚುರುಕುಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಹಿಂದೆ ಯಾವತ್ತೂ ಈ ರೀತಿ ಘಟನೆ ನಡೆದಿಲ್ಲ
ಈ ದುರಂತದ ಬಗ್ಗೆ ಟಿವಿ9ಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿದ್ದು, ಈ ದುರಂತ ನಡೆದಿರುವುದು ಇದೇ ಮೊದಲು. ಮಧ್ಯಾಹ್ನ 3 ಗಂಟೆಗೆ ದುರಂತ ಬಗ್ಗೆ ಗೊತ್ತಾಯ್ತು. ಈಗಾಗಲೇ ಮೀನುಗಾರರು, ಸ್ಥಳೀಯರು ಸಹಾಯಕ್ಕೆ ಹೋಗಿದ್ದಾರೆ. ತಟ್ಟೆಹಕ್ಕಲು ನದಿಯಲ್ಲಿ ಇದೇ ಮೊದಲ ಬಾರಿ ದುರಂತ ಸಂಭವಿಸಿದೆ. ನಾನು ನೋಡಿದಂತೆ ಹಿಂದೆ ಯಾವತ್ತೂ ಈ ರೀತಿ ಘಟನೆ ನಡೆದಿರಲಿಲ್ಲ. ತಟ್ಟೆಹಕ್ಕಲು ನದಿ 10 ಕಿ.ಮೀ. ಉದ್ದ ಇದೆ. ರಕ್ಷಣೆಗೊಳಗಾದ ಇಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ ಹೇಳಿದರು.