Headlines

ತಮಿಳುನಾಡಿನಲ್ಲಿ ಹೊಸ ಮೈತ್ರಿ ಪರ್ವ: ವಿಜಯ್ ನೇತೃತ್ವದ ಟಿವಿಕೆಗೆ ಕಾಂಗ್ರೆಸ್ ‘ಕೈ’ ಬಲ, ಸಂಪುಟದಲ್ಲಿ 2 ಸ್ಥಾನಕ್ಕೆ ಬೇಡಿಕೆ – Kannada News | Vijay’s TVK Congress Alliance Forms New Tamil Nadu Govt: 2 Cabinet Berths Demanded

ಚೆನ್ನೈ, ಮೇ 06: ತಮಿಳುನಾಡು ವಿಧಾನಸಭಾ ಚುನಾವಣೆ(Tamil Nadu Assembly Election)ಯಲ್ಲಿ ಭರ್ಜರಿ ಜಯ ಗಳಿಸಿರುವ ನಟ-ರಾಜಕಾರಣಿ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಬೆಂಬಲಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಈ ಮೈತ್ರಿಯೊಂದಿಗೆ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣಗಳು ಸೃಷ್ಟಿಯಾಗಿದ್ದು, ವಿಜಯ್ ಅವರು ಶೀಘ್ರದಲ್ಲೇ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ.

ಮೈತ್ರಿ ಮಾತುಕತೆ ಮತ್ತು ಸಚಿವ ಸ್ಥಾನ
ಮೂಲಗಳ ಪ್ರಕಾರ, ವಿಜಯ್ ನೇತೃತ್ವದ ನೂತನ ಸರ್ಕಾರದಲ್ಲಿ ಕಾಂಗ್ರೆಸ್ ಎರಡು ಸಚಿವ ಸ್ಥಾನಗಳನ್ನು ನಿರೀಕ್ಷಿಸುತ್ತಿದೆ.ಕಾಂಗ್ರೆಸ್ ನಾಯಕರಾದ ಗಿರೀಶ್ ಚೋಡಂಕರ್ ಮತ್ತು ಪ್ರವೀಣ್ ಚಕ್ರವರ್ತಿ ಅವರು ಟಿವಿಕೆ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ರಾಹುಲ್ ಗಾಂಧಿ ಅವರು ಮೊದಲೇ ಬೆಂಬಲದ ಒಲವು ಹೊಂದಿದ್ದರು, ಆದರೆ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಶಯದಂತೆ ತಮಿಳುನಾಡು ಹಿರಿಯ ಕಾಂಗ್ರೆಸ್ ನಾಯಕರ ಆನ್‌ಲೈನ್ ಸಭೆಯ ನಂತರ ಈ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮತ್ತಷ್ಟು ಓದಿ: Assembly Elections 2026: ಪಶ್ಚಿಮ ಬಂಗಾಳ, ತಮಿಳುನಾಡು ವಿಧಾನಸಭಾ ಚುನಾವಣೆ, ಮತದಾನ ಶುರು, ಯಾರ್ಯಾರ ನಡುವೆ ಪೈಪೋಟಿ

ಸಂಖ್ಯಾಬಲದ ಲೆಕ್ಕಾಚಾರ
234 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅವಶ್ಯಕತೆಯಿದೆ. 108 ಸ್ಥಾನಗಳನ್ನು ಗೆದ್ದಿರುವ ಟಿವಿಕೆಗೆ ಬಹುಮತಕ್ಕೆ 10 ಸ್ಥಾನಗಳ ಕೊರತೆಯಿತ್ತು. ಐದು ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಬೆಂಬಲದೊಂದಿಗೆ ಟಿವಿಕೆ ಬಲ ಈಗ 113ಕ್ಕೆ ಏರಿದೆ. ಬಹುಮತ ಸಾಬೀತುಪಡಿಸಲು ಡಿಎಂಕೆ ಮೈತ್ರಿಕೂಟದಲ್ಲಿದ್ದ ಸಿಪಿಐ (2 ಸ್ಥಾನ), ಸಿಪಿಎಂ (2 ಸ್ಥಾನ) ಮತ್ತು ವಿಸಿಕೆ (2 ಸ್ಥಾನ) ಪಕ್ಷಗಳ ಬೆಂಬಲವನ್ನು ಟಿವಿಕೆ ನಿರೀಕ್ಷಿಸುತ್ತಿದೆ.

ಸಂವಿಧಾನ ರಕ್ಷಣೆ ಮತ್ತು ಬಿಜೆಪಿ ವಿರೋಧ
ಬಿಜೆಪಿಯನ್ನು ರಾಜ್ಯದಿಂದ ದೂರವಿಡಲು ಮತ್ತು ಸಂವಿಧಾನವನ್ನು ರಕ್ಷಿಸಲು ಜಾತ್ಯತೀತ ಸರ್ಕಾರದ ಅಗತ್ಯವಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ತಮಿಳುನಾಡಿನ ಮಾಜಿ ಸಿಎಂ ಕಾಮರಾಜ್ ಅವರಿಂದ ಸ್ಫೂರ್ತಿ ಪಡೆಯುವ ಬಗ್ಗೆ ವಿಜಯ್ ಮಾತನಾಡಿರುವುದು ಮೈತ್ರಿಗೆ ಪೂರಕವಾಗಿದೆ.

ವಿಜಯ್ ಭಾವನಾತ್ಮಕ ಸಂದೇಶ
ಐತಿಹಾಸಿಕ ಜಯದ ನಂತರ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ವಿಜಯ್, ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ. ಪಕ್ಷ ಪ್ರಾರಂಭಿಸಿದಾಗ ನಮ್ಮ ವಿರುದ್ಧ ಮಾತನಾಡಿದವರನ್ನು ಜಯಿಸಿ, ಜನರನ್ನು ನಂಬಿ ಏಕಾಂಗಿಯಾಗಿ ನಿಂತು ಈ ಹಂತ ತಲುಪಿದ್ದೇವೆ ಎಂದು ಅವರು ಹೇಳಿದ್ದಾರೆ.
ನಮ್ಮನ್ನು ಯಾವಾಗಲೂ ತಾಯಿಯಂತೆ ಬೆಂಬಲಿಸಿದ ತಮಿಳುನಾಡಿನ ಜನರಿಗೆ ನಾನು ಜೀವಮಾನದ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.

ಈ ಭರ್ಜರಿ ಜಯವು ಕೇವಲ ಪಕ್ಷದ ಗೆಲುವಲ್ಲ, ಇದು ಪ್ರಜಾಪ್ರಭುತ್ವದ ಗೆಲುವು ಎಂದು ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಲಿರುವ ವಿಜಯ್, ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:28 am, Wed, 6 May 26

Source link

Leave a Reply

Your email address will not be published. Required fields are marked *